Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ & ಬೈಂದೂರು ತಾಲೂಕು ಆಡಳಿತದಿಂದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಬೈಂದೂರು:
ಕುಂದಾಪುರ ಹಾಗೂ ಬೈಂದೂರು ತಾಲೂಕು ಆಡಳಿತದ ವತಿಯಿಂದ ತಾಲೂಕು ಕೇಂದ್ರಗಳಲ್ಲಿ ಭಾನುವಾರ 75ನೇ ಸ್ವಾತಂತ್ರ್ಯೋತ್ಸವ ಆಚರಿಸಿಲಾಯಿತು.

ಕುಂದಾಪುರ ಗಾಂಧಿ ಮೈದಾನದಲ್ಲಿ ಉಪ ವಿಭಾಗಾಧಿಕಾರಿ ರಾಜು ಅವರು ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿ ಹೋರಾಟದ ಉತ್ಸಾಹ, ತ್ಯಾಗ ಭಾವನೆಗಳ ಮೂಲಕ ಹುತಾತ್ಮರನ್ನು ನೆನೆಯುತ್ತ, ಸವಾಲುಗಳನ್ನೆದುರಿಸುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಅಗತ್ಯವಾಗಿದೆ. ಪ್ರಧಾನಿಯವರ ಆಶಯದಂತೆ, 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯು 75 ರ ಯೋಜನೆಗಳು, 75ರ ಸಾಧನೆಗಳು, 75ರ ಕ್ರಿಯೆಗಳು ಹಾಗೂ 75ರ ಪರಿಹಾರ ಎನ್ನುವ ಐದು ಅಂಶಗಳತ್ತ ನಮ್ಮ ಮುಂದಿನ ರೂಪುರೇಶೆಯಾಗಿರುತ್ತದೆ. ಸ್ವಾತಂತ್ರ್ಯದ ಆಶಯವನ್ನು ಸರ್ವರಿಗೂ ತಲುಪಿಸುವ ನಿಟ್ಟಿನಲ್ಲಿ ಇನ್ನಷ್ಟು ದೃಢತೆಯ ಹೆಜ್ಜೆಗಳನ್ನಿಡುವ, ಸಂಕಲ್ಪ ತೊಡುವ ದಿನ ಇದಾಗಿದೆ ಎಂದವರು ಹೇಳಿದರು.

ಗಾಂಧೀಜಿ- ನೇತಾಜಿ, ಪಟೇಲ್- ಸಾವರ್ಕರ್ ರಂತಹ ಮಹಾನ್ ನಾಯಕರ ಮುಂದಾಳ್ವತದಲ್ಲಿ ಕರಾವಳಿಯು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಉಮಾಬಾಯಿ ಅವರು ಮಹತ್ವದ ಪಾತ್ರ ವಹಿಸಿದ್ದರು. ತಿಲಕ್‌ರಿಂದ ಪ್ರೇರಿತರಾಗಿ, ಸೇವಾದಳದ ಮುಖ್ಯಸ್ಥರಾಗಿ, ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನದ ಸಂಘಟಕರಾಗಿ, ಕಸ್ತೂರ್ಬಾ ಟ್ರಸ್ಟ್‌ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಮಹಾನ್ ಸ್ವಾತಂತ್ರ್ಯ ಪ್ರೇಮಿ ಉಮಾಬಾಯಿ ಕುಂದಾಪುರ ಅವರ ನಿಸ್ವಾರ್ಥ ಸೇವಾ ಪರಂಪರೆ, ಇಲ್ಲಿನ ನಾಗರೀಕರೆಲ್ಲರಿಗೂ ಹೆಮ್ಮೆ ಹಾಗೂ ಅಭಿಮಾನದ ಸಂಗತಿ ಎಂದರು.

ಪುರಸಭಾಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಕೆ., ಕಾರ್‍ಯನಿರ್ವಹಣಾಧಿಕಾರಿ ಕೇಶವ್ ಶೆಟ್ಟಿಗಾರ್, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ್, ಸದಸ್ಯರಾದ ದೇವಕಿ ಸಣ್ಣಯ್ಯ, ಪುಷ್ಪಾ ಶೇಟ್, ಪ್ರಭಾಕರ್ ವಿ., ಸಂತೋಷ್ ಕುಮಾರ್ ಶೆಟ್ಟಿ, ರಾಘವೇಂದ್ರ ಖಾರ್ವಿ, ಶ್ವೇತಾ ಸಂತೋಷ್, ವನಿತಾ ಎಸ್. ಬಿಲ್ಲವ, ಅಬು ಮಹಮ್ಮದ್, ಚಂದ್ರಶೇಖರ್ ಖಾರ್ವಿ, ಗಿರೀಶ್, ರತ್ನಾಕರ್ ಶೇರುಗಾರ್, ಕಮಲಾ ಮಂಜುನಾಥ್ ಪೂಜಾರಿ, ಶ್ರೀಧರ ಶೇರೆಗಾರ್, ನಗರ ಠಾಣೆ ಎಸ್‌ಐ ಸದಾಶಿವ ಗವರೋಜಿ, ಗ್ರಾಮಾಂತರ ಠಾಣೆ ಎಸ್‌ಐಗಳಾದ ಸುಧಾ ಪ್ರಭು, ನಿರಂಜನ್, ಮತ್ತಿತರ ತಾಲೂಕು ಮಟ್ಟದ ಅಧಿಕಾರಿಗಳು, ಇಲಾಖಾ ಸಿಬಂದಿ, ಜನಪ್ರತಿನಿಽಗಳು, ಶಿಕ್ಷಕರು, ಕೊರೊನಾ ವಾರಿಯರ್‍ಸ್, ಸಾರ್ವಜನಿಕರು ಉಪಸ್ಥಿತರಿದ್ದರು.
ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕೆ.ಎಸ್. ವಂದಿಸಿದರು. ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್‍ಯಕ್ರಮ ನಿರ್ವಹಿಸಿದರು.

ಕೊರೊನಾ ವಾರಿಯರ್‍ಸ್‌ಗೆ ಸಮ್ಮಾನ:
ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕಿ ನಯನಾ, ಬಿದ್ಕಲ್‌ಕಟ್ಟೆಯ ಆಶಾ ಕಾರ್‍ಯಕರ್ತೆ ಅನ್ನಪೂರ್ಣ, ಕೋಡಿಯ ಆಶಾ ಕಾರ್‍ಯಕರ್ತೆ ಸಾಧು, ಪುರಸಭೆಯ ಪೌರ ಕಾರ್ಮಿಕರಾದ ರಾಜೇಶ್, ಸಂತೋಷ್, ಕಂದಾಯ ಇಲಾಖೆಯ ಜಪ್ತಿ ಗ್ರಾಮ ಕರಣಿಕ ಪ್ರಕಾಶ ಸುವರ್ಣ, ಹೊಂಬಾಡಿ- ಮಂಡಾಡಿ ಗ್ರಾಮ ಸಹಾಯಕ ಭೋಜ ಮೊಗವೀರ, ಕುಂದಾಪುರ ನಗರ ಠಾಣಾ ಎಎಸ್‌ಐ ಸುಧಾಕರ್, ಗಂಗೊಳ್ಳಿ ಪಿಡಿಒ ಉಮಾಶಂಕರ್ ಅವರನ್ನು ಸಮ್ಮಾನಿಸಲಾಯಿತು.

ಕುಂದಾಪುರ ಗಾಂಧಿ ಮೈದಾನದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಅಂದಾಜು‌ 75 ಲಕ್ಷ ವೆಚ್ಚದಲ್ಲಿ‌ ನಿರ್ಮಿಸಲಾದ ಜಿಮ್ ಸೆಂಟರ್ ಹಾಗೂ ಸ್ಟೇಡಿಯಂ ಉದ್ಘಾಟನೆ ಮಾಡಲಾಯಿತು.

ಬೈಂದೂರು ಗಾಂಧಿ ಮೈದಾನದಲ್ಲಿ ಜರುಗಿದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್. ಅವರು ಧ್ವಜಾರೋಹಣಗೈದು ಸ್ವಾತಂತ್ರ್ಯೋತ್ಸವದ ಸಂದೇಶವಿತ್ತು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ನಾವುಗಳು ಹಿರಿಯರ ತ್ಯಾಗ, ಬಲಿದಾನಗಳನ್ನು ಗೌರವದಿಂದ ಸ್ಮರಿಸೋಣ ಎಂದರು.

ಬೈಂದೂರು ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ತಾಲೂಕು ಪ್ರಗತಿಪಥದಲ್ಲಿದೆ. ಪ್ರವಾಸೋದ್ಯಮಕ್ಕೆ ಇಲ್ಲಿ ವಿಪುಲ ಅವಕಾಶಗಳಿದ್ದು, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಇಓ ಭಾರತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನಮನಿ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನವೀನ್ ಮೊದಲಾದವರು ಇದ್ದರು. ಬೈಂದೂರಿನಲ್ಲಿ ಪೊಲೀಸ್ ಎಸ್ಪೈ ಪವನ್ ನಾಯಕ್ ಅವರ ಮುಂದಾಳತ್ವದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಕೋವಿಡ್ ವಾರಿಯರ್ ಹಾಗೂ ಸಾಧಕರನ್ನು ಗೌರವಿಸಲಾಯಿತು.

Exit mobile version