ಕುಂದಾಪುರ: ತಾಲೂಕಿನ ಕಾಳವಾರ ಜಂಕ್ಷನ್ ಬಳಿ ಬೈಕಿನಲ್ಲಿ ಜಿಂಕೆ ಚರ್ಮವನ್ನು ಸಾಗಿಸುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಶಿರಸಿಯ ಅಡಂಗಿ ಗ್ರಾಮದ ಮೊಹಮ್ಮದ್ ಶಫಿ(26) ಹಾಗೂ ಸೊರಬದ ಮಸ್ತಾಫಾ(35) ಬಂಧಿತ ಆರೋಪಿಗಳು.
ಇಬ್ಬರೂ ಬೆಳಿಗ್ಗೆ ಬೈಕಿನಲ್ಲಿ ಚರ್ಮವನ್ನು ಸಾಗಿಸುತ್ತಿದ್ದಾಗ ಕಾಳವಾರ ಜಂಕ್ಷನ್ ಬಳಿ ಪೊಲೀಸರು ಅಡ್ಡಗಟ್ಟಿದ್ದರು. ಈ ವೇಳೆಯಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅನುಮಾನಗೊಂಡ ಪೊಲೀಸರು ಅವರ ಬ್ಯಾಗನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅದರಲ್ಲಿ ಜಿಂಕೆ ಚರ್ಮವಿರುವುದು ಪತ್ತೆಯಾಗಿತ್ತು.
ಆರೋಪಿಗಳನ್ನು ಕೂಡಲೆ ಬಂಧಿಸಿ ಸುಮಾರು 25,000ರೂ. ಮೌಲ್ಯದ ಜಿಂಕೆ ಚರ್ಮವನ್ನು ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.