Kundapra.com ಕುಂದಾಪ್ರ ಡಾಟ್ ಕಾಂ

ಖಿನ್ನತೆಯಲ್ಲಿರುವವರ ಬಳಿ ಈ ಮಾತನಾಡಿ. ಅದೇ ಅವರಿಗೆ ಆತ್ಮವಿಶ್ವಾಸದ ಚಿಕಿತ್ಸೆ

‘ನಿನ್ನ ಕಷ್ಟ ನನಗೆ ಅರ್ಥವಾಗುತ್ತದೆ’ ಹೀಗೆ ನಾವು ಹೇಳುವ ಒಂದು ಚಿಕ್ಕ ವಾಕ್ಯ ಹಲವರ ಬದುಕಿನಲ್ಲಿ ಹೊಸ ಚೈತನ್ಯವನ್ನೇ ತುಂಬಬಹುದು. ನಮ್ಮ ಮಾತನ್ನು ಕೇಳಿಸಿಕೊಳ್ಳುವವರಿದ್ದಾರೆ. ನಮ್ಮ ನೋವಿಗೆ ಹೆಗಲಾಗುವವರಿದ್ದಾರೆ ಎಂಬ ಸಣ್ಣ ವಿಶ್ವಾಸವೂ ಕೂಡ ಮನುಷ್ಯನ ಬದುಕಿನ ದೊಡ್ಡ ಆತ್ಮವಿಶ್ವಾಸಕ್ಕೆ ದಾರಿಮಾಡಿಕೊಡಬಲ್ಲದು./ಕುಂದಾಪ್ರ ಡಾಟ್ ಕಾಂ/

ಕೀಳರಿಮೆ ಹೆಚ್ಚಾದಾಗ, ಪ್ರೀತಿಯಲ್ಲಿ ಸೋತಾಗ, ಉದ್ಯೋಗದಲ್ಲಿ ಅಂದುಕೊಂಡ ಯಶಸ್ಸು ಸಿಗದಾಗ, ಕಾಯಿಲೆಗಳು ಕಂಗೆಡಿಸಿದಾಗ, ಅವಮಾನದಿಂದ ಬೇಸತ್ತಾಗ… ಹೀಗೆ ಅನೇಕ ಕಾರಣಕ್ಕೆ ಜನರು ಖಿನ್ನತೆಗೆ ಜಾರುತ್ತಾರೆ. ನಮ್ಮ ಸುತ್ತಮುತ್ತಲಲ್ಲೇ ಹಲವರು ಖಿನ್ನತೆಯಿಂದ ನರಳುತ್ತಿರುತ್ತಾರೆ. ಅವರು ನಮ್ಮವರೇ ಆಗಿದ್ದಾಗ ಅವರನ್ನು ಸಮಾಧಾನ ಪಡಿಸಲು ಮನಸ್ಸು ಚಡಪಡಿಸಿದರೂ, ಏನು ಮಾತನಾಡಬೇಕೆಂಬುದು ಹಲವರಿಗೆ ತಿಳಿಯುವುದಿಲ್ಲ. ಇಂಥ ಸಂದರ್ಭದಲ್ಲಿ ಅವರಿಗೆ ಯಾವುದೇ ಕ್ಷಣ ಬೇಕಾದರೂ ನಾವಿರುವುದಾಗಿ ಅರಿವು ಮೂಡಿಸುವುದೇ ದೊಡ್ಡ ಬಲ.

ಖಿನ್ನತೆಯಲ್ಲಿರುವವರ ಬಳಿ ಎಂಥ ಮಾತುಗಳು ಕೆಲಸ ಮಾಡಬಹುದು ಎಂಬ ಅರಿವಿದ್ದರೆ, ಹತ್ತಿರದವರನ್ನು ಈ ವೇದನೆಯಿಂದ ಹೊರತರಲು ಸಹಾಯ ಆಗಬಹುದು. ನಿನಗೇನಾಗುತ್ತಿದೆ ಎಂದು ನನ್ನಲ್ಲಿ ಹೇಳಿಕೋ. ಅರ್ಥ ಮಾಡಿಕೊಳ್ಳುತ್ತೇನೆ. ಇದರಿಂದ ನಿನ್ನ ಮನಸ್ಸೂ ಹಗುರಾಗುತ್ತದೆ. ನಿನಗಿದರ ಬಗ್ಗೆ ಮಾತನಾಡಲು ಇಷ್ಟವಿಲ್ಲವಾದರೆ ಪರವಾಗಿಲ್ಲ. ನೀನು ಹೇಗೇ ಇದ್ದರೂ ನಿನ್ನೊಂದಿಗೆ ನಾನಿರುತ್ತೇನೆ. ಈ ಪರಿಸ್ಥಿತಿ ಸರಿಯಾಗುವುದೇ ಇಲ್ಲ ಎಂದು ಎನಿಸುತ್ತಿರಬಹುದು. ಆದರೆ ಕಾಲ ಕಳೆದಂತೆಲ್ಲ ಬಹಳಷ್ಟು ಬದಲಾಗುತ್ತದೆ. ಪ್ರತಿ ಕೆಟ್ಟ ಕಾಲಕ್ಕೂ ಒಂದು ಅಂತ್ಯ ಇರಲೇಬೇಕು. ಒಳ್ಳೆ ಕಾಲ ಬಂದೇ ಬರುತ್ತದೆ, ಕಾಯೋಣ.’

ಕೆಲವೊಮ್ಮೆ ಬದುಕಿನಲ್ಲಿ ಹಿನ್ನಡೆಯಾಗುತ್ತದೆ. ಆದರೆ ನಾಳೆ ಎಂಬುದು ಇದ್ದೇ ಇದೆಯಲ್ಲ. ಪ್ರತಿ ನಾಳೆಯಲ್ಲೂ ಬಹಳಷ್ಟು ಅವಕಾಶಗಳಿರುತ್ತವೆ. ಆಗ ಗೆಲ್ಲಬಹುದು. ನಿನಗೆ ಬೆಂಬಲ ಬೇಕೆಂದರೆ ನಾನು ನಿನ್ನೊಂದಿಗೆ ಬರುತ್ತೇನೆ. ಬಾ ಇಬ್ಬರೂ ಹೊರ ಹೋಗಿ ಬರೋಣ.’ ನಿನಗೆ ಹೇಗೆನಿಸುತ್ತಿದೆಯೋ ಅದರಲ್ಲಿ ನಿನ್ನ ತಪ್ಪಿಲ್ಲ. ಅದಕ್ಕಾಗಿ ಯಾರೂ ನಿನ್ನನ್ನು ದೂಷಿಸುವುದಿಲ್ಲ. ಎಲ್ಲರಿಗೂ ಒಮ್ಮೊಮ್ಮೆ ಹೀಗಾಗುತ್ತದೆ. ನೀನು ಕೂಡಾ ನಿನ್ನನ್ನು ದೂಷಿಸಿಕೊಳ್ಳುವುದು, ವೃಥಾ ಪಶ್ಚಾತ್ತಾಪ ಪಟ್ಟುಕೊಳ್ಳುವುದು ಬಿಡಬೇಕು ನೀನೇನು ಒಂಟಿಯಲ್ಲ. ನನಗೆ ನೀನೆಂದರೆ ಇಷ್ಟ. ನೀನು ಮುಂಚಿನಂತಾಗಬೇಕು ‘ಏನು ಮಾಡಬೇಕೆನಿಸುತ್ತಿದೆ ಹೇಳು? ನಾನು ಜೊತೆಗೂಡುತ್ತೇನೆ. ನಿನಗೆ ಇಷ್ಟ ಬಂದಂತೆ ಮಾಡೋಣ. ‘/ಕುಂದಾಪ್ರ ಡಾಟ್ ಕಾಂ/

ಹೀಗೆ ನಾವಾಡುವ ಸಾಮಾನ್ಯ ಪದಗಳೆ ಖಿನ್ನತೆಗೆ ಒಳಗಾದವರಲ್ಲಿ ಧೈರ್ಯ, ಸ್ಥೈರ್ಯ ತುಂಬಲಿದೆ. ನಮ್ಮೊಂದಿಗೆ ಯಾರೋ ಒಬ್ಬರು ಇದ್ದಾರೆ ಎಂಬ ಭಾವನೆ ಬಂದರೆ ಸಾಕು ಮನಸ್ಸು ದೃಢವಾಗುತ್ತದೆ. ಏಕಾತನತೆಯಿಂದ ಹೊರಬರಲು, ಪ್ರಪಂಚದ ಆಗುಹೋಗುಗಳಿಗೆ ತೆರೆದುಕೊಳ್ಳಲು ಆರಂಭಿಸುತ್ತದೆ. ಹಾಗಾಗಿಯೇ ನಮ್ಮಿಂದ ಏನು ಸಾಧ್ಯವಿಲ್ಲದಿದ್ದರೂ ಹೀಗೆ ಖಿನ್ನತೆಯಿಂದ ಇರುವ ವ್ಯಕ್ತಿಗಳಿದ್ದರೆ ಅವರಿಗಾಗಿ ಒಂದಿಷ್ಟು ಸಮಯ ಕೊಡೋಣ.

ಕುಂದಾಪ್ರ ಡಾಟ್ ಕಾಂ ಲೇಖನ

Exit mobile version