Kundapra.com ಕುಂದಾಪ್ರ ಡಾಟ್ ಕಾಂ

ಆತ್ಮ ಸಂತೃಪ್ತಿಗಾಗಿ ಸಂಕಷ್ಟದ ಸಮಯದಲ್ಲಿ ಸ್ಪಂದನೆ: ಸಂಸದ ಬಿ. ವೈ. ರಾಘವೇಂದ್ರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶ ಹಾಗೂ ಜನರು ಸಂಕಷ್ಟದಲ್ಲಿರುವಾಗ ಅವರಿಗೆ ಸ್ಪಂದಿಸಬೇಕಿರುವುದು ನಮ್ಮ ಕರ್ತವ್ಯವಾಗಿದ್ದು ರಾಜಕೀಯದ ಹೊರತಾಗಿ ಆತ್ಮಸಂತೃಪ್ತಿಗಾಗಿ ಅತಿ ಅಗತ್ಯವುಳ್ಳವರಿಗೆ ಆಹಾರದ ಕಿಟ್ ನೀಡಲಾಗುತ್ತಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.

ಅವರು ಸೋಮವಾರ ಮಾರಣಕಟ್ಟೆ, ಸಿದ್ಧಾಪುರ, ಅಂಪಾರು ಹಾಗೂ ತ್ರಾಸಿಯಲ್ಲಿ ಕೊರೋನಾ ವಾರಿಯರ್ಸ್ ಹಾಗೂ ವಿವಿಧ ವೃತ್ತಿಯಲ್ಲಿ ತೊಡಗಿಕೊಂಡಿರುವವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿ ಮಾತನಾಡಿ ಕೇಂದ್ರ ನರೇಂದ್ರ ಮೋದಿ ಅವರ ಸರಕಾರ ದೇಶಕ್ಕೆ ಎದುರಾದ ಕೋವಿಡ್ ಪರಿಸ್ಥಿತಿಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದೆ. ರಾಜ್ಯದಲ್ಲಿಯೂ ಕೋರೊನಾ ನಿರ್ವಹಣೆ ಹಾಗೂ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಪ್ಯಾಕೇಜ್‌ಗಳನ್ನು ನೀಡುವ ಮೂಲಕ ಜನಸಾಮಾನ್ಯರೊಂದಿಗೆ ಸರಕಾರ ನಿಂತಿದೆ ಎಂದರು.

ಸೇವಾ ಭಾರತಿ ಹಾಗೂ ಪ್ರೇರಣಾ ಎಜುಕೇಷನಲ್ ಟ್ರಸ್ಟ್ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 16 ವಿಭಾಗದ ಜನರಿಗೆ ಒಟ್ಟು 35000 ಕಿಟ್‌ಗಳನ್ನು ವಿತರಿಸಲಾಗುತ್ತಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರದ 5000 ಜನರಿಗೆ ಆಹಾರದ ಕಿಟ್ ನೀಡಲಾಗುತ್ತಿದೆ ಎಂದರು.

ಈ ಸಂದರ್ಭ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ ಸುಕುಮಾರ ಶೆಟ್ಟಿ, ಸೇವಾ ಭಾರತಿ ಪ್ರಮುಖರಾದ ಪ್ರಕಾಶ್ ಜಿ, ವಿವಿಧ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

 

Exit mobile version