Site icon Kundapra.com ಕುಂದಾಪ್ರ ಡಾಟ್ ಕಾಂ

ಅಂಬೇಡ್ಕರ್ ಬೇಡಿಕೆಯಿಟ್ಟಿದ್ದು, ಪ್ರತ್ಯೇಕ ಮತದಾನ ಹೊರತು ಮೀಸಲಾತಿ ಅಲ್ಲ

ಬೈಂದೂರು: ಡಾ. ಬಿ.ಆರ್ ಅಂಬೇಡ್ಕರ್ ದಲಿತರ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೇ ರಾಜಕೀಯವಾಘಿ ಬೆಳೆಯಬೇಖು ಎಂದು ಮನಗಂಡ ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕನ್ನು ಕೇಳಿದ್ದರೇ ಹೊರತು ಮೀಸಲಾತಿಯನ್ನಲ್ಲ, ಆದರೆ ಅದನ್ನು ಮೇಲ್ವರ್ಗದವರು ಕಸಿದುಕೊಂಡಿದ್ದಾರೆ, ದಲಿತರಿಗೆ ಪ್ರತ್ಯೇಕ ಮತದಾನವನ್ನೇ ನಿಡಿದ್ದರೇ, ನಾವೇ ದೇಶದ ಆಡಳಿತ  ನಡೆಸುತ್ತಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ಜಯನಾಂದ ಮಲ್ಪೆ ಹೇಳಿದರು.

ಯಡ್ತರೆ ಪಂಚಾಯತ್ ಸಭಾಭವನದಲ್ಲಿ ದಲಿತ ಸಂಘರ್ಷ ಸಮಿತಿಯ ಬೈಂದೂರು ವಲಯದ ಶಾಖೆ ಉದ್ಘಾಟನೆ ಹಾಗೂ ವಲಯ ಮಟ್ಟದ ಗ್ರಾಮ ಶಾಖೆಗಳ ಪಧಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಭೋಧಿಸಿ ಮಾತನಾಡಿದರು.

ತಲೆತಲಾಂತರಗಳಿಂದ ತುಳಿತಕ್ಕೆ ಒಳಗಾಗಿದ್ದ ದಲಿತ ಸಮುದಾಯ ಸ್ವಾಭಿಮಾನದ ಬದುಕನ್ನು ನಡೆಸುವಂತಾಗಬೇಕೆಂದು ಹೋರಾಟ ನಡೆಸಿದರು, ಆದರೆ ಈಗ ನಾವು ಅಂಬೇಡ್ಕರ್ ಅವರನ್ನು ಮರೆಯುತ್ತಿದ್ದೇವೆ. ಇದು ವಿಷಾಧನೀಯ ಸಂಗತಿಯಾಗಿದ್ದು, ಅಂಬೇಡ್ಕರ್ ಆಶಯ ಮರೆತರೆ ಸಮಾಜಕ್ಕೆ ಗಂಡಾಂತರ ಕಾದಿದೆ ಎಂದು ಎಚ್ಚರಿಸಿದರು.

 ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು, ಆದರೆ ಈಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿಯನ್ನು ನೋಡಿದಾಗ ನೋವಾಗುತ್ತಿದೆ, ದಲಿತರ ಹಕ್ಕಿಗಾಗಿ ಹೋರಾಟ ನಡೆಸಿದಾಗ ಸರ್ಕಾರದಿಂದ ಹೋರಾಟ ಮಟ್ಟಹಾಕುವ ಯತ್ನ ನಡೆಯುತ್ತಿದೆ ಎಂದು ಅವರು ಆಪಾದಿಸಿದ್ದಾರೆ.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ದಲಿತರು ತಮ್ಮ ಹಕ್ಕನ್ನು ಪಡೆಯಬೇಕಾದರೆ ಸಂಘಟನೆಗಳು ಜೀವಂತವಾಗಿರಬೇಕು. ಇಂದು ರಾಜ್ಯದಲ್ಲಿ ಹಿಂದುಳಿದ ಸಮುದಾಯ ಶೇ. ೭೦ ರಷ್ಟು ಇದ್ದರೂ ರಾಜಕೀಯ ಶಕ್ತಿಯಾಗಿ ಬೆಳೆಯದೇ ಇರುವುದು ವಿಪರ‍್ಯಾಸದ ಸಂಗತಿಯಾಗಿದೆ ಎಂದರು.

ಕುಂದಾಪುರ ತಾಲೂಕು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಕೆ.ಸಿ. ರಾಜು ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಶ್ಯಾಮ್ ರಾಜ್ ಬಿರ್ತಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ದರು. ದಲಿತ ಮುಖಂಡ ನಾರಾಯಣ ಮಣೂರು, ಜಿಲ್ಲಾ ಸಂಘಟನಾ ಸಮಿತಿಯ ವಕೀಲ ಟಿ. ಮಂಜುನಾಥ ಗಿಳಿಯಾರು, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಚಂದ್ರ ಹಳಗೇರಿ, ವಸುದೇವ ಮುದೂರು, ಉಡುಪಿ ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಹಾಲಿಂಗ ಕೋಟ್ಯಾನ್, ಕಾರ್ಕಳ ತಾಲೂಕು ಸಂಚಾಲಕ ರಾಘವ ವಕೀಲ, ಕುಂದಾಪುರ ತಾಲೂಕು ಸಂಚಾಲಕ ಗಿರೀಶ್ ಕುಮರ ಗಂಗೊಳ್ಳಿ, ಮುಖಂಡರಾದ ಸುಂದರ ಕಪ್ಪಟ್ಟು, ಗೋಪಾಲ ಕೆಳಂಜೆ, ಶ್ಯಾಮ ಸುಂದರ ತೆಕ್ಕಟ್ಟೆ, ವಿಠ್ಠಲ್, ಮಾಜಿ ಜಿ.ಪಂ. ಸದಸ್ಯ ಮದನ ಕುಮಾರ, ಬೈಂದೂರು ವಲಯ ಸಂಚಾಲಕ ನರಸಿಂಹ ಹಳಗೇರಿ, ಸಂಘಟನಾ ಸಂಚಾಲಕರಾದ ನಾಗರಾಜ ಉಪ್ಪುಂದ, ನರಸಿಂಹ ಬಾಡ, ಅಣ್ಣಪ್ಪ ಬೈಂದೂರು ಉಪಸ್ಥಿತರಿದ್ದರು. ಕೋಶಾಧಿಕಾರಿ ವೆಂಕಪ್ಪ ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಸತ್ಯನಾ ಕೊಡೇರಿ ನಿರೂಪಿಸಿದರು.

Exit mobile version