Kundapra.com ಕುಂದಾಪ್ರ ಡಾಟ್ ಕಾಂ

ನಟ ರಕ್ಷಿತ್ ಶೆಟ್ಟಿ ತೇಜೋವಧೆ: ಖಾಸಗಿ ವಾಹಿನಿ ವಿರುದ್ಧ ದೂರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡ ಚಿತ್ರರಂಗದ ಭರವಸೆಯ ನಟ ರಕ್ಷಿತ್ ಶೆಟ್ಟಿ ವಿರುದ್ಧ ಟಿವಿ ಕಾರ್ಯಕ್ರಮವೊಂದರಲ್ಲಿ ಅವಾಚ್ಯ ಪದಗಳನ್ನು ಬಳಸಿ ತೇಜೋವಧೆ ಮಾಡಿರುವುದನ್ನು ಖಂಡಿಸಿ ಖಾಸಗಿ ವಾಹಿನಿಯೊಂದರ ವಿರುದ್ಧ ತಾಲೂಕಿನ ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಲಾಗಿದೆ.

ನಟ ರಕ್ಷಿತ್ ಶೆಟ್ಟಿಯನ್ನು ನಿಂದಿಸುವ ಉದ್ದೇಶದಿಂದಲೇ ಕಾರ್ಯಕ್ರಮ ರೂಪಿಸಿದ್ದಾರೆಂದು ಆರೋಪಿಸಿ ಬುಧವಾರ ರಾತ್ರಿಯಿಂದಲೇ ರಕ್ಷಿತ್ ಶೆಟ್ಟಿ ಅಭಿಮಾನಿಗಳು ತಮ್ಮ ಆಕ್ರೋಶ ಹೊರಹಾಕುತ್ತಿದ್ದು ಇದೀಗ ಶಂಕರನಾರಾಯಣದ ಭರತ್ ತಲ್ಲಂಜೆ ಎಂಬುವವರು ಠಾಣೆಯಲ್ಲಿ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ದೂರಿನ ಸಾರಾಂಶವೇನು?
ಬುಧವಾರ ಸಂಜೆ 7:30ಕ್ಕೆ ಪಬ್ಲಿಕ್ ಟಿವಿ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಸಿನಿ ಅಡ್ಡ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಅವರು ರಸ್ತೆ ಬದಿಯಲ್ಲಿ ಪಾನಿಪುರಿ ಮಾರಲಿಕ್ಕೂ ನಾಲಾಯಕ ಎಂದು ಅಪಪ್ರಚಾರ ಮಾಡಿರುತ್ತಾರೆ. ರಕ್ಷಿತ್ ಶೆಟ್ಟಿಯವರ ತೆಜೋವಧೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪ್ರಸರಣ ಮಾಡಿರುತ್ತಾರೆ ಮಹೇಶದೇವ ಶೆಟ್ಟಿ ಎಂಬುವರು ಪ್ರೊಗ್ರಾಮ್ ಪ್ರೊಡ್ಯೂಸರ್ ಆಗಿ, ದಿವ್ಯಜ್ಯೋತಿ ಎಂಬುವರು ನಿರೂಪಕಿಯಾಗಿ ಈ ಕಾರ್ಯಕ್ರಮ ಮಾಡಿದ್ದು ನಮಗೆ ತಿಳಿದು ಬಂದಿದೆ. ನಮ್ಮೆಲ್ಲರ ಮನಸ್ಸನ್ನು ಘಾಸಿಗೊಳಿಸಿದ ಈ ಕಾರ್ಯಕ್ರಮದ ನಿರೂಪಣೆ ಮತ್ತು ಪ್ರಸರಣದ ಹೊಣೆ ಹೊತ್ತವರು ಬೆಷರತ್ ಕ್ಷಮೆ ಯಾಚಿಸಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕಾಗಿ ಕೋರುತ್ತೇವೆ ಎಂದು ದೂರಿನಲ್ಲಿ ಹೇಳಿದ್ದಾರೆ.

ರಕ್ಷಿತ್ ಶೆಟ್ಟಿ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಿರುವ ನಿರೂಪಕರನ್ನು ಈ ಕೂಡಲೇ ಬಂಧಿಸಬೇಕು ಮತ್ತು ಅವರ ವಾಹಿನಿಯ ಮೂಲಕ ಕ್ಷಮೆ ಕೇಳಬೇಕು. ತೇಜೋವಧೆ ಮಾಡುವ ಉದ್ದೇಶದಿಂದ ರೂಪಿಸಲಾಗಿರುವ ಈ ಕಾರ್ಯಕ್ರಮದ ಹಿಂದಿರುವ ಎಲ್ಲರ ವಿರುದ್ಧವೂ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ದೂರು ದಾಖಲಿಸಲಿದ್ದಾರೆ. – ಉಮೇಶ್ ಶೆಟ್ಟಿ ಕಲ್ಗದ್ದೆ

Exit mobile version