Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆ ಸ.ಮಾ.ಹಿ.ಪ್ರಾ. ಶಾಲೆ: ಪುಸ್ತಕ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿಯಿಂದ ೭ನೇ ತರಗತಿಯ ತನಕದ ವಿದ್ಯಾರ್ಥಿಗಳಿಗೆ ಎಮ್.ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಕೊಡಮಾಡಿದ ನೋಟ್ ಪುಸ್ತಕ ಮತ್ತು ಪಠ್ಯ ಪುಸ್ತಕ ವಿತರಣೆ ಇತ್ತೀಚೆಗೆ ನಡೆಯಿತು.

ಪುಸ್ತಕ ವಿತರಿಸಿ ಮಾತನಾಡಿದ ಎಮ್.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು, ಕೋವಿಡ್-19 ನಂತಹ ಕಷ್ಟಕಾಲದಲ್ಲಿಯೂ ನಮ್ಮ ಶಾಲೆಯ 400 ಮಂದಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇರುವುದರಲ್ಲಿ ಸ್ವಲ್ಪ ದಾನ ಮಾಡುವ ಮನದಾಸೆಯಿಂದ ಕಷ್ಟಕಾಲವಾದರೂ ನೀಡುತ್ತಿದ್ದೇನೆ ಎಂದರು.

ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ, ಗ್ರಾ.ಪಂ. ಅಧ್ಯಕ್ಷರಾದ ಉದಯ ಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಈ ಶಾಲೆಗೆ ಕೃಷ್ಣಮೂರ್ತಿ ಮಂಜರ ಸಹಕಾರ ಶ್ಲಾಘನಾರ್ಹವಾದುದು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ನಮ್ಮ ಶಾಲೆಗೆ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿ ಅದರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ಮೆಚ್ಚುವಂತಹದ್ದು. ಇವರೊಂದಿಗೆ ಶಿಕ್ಷಣ ಇಲಾಖೆ ಸಹಕರಿಸಿದ್ದಲ್ಲಿ ಉತ್ತಮವಿದೆ ಎಂದರು.

ಶ್ರೀ ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಖಜಾಂಚಿ ಜಿ. ಶ್ರೀಧರ ಶೆಟ್ಟಿ, ವಂಡ್ಸೆ ಸಿ.ಆರ್.ಪಿ ನಾಗರಾಜ ಶೆಟ್ಟಿ, ಗ್ರಾ.ಪಂ.ಉಪಾಧ್ಯಕ್ಷೆ ಗೀತಾ ಅವಿನಾಶ್, ಗ್ರಾ.ಪಂ.ಸದಸ್ಯರಾದ ಗೋವರ್ಧನ ಜೋಗಿ, ಪ್ರಶಾಂತ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.

ಶಾಲೆಯ ಮುಖ್ಯೋಪಾಧ್ಯಾಯ ಚಂದ್ರ ನಾಯ್ಕ ಸ್ವಾಗತಿಸಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಎ.ಜಿ. ವಂದಿಸಿದರು. ಸಹ ಶಿಕ್ಷಕ ಸದಾಶಿವ ಕಾರ್ಯಕ್ರಮ ನಿರ್ವಹಿಸಿದರು.

Exit mobile version