Kundapra.com ಕುಂದಾಪ್ರ ಡಾಟ್ ಕಾಂ

ನಾಗರ ಪಂಚಮಿ: ಕರಾವಳಿಗರು ಭಕ್ತಿ ಭಾವದಿ ಆರಾಧಿಸುವ ಹಬ್ಬ

ಕುಂದಾಪ್ರ ಡಾಟ್ ಕಾಂ.
ನಾಗಾರಾಧನೆ ಎಂಬುದು ಭಾರತೀಯ ಸಂಪ್ರದಾಯದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ನಾಗಾರಾಧನೆ ಅತ್ಯಂತ ಪವಿತ್ರ ಹಾಗೂ ಪೂಜನೀಯವೇನಿಸಿದೆ. ನಾಗ ಮೂಲದ ಆಧಾರದಲ್ಲಿಯೇ ಪ್ರತಿಯೊಂದು ಕೌಟುಂಬಿಕ ಮೌಲ್ಯ, ಆಚರಣೆಗಳು, ಸಂಪ್ರದಾಯಗಳು ಚಾಲ್ತಿಯಲ್ಲಿವೆ. ನಮ್ಮ ಕರಾವಳಿ ಭಾಗದ ಮಾತೃ ಪ್ರಧಾನ ವ್ಯವಸ್ಥೆಯು ನಿಂತಿರುವುದೇ ಈ ನಾಗಾರಾಧನೆ ಮತ್ತು ನಾಗ ಮೂಲದ ಗುರುತಿಸುವಿಕೆಯ ಆಧಾರದಿಂದಾಗಿದೆ.

ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸುವ ನಾಗರ ಪಂಚಮಿ ಹಿಂದೂಗಳಿಗೆ ತುಂಬಾ ವಿಶೇಷ ಹಬ್ಬ. ನಾಗರ ಹಾವಿನೆಡೆಗೆ ಮನುಷ್ಯನ ಸಹಜ ಭಯ, ಭಕ್ತಿಯನ್ನು ತೋರಿಸಿಕೊಳ್ಳುವ ನಾಗರಪಂಚಮಿ ದಿನದಂದು ಹುತ್ತಕ್ಕೆ ಹಾಲೆರೆದರೆ ಒಳಿತಾಗುವುದು ಎನ್ನುವುದು ಸಂಪ್ರದಾಯ.

ನಾಗರಪಂಚಮಿಯಂದು ವಿಷ್ಣುವಿನ ವಾಹನ ಶೇಷನಾಗನಿಗೆ ಸಲ್ಲಿಸುವ ಪೂಜೆ ಶ್ರೇಷ್ಠ. ಈ ದಿನ ನಾಗಪೂಜೆ ಮಾಡಿದರೆ ನಾಗದೋಷಕ್ಕೆ ಪರಿಹಾರ ಸಿಗುವುದು ಎಂಬ ನಂಬಿಕೆಯ ಮೂಲ ಈ ಹಬ್ಬ. ಇಂದು ಎಲ್ಲೆಡೆ ನಾಗಾರಾಧನೆ ಭರದಿಂದ ಸಾಗಿದೆ. ಪ್ರತಿಯೊಂದು ಕುಟುಂಬವೂ ತನ್ನ ನಾಗ ಮೂಲವನ್ನು ಅರಸಿಕೊಂಡು ನಾಗಾರಾಧನೆ ಮಾಡಿಕೊಂಡು ಬರುವಲ್ಲಿ ಶ್ರದ್ಧೆ, ಭಕ್ತಿಯನ್ನು ತೋರುತ್ತಿದೆ.

ಇನ್ನುಳಿದಂತೆ ಗ್ರಾಮೀಣ ಪ್ರದೇಶಗಳಲ್ಲಿರುವ ಸಣ್ಣ ಪುಟ್ಟ ನಾಗಾರಾಧನಾ ಕೇಂದ್ರಗಳಲ್ಲೂ ನಾಗಾರಾಧಕರು ತಮ್ಮ ತಮ್ಮ ಕುಟುಂಬ ಮೂಲಗಳಲ್ಲಿ ಪೂಜೆಯಲ್ಲಿ ನಿರತರಾಗಿದ್ದಾರೆ. ತಮ್ಮ ಕುಟುಂಬಗಳ ವಾರ್ಷಿಕ ನಾಗಾರಾಧನೆಯನ್ನು ಭಕ್ತಿ ಭಾವಗಳಿಂದ ನಿರ್ವಹಿಸುತ್ತಿದ್ದಾರೆ. ನಾಗದೇವರು ಕರಾವಳಿ ಭಾಗದ ಪ್ರಭಾವಿ ದೇವರೆನಿಸಿದೆ.

ನಾಗರ ಪಂಚಮಿಯ ಆಚರಣೆ ಹಿಂದಿನ ಐತಿಹ್ಯ:
ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ಎಂದು ಹೇಳಿದಾಗ, ಆಸ್ತಿಕನು ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ ದಿನವು ಪಂಚಮಿಯಾಗಿತ್ತು.

ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು ಎಂದು ಹೇಳಿದ್ದಾನೆ – ‘ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಣವಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣದ ಶುದ್ಧಿಯಾಗಲಿ.’

ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯಾಗಿದ್ದಾನೆ. ಪಂಚಪ್ರಾಣವೆಂದರೆ ಪಂಚಭೌತಿಕ ತತ್ತ್ವದಿಂದ ಉಂಟಾದ ಶರೀರದ ಸೂಕ್ಷ್ಮರೂಪವಾಗಿದೆ. ಸ್ಥೂಲ ದೇಹವು ಪ್ರಾಣಹೀನವಾಗಿದೆ ಮತ್ತು ಸ್ಥೂಲ ದೇಹದಲ್ಲಿ ಚಲಿಸುವ ಪ್ರಾಣವಾಯುವು ಪಂಚಪ್ರಾಣದಿಂದ ಬರುತ್ತದೆ.

ನಾಗನ ಪೂಜೆ ಮಾಡುವುದರ ಹಿಂದಿನ ಶಾಸ್ತ್ರ:
ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ವಚನ ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.

ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ವಜ್ರವಿದೆ. ಅವನು ಶ್ರೀವಿಷ್ಣುವಿನ ತಮೋಗುಣದಿಂದ ಉತ್ಪನ್ನವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಶಯನ ಮಾಡುತ್ತಾನೆ. ತ್ರೇತಾಯುಗದಲ್ಲಿ ಶ್ರೀವಿಷ್ಣು ರಾಮನ ಅವತಾರವನ್ನು ತೆಗೆದುಕೊಂಡಾಗ ಶೇಷನು ಲಕ್ಷ್ಮಣನ ಅವತಾರವನ್ನು ತೆಗೆದುಕೊಂಡಿದ್ದನು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾಗಿದ್ದನು.

ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು, ಒಲೆಯ ಮೇಲೆ ತವೆಯನ್ನು ಇಡಬಾರದು, ಈ ದಿನ ಭೂಮಿಯನ್ನು ಅಗೆಯಬಾರದು ಎಂಬ ವಾಡಿಕೆ ಹಿಂದಿನಿಂದಲೂ ಇದೆ.

Exit mobile version