Kundapra.com ಕುಂದಾಪ್ರ ಡಾಟ್ ಕಾಂ

ಸದಾ ಸುಖಿಯಾಗಿರೋಕೆ ಪಾಲಿಸಿ ಈ ಐದು ಸೂತ್ರ!

ಬದುಕಿನಲ್ಲಿ ಪ್ರತಿಯೊಬ್ಬರು ಸುಖಿಯಾಗಿರಲು ಬಯಸುತ್ತಾರೆ. ಆದರೆ ಒಂದಿಲ್ಲೊಂದು ಕಾರಣದಿಂದ ಅವರು ತಮ್ಮ ಬದುಕಿನ ಸಂತೋಷದ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಹಾಗೆ ಮಿಸ್ ಮಾಡಿಕೊಳ್ಳಬಾರದ ಈ ಐದು ಅಂಶಗಳು ನಿಮ್ಮ ಸುಖಿ ಜೀವನದ ಕೀಲಿಕೈ ಆಗಲಿದೆ.

ಪ್ರೀತಿಸಿ:
ನಮಗೆ ತುಂಬಾ ಖುಷಿಯನ್ನು ಕೊಟ್ಟ ಕ್ಷಣಗಳು ಯಾವುದು ಅಂತ ಒಮ್ಮೆ ನೆನಪು ಮಾಡಿಕೊಳ್ಳಿ. ಅಮ್ಮನ ಜೊತೆ ಹಾಡು ಗುನುಗುತ್ತ ಕಳೆದ ಸಂಜೆ, ಅಪ್ಪನ ಕೈ ಹಿಡಿದು ಜಾತ್ರೆಗೆ ಹೋದ ದಿನ, ತಂಗಿಯ ಜೊತೆಗೆ ಜಾರುಬಂಡಿ ಆಟವಾಡಿ ದಣಿದ ದಿನ, ಅಕ್ಕನ ಜೊತೆಗೆ ಒಂದೇ ಕೊಡೆಯಲ್ಲಿ ಜೋರು ಮಳೆಯ ದಿನ ಶಾಲೆಯಿಂದ ಬಂದ ಸಂಜೆ, ಹೆಂಡತಿಯ ಜೊತೆಗೆ ಹನಿಮೂನ್ ಹೋದಾಗ ಕಳೆದ ಕ್ಷಣಗಳು, ಮಗಳು ತನ್ನ ಮೊದಲ ತೊದಲು ಮಾತಿನಿಂದ ಅಪ್ಪಾ- ಅಮ್ಮಾ ಅಂತ ಕರೆದಾಗ ಆದ ಭಾವುಕ ಕ್ಷಣ ಇತ್ಯಾದಿ. ಇಲ್ಲೆಲ್ಲಾ ನಮ್ಮ ಸಂಬಂಧಗಳೇ ನಮ್ಮ ಖುಷಿಗೆ ಮೂಲವಾಗಿರುವುದನ್ನು ನೀವು ನೋಡಬಹುದು. ಹಾಗೇ ನಿಮ್ಮ ಸಂಬಂಧದಲ್ಲೂ ನಿಮ್ಮ ಕೆರಿಯರ್ನಲ್ಲೂ ಇನ್ನೊಬ್ಬರನ್ನು ಅತ್ಯಂತ ಕಾಳಜಿಯಿಂದ, ಪ್ರೀತಿಯಿಂದ ನೋಡಿ. ಅವರು ಯಾವುದಾದರೂ ಸಮಸ್ಯೆಯಲ್ಲಿ ಸಿಕ್ಕಿಬಿದ್ದಿದ್ದಾಗ ಅಥವಾ ಯಾವುದಾದರೂ ಕಾರ್ಯಕ್ರಮದಲ್ಲಿ ನಿಮ್ಮ ಸಹಾಯ ಅಗತ್ಯವಿದ್ದಾಗ ನೀವೇ ಮುಂದಾಗಿ ಹೋಗಿ ಅವರಿಗೆ ಸಹಾಯ ಮಾಡಿ. ಅವರಾಗಿ ಕೇಳಲಿ ಎಂದು ಎಂದೂ ಬಯಸಬೇಡಿ. ಮನಶ್ಶಾಸ್ತ್ರಜ್ಞರು ಹೇಳುವ ಪ್ರಕಾರ, ಒಂದು ವೇಳೆ ನೀವೇ ಡಿಪ್ರೆಶನ್ನಲ್ಲಿದ್ದರೂ, ಮುಂದಾಗಿ ನೀವೇ ಹೋಗಿ ಇನ್ನೊಬ್ಬರಿಗೆ ಸಹಾಯ ಮಾಡುವುದು, ನೆರವಾಗುವುದರಿಂದ ನಿಮ್ಮ ಡಿಪ್ರೆಶನ್ ಕಡಿಮೆಯಾಗುತ್ತದೆ. ಒಬ್ಬನೇ ಇರುವುದು ಖಿನ್ನತೆಯನ್ನು ಹೆಚ್ಚು ಮಾಡುತ್ತದೆ. ಪ್ರತಿದಿನ ಮೂರಾದರೂ ಒಳ್ಳೆಯ ಕೆಲಸ ಮಾಡುತ್ತೇನೆ, ಕುಟುಂಬದವರನ್ನು ಸಂತೋಷವಾಗಿಡುತ್ತೇನೆ ಎಂದುಕೊಳ್ಳಿ. ಆಗ ಖುಷಿ ತಾನಾಗಿಯೇ ಮೂಡುತ್ತದೆ.

ನಂಬಿಕೆ:
ಎಷ್ಟೋ ಅಧ್ಯಯನಗಳು ಖಚಿತಪಡಿಸಿರುವಂತೆ, ದೇವರಲ್ಲೋ ಒಂದು ಬಗಯೆ ವಿಶ್ವಚೈತನ್ಯದಲ್ಲೋ ಗಾಢವಾದ ನಂಬಿಕೆಯನ್ನು ಇಟ್ಟುಕೊಂಡವರು ಹೆಚ್ಚು ವರ್ಷ ಬದುಕುತ್ತಾರೆ ಮತ್ತು ತುಂಬ ಖುಷಿಯಿಂದ ಬದಕುತ್ತಾರೆ. ನಿಮಗೇನು ಸಂಭವಿಸುತ್ತದೋ, ಅದರಲ್ಲೆಲ್ಲಾ ದೇವರು ಒಂದು ಸಂದೇಶವನ್ನು ನಿಮಗಾಗಿ ಇಟ್ಟಿರುತ್ತಾನೆ ಎಂಬುದನ್ನು ಗಾಢವಾಗಿ ನಂಬಿರಿ. ಇದನ್ನು ನಂಬಿ ಪರೀಕ್ಷಿಸಲು ಹೊರಟರೆ ನಿಜವಾಗುವುದನ್ನು ಕಣ್ಣಾರೆ ಕಾಣುವಿರಿ. ಕೆಲವೊಮ್ಮೆ ನೀವು ಕೈಗೊಂಡ ಕೆಲಸಗಳು ಕೈಗೂಡದೆ ವಿಫಲವಾಗಬಹುದು. ಅಂಥ ಸಂದರ್ಭದಲ್ಲಿ ಬೇಸರವಾಗುವುದು, ಸಿಟ್ಟು ಬರುವುದು ಸಹಜ. ಆದರೆ ಅದನ್ನೆಲ್ಲ ಬದಿಗಿಟ್ಟು, ಒಮ್ಮೆ, ಇದರ ಮೂಲಕ ದೇವರು ನನಗೇನು ಸಂದೇಶ ಕೊಡಲು ಹೊರಟಿದ್ದಾನೆ ಎಂದು ಕೇಳಿಕೊಳ್ಳಿ. ಕೆಲವೊಮ್ಮೆ ಗುಣಪಡಿಸಲಾಗದ ಕಾಯಿಲೆಗಳೂ ಕೆಲವರನ್ನು ಕಾಡಬಹುದು. ಅಂಥವರು ದೇವರಲ್ಲಿ ಅಪರಿಮಿತ ಶ್ರದ್ಧೆ ಇಟ್ಟವರಾಗಿದ್ದರೆ, ಜೀವನದ ಕೊನೆಯವರೆಗೂ ನಗುನಗುತ್ತ ಇದ್ದುದನ್ನು ನಾವು ಕಂಡಿದ್ದೇನೆ. ಕ್ಯಾನ್ಸರ್ ಪೇಷೆಂಟ್ಗಳು ಕೂಡ, ದೇವರಲ್ಲಿ ಶ್ರದ್ಧೆ ಹಾಗೂ ಹಾಸ್ಯಪ್ರಜ್ಞೆ ಹೊಂದಿದ್ದರೆ ತಾವೂ ಖುಷಿಯಾಗಿದ್ದು ತಮ್ಮ ಸುತ್ತಮುತ್ತಲಿನವರನ್ನೂ ನಗುನಗಿಸುತ್ತಾ ಇದ್ದು ತೆರಳುತ್ತಾರೆ. ದೇವರಲ್ಲಿ ಇವರ ಬಗ್ಗೆ ವಿಶೇಷವಾದ ಪ್ರೀತಿ ಇರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಉದ್ದೇಶ:
ಜೀವನಕ್ಕೊಂದು ಉದ್ದೇಶವಿರಲಿ. ಯಾವ ಉದ್ದೇಶವೂ ನಿಮಗೆ ಇಲ್ಲವಾದರೆ, ಪ್ರತಿಯೊಂದರಲ್ಲೂ ಕೊರತೆ ಕೊಂಕುಗಳನ್ನು ಹುಡುಕುತ್ತಾ ಇರುತ್ತೀರಿ. ಅದರಿಂದಾಗಿ ದಿನವಿಡೀ ಕಿರಿಕಿರಿ ಮಾಡಿಕೊಳ್ಳುತ್ತಾ ರೇಗುತ್ತಾ ಇರುತ್ತೀರಿ. ಜೀವನದಲ್ಲೊಂದು ಪ್ರಮುಖ ಉದ್ದೇಶ ನಿಮಗಿದ್ದರೆ, ಅಂಥ ಸಣ್ಣಪುಟ್ಟದಕ್ಕೆಲ್ಲಾ ಕಿರಿಕಿರಿ ಮಾಡಿಕೊಳ್ಳಬೇಕು ಎಂದು ನಿಮಗೆ ಕಾಣುವುದೇ ಇಲ್ಲ. ಯಾಕೆಂದರೆ ಇದಕ್ಕಿಂತ ಘನವಾದುದು ಯಾವುದು ಎಂಬುದು ನಿಮಗೆ ತಿಳಿದೇ ಇರುತ್ತದೆ ಮಕ್ಕಳಿಲ್ಲ ಮಕ್ಕಳಾಗುತ್ತಿಲ್ಲ ಎಂದು ಕೊರಗಿದವರು ಮಕ್ಕಳನ್ನು ದತ್ತು ತೆಗೆದುಕೊಂಡ ಬಳಿಕ, ಆ ಮಗುವಿನ ಜೀವನಕ್ಕಾಗಿ ತಮ್ಮ ಜೀವನ ಸವೆಸುತ್ತಾರೆ. ಹಾಗೇ ಕೋಟಿಗಟ್ಟಲೆ ಗಳಿಸಿದ ಶ್ರೀಮಂತರು ಅದನ್ನು ತೀರಾ ಬಡವರ ಕಲ್ಯಾಣಕ್ಕಾಗಿ ಖರ್ಚು ಮಾಡಲು ತೀರ್ಮಾನಿಸಿದರೆ ಅವರಷ್ಟು ಖುಷಿಯಾದವರು ಇನ್ನೊಬ್ಬರಿರುವುದಿಲ್ಲ. ಖುಷಿ ಇರುವುದು ಸಂಪಾದನೆಯಲ್ಲಲ್ಲ, ಅದನ್ನು ನೀವು ಯಾವ ಉದಾತ್ತ ಉದ್ದೇಶಕ್ಕೆ ಖರ್ಚು ಮಾಡುತ್ತೀರಿ ಎಂಬುದರಲ್ಲಿ.

ಕೃತಜ್ಞತೆ:
ನೀವೀಗ ಇದನ್ನು ಓದುತ್ತಿದ್ದೀರಿ ಎಂದಿದ್ದರೆ ನಿಮಗೆ ಒಳ್ಳೆಯ ಕಣ್ಣಿನ ದೃಷ್ಟಿ ಇದೆ; ಇದನ್ನು ಓದಲು ಸಮಯವಿದೆ; ಆರೋಗ್ಯವಿದೆ ಹೀಗಾಗಿ ನಿಮ್ಮ ಕಣ್ಣು, ಆರೋಗ್ಯ, ಸಮಯ ಮತ್ತು ಇದೆಲ್ಲವನ್ನು ಒದಗಿಸಿದ ಪ್ರಕೃತಿ ಚೈತನ್ಯ- ಇದಕ್ಕೆಲ್ಲ ನೀವು ಕೃತಜ್ಞರಾಗಿರಬೇಕು. ನಮ್ಮ ಬದುಕು ಹಲವರು ಋಣದಲ್ಲಿ ನಡೆಯುತ್ತಿರುತ್ತದೆ. ಅಪ್ಪ ಅಮ್ಮಂದಿರಿಂದ ಹಿಡಿದು ಹೆಂಡತಿ ಮಕ್ಕಳವರೆಗೂ, ಶಿಕ್ಷಕರಿಂದ ಹಿಡಿದು ನೆರೆಮನೆಯವರವರೆಗೂ. ನೀವು ಖುಷಿಯಾಗಿರೋಕೆ ತುಂಬಾ ಸುಲಭದ ದಾರಿ ಎಂದರೆ ದಿನಕ್ಕೊಮ್ಮೆಯಾದರೂ ನೀವು ಪಡೆದುದಕ್ಕೆಲ್ಲ ಕೃತಜ್ಞತೆ ವ್ಯಕ್ತಪಡಿಸುವುದು ಮತ್ತು ಅದನ್ನು ಆಗಾಗ ನೆನಪಿಸಿಕೊಳ್ಳುತ್ತ ಇರುವುದು.

ಕ್ಷಮೆ:
ಯಾರೋ ನಿಮಗೆ ಏನೋ ಮಾಡಿರಬಹುದು. ಅದನ್ನು ಈಗಲೂ ಮನದಲ್ಲಿ ಇಟ್ಟುಕೊಂಡು ಕೊರಗುತ್ತಿದ್ದರೆ ನಿಮಗಿಂತ ದುಃಖಿಗಳು ಇನ್ನೊಬ್ಬರಿಲ್ಲ. ನಿಮಗೆ ತೊಂದರೆ ಕೊಟ್ಟವರು ಎಲ್ಲೋ ಹೋಗಿದ್ದಾರೆ; ಅವರು ಅದರ ಬಗ್ಗೆ ಯೋಚಿಸುತ್ತಿರುವುದಿಲ್ಲ ನೀವೂ ಆ ಪರಿಸ್ಥಿತಿಯನ್ನು ದಾಟಿ ಬಂದಿರುತ್ತೀರಿ. ಮತ್ತೆ ಅದನ್ನೇ ಯಾಕೆ ಹೊತ್ತುಕೊಂಡು ತಿರುಗುತ್ತಿದ್ದೀರಿ? ಭಾರವನ್ನು ಇಳಿಸುವುದು ಹಗುರವಾಗಿ ನಡೆಯುವುದಕ್ಕೆ ಮಾರ್ಗವಲ್ಲವೇ?

ಕುಂದಾಪ್ರ ಡಾಟ್ ಕಾಂ ಲೇಖನ

Exit mobile version