Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆಯಲ್ಲಿ ಸಂಪೂರ್ಣ ಲಾಕ್‌ಡೌನ್: ವಾರದಲ್ಲಿ ಎರಡು ದಿನ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮೇ 29ರಿಂದ ಜೂನ್ 07ರ ವರೆಗೆ ಸೆಲ್ಪ್ ಲಾಕ್‌ಡೌನ್ ಮಾಡಿ ಕೇವಲ ಸೋಮವಾರ ಮತ್ತು ಗುರುವಾರ ಬೆಳಿಗ್ಗೆ 6ರಿಂದ 10ಗಂಟೆ ವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ಬಗ್ಗೆ ಗ್ರಾಮ ಪಂಚಾಯತ್ ಟಾಸ್ಕ್‌ಪೋರ್ಸ್ ಸಭೆಯಲ್ಲಿ ನಿರ್ಣಯಿಸಲಾಯಿತು.

ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಟಾರ್ಸ್ ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಹಲವು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ವಾರದಲ್ಲಿ ಐದು ದಿನ ದಿನಗಳಲ್ಲಿ ಅಂಗಡಿ ತೆರೆಯದೆ ಅಂಗಡಿ ಮಾಲಕರೇ ಹೋಂ ಡೆಲಿವರಿ ನೀಡಲು ಅವಕಾಶ ಮಾಡಿಕೊಡುವುದು, ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಅವಕಾಶ ನೀಡುವುದು. ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವುದು, ಹೊರ ಜಿಲ್ಲೆಯಿಂದ ಬಂದವರ ಬಗ್ಗೆ ನಿಗಾ ಇರಿಸಿ ಕೊರೋನಾ ಪರೀಕ್ಷೆ ಮಾಡಿಸುವುದು, ಲಸಿಕೆ ಪ್ರಮಾಣ ಹೆಚ್ಚಳ ಮಾಡುವುದು, ಆಸ್ಪತ್ರೆಯಲ್ಲಿ ಸ್ಥಳದ ಅಭಾವ ಇರುವುದರಿಂದ ಸ್ಥಳೀಯ ಶಾಲೆಯಲ್ಲಿ ಲಸಿಕೆ ನೀಡುವುದು, ಮನೆ ಮನೆಗೆ ತೆರಳಿ ಪರೀಕ್ಷಿಸಲು ವಾಹನ ವ್ಯವಸ್ಥೆ ಯೊಂದಿಗೆ ಪ್ರತ್ಯೇಕ ತಂಡ ರಚಿಸುವುದು, ಪಂಚಾಯತ್ ವ್ಯಾಪ್ತಿಯ ಪ್ರತಿಯೊಬ್ಬರನ್ನೂ ಪರೀಕ್ಷೆಗೊಳಪಡಿಸುವುದು.

ಹೋಂ ಐಸಿಲೋಶನಲ್ಲಿ ಇರುವವರ ಮನೆಗೆ ಪ್ರತಿನಿತ್ಯ ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ್ ಸಿಬ್ಬಂದಿ ಭೇಟಿ ನೀಡುವುದು. ನಿಯಮಿತವಾಗಿ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಹಾಯಕರು ಭೇಟಿ ನೀಡುವುದು. ಸೋಂಕಿತರು, ಪ್ರಥಮ ಸಂಪರ್ಕಿತರು ಮನೆಯಿಂದ ಹೊರಗೆ ಬರದಂತೆ ಮನೆಯನ್ನು ಸೀಲ್ ಡೌನ್ ಮಾಡುವುದು. ಈಗಾಗಲೇ ಪ್ರತೀ ವಾರ್ಡ್ ಗೆ ಇಬ್ಬರು ಸ್ವಯಂಸೇವಕರನ್ನು ನೇಮಕ ಮಾಡಿದ್ದು ಸೀಲ್ ಡೌನ್ ಮಾಡಲಾದ ಪ್ರತೀ ಮನೆಗೆ ಅವರಿಂದ ಅಗತ್ಯ ವಸ್ತುಗಳನ್ನು ತಲುಪಿಸುವುದು. ಇದಕ್ಕೆ ಬೇಕಾದ ವಾಹನ ವ್ಯವಸ್ಥೆ ಪಂಚಾಯತ್ ನಿಂದ ಮಾಡುವುದು. ಈಗಾಗಲೇ ಹೋಂ ಐಸೋಲೇಶನ್‌ನಲ್ಲಿ ಇರುವವರ ಮನೆಗೆ ಪಂಚಾಯತ್‌ನಿಂದ ಪಲ್ಸ್ ಆಕ್ಸಿಮೀಟರ್ ನೀಡಿದ್ದು ಅಗತ್ಯವಿದ್ದರೆ ಇನ್ನಷ್ಟು ಖರೀದಿಸುವುದು. ಹೊರಗಿನಿಂದ ಬಂದವರು ಯಾರಿಗಾದರೂಉದ್ಯೋಗ ಖಾತರಿಯಲ್ಲಿ ಆಸಕ್ತಿ ಇದ್ದರೆ ಮರುದಿನವೇ ಕೆಲಸ ನೀಡುವುದು, ತಂದೆ ತಾಯಿ ಇಬ್ಬರೂ ಪಾಸಿಟಿವ್ ಆಗಿದ್ದು ಮಗು ನೆಗೆಟಿವ್ ಆದಂತ ಸಂದರ್ಭದಲ್ಲಿ ಮಕ್ಕಳನ್ನು ಆರೈಕೆ ಮಾಡುವವರು ಇಲ್ಲದಿದ್ದರೆ ನಮ್ಮ ಭೂಮಿ ಸಂಸ್ಥೆ ಕನ್ಯಾನ ಇಲ್ಲಿ ಇರಿಸಿ ಆರೈಕೆ ಮಾಡುವುದು. ಹೆಲ್ಪ್ ಲೈನ್ 9480878283 ಇದನ್ನು ದಿನದ 24 ಗಂಟೆ ಬಳಸಲು ಅವಕಾಶ ಮಾಡಿಕೊಡುವುದು ಸೇರಿದಂತೆ ಹಲವು ನಿರ್ಣಯಗಳನ್ನು ತಗೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಗ್ರಾ. ಪಂ. ಉಪಾಧ್ಯಕ್ಷೆ ಗೀತಾ ಅವಿನಾಶ್, ಸದಸ್ಯರಾದ ಪ್ರಶಾಂತ್ ಪೂಜಾರಿ ವಂಡ್ಸೆ, ಶಶಿಕಲಾ, ಸುಬ್ಬು, ಗೋವರ್ದನ್ ಜೋಗಿ, ಸುಶೀಲ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸನ್ಮಾನ್ ಶೆಟ್ಟಿ, ಕೊಲ್ಲೂರು ಪಿಎಸ್‌ಐ ನಾಸಿರ್ ಹುಸೇನ್, ವಿ.ಎ ವಿಘ್ನೇಶ್, ಶಾಲಾ ಮುಖ್ಯೋಪಾಧ್ಯಾಯ ಚಂದ್ರ ನಾಯ್ಕ್, ಆರೋಗ್ಯ ಸಹಾಯಕಿ ಪಾರ್ವತಿ ಪಟಗಾರ್, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ರೂಪ ಗೋಪಿ, ಸ್ತ್ರೀಶಕ್ತಿ ಸಂಘಗಳ ಜುಲೈಕಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.

Exit mobile version