Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು ಎಮ್.ಎಮ್.ಹೌಸ್‌ನಿಂದ ಆಕ್ಸಿಜನ್ ಸಿಲಿಂಡರ್ ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿರೂರು ಎಮ್‌ಎಮ್.ಹೌಸ್ ಇದರ ವತಿಯಿಂದ ಕೋವಿಡ್ ನೆರವಿಗಾಗಿ ಉಡುಪಿ ಜಿಲ್ಲಾಡಳಿತಕ್ಕೆ 37 ಆಕ್ಸಿಜನ್ ಸಿಲಿಂಡರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಎಮ್.ಎಮ್.ಹೌಸ್ ಪರವಾಗಿ ಮಣೆಗಾರ್ ಜಿಪ್ರಿ ಅವರು ಅಪರ ಜಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಕೋವಿಡ್ ಎರಡನೇ ಅಲೆ ಆರಂಭದಲ್ಲಿ ಕೋವಿಡ್ ನಿಯಂತ್ರಣ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿತ್ತು. ಆಮ್ಲಜನಕ ಕೊರತೆ ಕಾಡಿದ್ದು ಜಿಲ್ಲಾಡಳಿತದ ಸಕಾಲಿಕ ಕ್ರಮಗಳ ಮೂಲಕ ಸಂಭವಿಸಬಹುದಾದ ಅನಾಹುತಗಳಿಂದ ಪಾರಾಗಿರುವುದು ಜಿಲ್ಲೆಯ ಹೆಮ್ಮೆಯಾಗಿದೆ. ಕೋವಿಡ್ ನಿಯಂತ್ರಣದಲ್ಲಿ ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರ ಅಪಾರವಾಗಿದೆ. ಜಿಲ್ಲೆಯ ತುತ್ತತುದಿಯ ಗ್ರಾಮವಾದ ಶಿರೂರಿನ ಮೀರಾನ್ ಸಾಹೇಬ್ ಅವರ ಸಹಕಾರಕ್ಕೆ ಜಿಲ್ಲಾಡಳಿತ ಅಬಾರಿಯಾಗಿದೆ. ಮಾತ್ರವಲ್ಲದೆ ಸಾರ್ವಜನಿಕರ ಈ ರೀತಿಯ ಸಹಕಾರದಿಂದ ಉಡುಪಿ ಜಿಲ್ಲೆ ಇನ್ನಷ್ಟು ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಎಂದರು.

ಎಮ್.ಎಮ್.ಹೌಸ್ ಶಿರೂರು ಪರವಾಗಿ ಮಣೆಗಾರ್ ಜಿಪ್ರಿ ಸಾಹೇಬ್ ಮಾತನಾಡಿ, ಕೋವಿಡ್ ಜಗತ್ತಿಗೆ ಬಂದಿರುವ ವಿಪತ್ತಾಗಿದೆ. ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಕೈಲಾದಷ್ಟು ನೆರವು ನೀಡುವ ಪ್ರಯತ್ನ ನಮ್ಮ ಕುಟುಂಬ ಮತ್ತು ಜನರ ಸಹಕಾರದಿಂದ ಮಾಡಿರುವ ಸಂತೃಪ್ತಿಯಿದೆ.ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಆಗಬಾರದು ಎನ್ನುವ ಉದ್ದೇಶದಿಂದ ಅಂತರಾಷ್ಟ್ರೀಯ ಗುಣಮಟ್ಟದ ಸಿಲಿಂಡರ್‌ಗಳನ್ನು ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರೇಮಾನಂದ, ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮಿಎಚ್.ಎಸ್ ಪಟ್ಟಣ ಪಂಚಾಯತ್ ಅಧಿಕಾರಿ ನವೀನ್, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸನ್ಮಾನ್ ಶೆಟ್ಟಿ ಉಪಸ್ಥಿತರಿದ್ದರು. ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version