Kundapra.com ಕುಂದಾಪ್ರ ಡಾಟ್ ಕಾಂ

ಮೂಡುಬಿದಿರೆ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ತಾಲೂಕಿನ ವಾಲಿಬಾಲ್ ಅಸೋಸಿಯೇಶನ್ ಉದ್ಘಾಟನಾ ಸಮಾರಂಭವು ಮೂಡುಬಿದಿರೆಯಲ್ಲಿ ಶನಿವಾರ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ವಿನಯ್ ಆಳ್ವ ಅಸೋಸಿಯೇಶನ್‌ನ್ನು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ವಿನಯ್ ಆಳ್ವ, ‘ಒಬ್ಬ ವೈದ್ಯನಾಗಿ ವೈದ್ಯಕೀಯ ಸೇವೆಗೆ ನನ್ನ ಆದ್ಯತೆ. ಆದರೆ ಅದರ ಜೊತೆಗೆ ಕ್ರೀಡಾ ಸ್ಪೂರ್ತಿ ಒದಗಿಸುವ, ದೈಹಿಕ ಸಮತೋಲನ ಕಾಯ್ದುಕೊಳ್ಳಲು ನೆರವಾಗುವ ವಾಲಿಬಾಲ್‌ನಂತಹ ಕ್ರೀಡೆಗಳಿಗೂ ಪ್ರಾಮುಖ್ಯತೆ ಕೊಡಲಿಚ್ಛಿಸುತ್ತೇನೆ. ಈ ಹಿನ್ನೆಲೆಯಲ್ಲಿ ಮೂಡುಬಿದಿರೆ ತಾಲೂಕಿನಲ್ಲಿ ವಿನೂತನವಾಗಿ ಉದ್ಘಾಟನೆಗೊಂಡಿರುವ ವಾಲಿಬಾಲ್ ಅಸೋಸಿಯೇಶನ್‌ನ ಅಭಿವೃದ್ಧಿಗೆ ನನ್ನ ಸಮಯ ಮೀಸಲಿಡುತ್ತೇನೆ’ ಎಂದರು.

ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್‌ನ ಅಧ್ಯಕ್ಷ ಸತೀಶ್ ಕುಮಾರ್ ಪುತ್ತೂರು, ಆರಂಭದಲ್ಲಿಯೇ ಡಾ. ಮೋಹನ್ ಆಳ್ವರ ಬೆಂಬಲ ಸಿಕ್ಕಿದ್ದು ನಮಗೆ ಆನೆ ಬಲ ಸಿಕ್ಕಂತಾಗಿದೆ. ಆಳ್ವರು ಮೊದಲಿನಿಂದಲೂ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಾ ಬಂದವರು. ಅವರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ತಾಲೂಕಿನ ವಾಲಿಬಾಲ್ ಅಸೋಸಿಯೇಶನ್ ನೇತೃತ್ವದಲ್ಲಿ ಒಳ್ಳೆಯ ಕ್ರೀಡಾಕೂಟಗಳನ್ನು ಆಯೋಜಿಸಿ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮುವಂತೆ ಮಾಡುವ ಗುರಿಯಿದೆ ಎಂದರು.

ಇದೇ ವೇಳೆ, ಮೂಡುಬಿದಿರೆ ತಾಲೂಕಿನ ವಾಲಿಬಾಲ್ ಅಸೋಸಿಯೇಶನ್ ಸಮಿತಿಯನ್ನು ರಚಿಸಲಾಯಿತು. ಸಮಿತಿ ಅಧ್ಯಕ್ಷರಾಗಿ ಡಾ. ವಿನಯ್ ಆಳ್ವ ಹಾಗೂ ಗೌರವ ಸಲಹೆಗಾರರಾಗಿ ಸೆಲ್ವೇಂದ್ರನ್ ಮತ್ತು ಪ್ರಮೋದ್ ಕುಮಾರ್ ಶೆಟ್ಟಿ ಆಯ್ಕೆಯಾದರು. ಅಸೋಸಿಯೇಶನ್‌ನ ಉಪಾಧ್ಯಕ್ಷರಾಗಿ ರೋಷನ್, ಯತೀಶ್ ಶೆಟ್ಟಿ ಮೂಡುಬಿದಿರೆ, ಪ್ರವೀಣ್ ಕುಮಾರ್ ಜೈನ್, ಮಧುಸೂದನ್ ರೈ, ನವೀನ್ ಅಂಬೂರಿ ಹಾಗೂ ಚಂದ್ರರಾಜ್ ಜೈನ್ ಆಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಎಸ್. ನಾಗೇಶ್, ಸಹಕಾರ್ಯದರ್ಶಿಯಾಗಿ ಜಗದೀಶ್, ಮೆಲ್ವಿನ್ ಶಿಲಾನಂದ, ಪ್ರತಾಪ್ ಶೆಟ್ಟಿ, ಕ್ಲೆಮೆಂಡ್ ಡಿಸೋಜ, ಕೋಶಾಧಿಕಾರಿಯಾಗಿ ಪ್ರಶಾಂತ್ ಜೈನ್, ಸಂಘಟನಾ ಕಾರ್ಯದರ್ಶಿಯಾಗಿ ನವೀನ್ ಪುತ್ರನ್ , ರಮೇಶ್ ಶೆಟ್ಟಿ ಮಿಜಾರ್, ಸತ್ತರ್ ಒಂಟಿಕಟ್ಟೆ, ಸತೀಶ್ ಬೆಳುವಾಯಿ, ವಿಲ್ವೇಡ ಆರ್ಯನ್ ಆಯ್ಕೆಗೊಂಡರು.

ರೆಫ್ರಿ ಬೋರ್ಡ್ ಆಯ್ಕೆ ಸಮಿತಿಯ ಸದಸ್ಯರಾಗಿ ಉದಯ್ ಕುಮಾರ್, ಸುಧೀರ್ ಕುಮಾರ್ ಜೈನ್, ದೀಪಕ್ ಶೆಟ್ಟಿ, ಆದರ್ಶ್ ಶೆಟ್ಟಿ, ಹರೀಶ್ ಜೈನ್, ಶರತ್ ಶೆಟ್ಟಿ, ವಿಕ್ರಂ, ಹರಿಶ್ಚಂದ್ರ, ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಅರವಿಂದ, ಸಂತೋಷ್ ನಾಯ್ಕ್, ಸಂತೋಷ್ ನಾಯ್ಕ ಬನ್ನಡ್ಕ, ಮುಸ್ತಾಕ್, ನೀಲ್ ದಾಸ್ ಹಾಗೂ ಮಾಧ್ಯಮ ವಕ್ತಾರರಾಗಿ ಸುನಿಲ್ ಮಿರಾಂದಾ ಮತ್ತು ಪ್ರಕಾಶ್ ಆಯ್ಕೆಗೊಂಡರು.

ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಕಾರ್ಯದರ್ಶಿ ಶಂಕರ್ ಶೆಟ್ಟಿ ಬಿ.ಸಿ.ರೋಡ್, ವಾಲಿಬಾಲ್ ತರಬೇತುದಾರ ರಾಜರಾಮ್, ರಾಜ್ಯ ಸರ್ಕಾರದ ನಿವೃತ್ತ ಉಪ ಕಾರ್ಯದರ್ಶಿ ಇಬ್ರಾಹಿಂ ಸಂಪಾಜೆ, ನಿವೃತ್ತ ಕೆ.ಎಸ್.ಆರ್.ಟಿ.ಸಿ ನೌಕರ ಜೋಸೆಫ್ ಉಜಿರೆ, ಉಪಾಧ್ಯಕ್ಷ ಶಂಶುದ್ದಿನ್ ಸುಳ್ಯ ಹಾಗೂ ಜಿಲ್ಲಾ ರೆಫರಿ ಬೋರ್ಡ್‌ನ ಅಲೆಗ್ಸಾಂಡರ್ ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

Exit mobile version