Kundapra.com ಕುಂದಾಪ್ರ ಡಾಟ್ ಕಾಂ

ವಿಜ್ಞಾನ ಪ್ರಬಂಧ ಸ್ಪರ್ಧೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮರವಂತೆಯ ವಿದ್ಯಾರ್ಥಿನಿಗೆ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಆ.17:
ರಾಜ್ಯ ವಿಜ್ಞಾನ ಪರಿಷತ್ ಆಶ್ರಯದಲ್ಲಿ 10-12 ವರ್ಷದ ವಯೋಮಿತಿಯ ವಿದ್ಯಾರ್ಥಿಗಳಿಗಾಗಿ ನಡೆಸಲಾದ ವಿಜ್ಞಾನ ಪ್ರಬಂಧ ಸ್ವರ್ಧೆಯಲ್ಲಿ ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದ ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶಿವಾನಿ ಪ್ರಭಾಕರ ಪೂಜಾರಿ ಅವರು ಇಂದು ಬೆಂಗಳೂರಿನ ವಿಜ್ಞಾನ ಭವನದ ಪ್ರೊ.ಎಂ.ಎ.ಸೇತುರಾವ್ ಸಭಾಂಗಣದಲ್ಲಿ ನಡೆದ 8ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಜ್ಯ ಪ್ರಶಸ್ತಿ ಸ್ವೀಕರಿಸಿದರು.

ಸುಸ್ಥಿರ ಜೀವನಕ್ಕಾಗಿ ವಿಜ್ಞಾನ ಎಂಬ ವಿಷಯದಲ್ಲಿ ಮರವಂತೆ ಶಾಲೆಯ ವಿದ್ಯಾರ್ಥಿಗಳು ಸ್ಥಳೀಯ ಗ್ರಾಮೀಣ ಭಾಗದ ಗುಡಿ ಕೈಗಾರಿಗಳಲ್ಲಿ ಕರಕುಶಲ ವಸ್ತುಗಳ ತಯಾರಿಕೆ ಕುರಿತು ಅಧ್ಯಯನ ನಡೆಸಿ ಪ್ರಬಂಧ ಮಂಡಿಸಿದ್ದು, ಜಿಲ್ಲಾ, ರಾಜ್ಯದಲ್ಲಿ ಪ್ರಶಸ್ತಿ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ಪದ್ಮವಿಭೂಷಣ ಪ್ರಶಸ್ತಿ ವಿಜೇತ ವಿಜ್ಞಾನಿ ಡಾ. ಅತ್ರಿ ಅವರಿಂದ ವಿದ್ಯಾರ್ಥಿನಿ ಶಿವಾನಿ ಪ್ರಭಾಕರ ಪೂಜಾರಿ ಅಭಿನಂದನಾ ಪತ್ರ ಹಾಗೂ ನೆನಪಿನ ಕಾಣಿಕೆ ಪಡೆದುಕೊಂಡರು. ಈ ಸಂದರ್ಭ ವಿದ್ಯಾರ್ಥಿನಿಗೆ ಮಾರ್ಗದರ್ಶಕಿಯಾಗಿದ್ದ ವಿಜ್ಞಾನ ಶಿಕ್ಷಕಿ ಚೈತ್ರಾ ಶೆಟ್ಟಿ, ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ರಾಜ್ಯ ಸಂಯೋಜಕರಾದ ಬಿ.ಎನ್‌.ಶ್ರೀನಾಥ್ ಹಾಗೂ ಗೌರವ ಕಾರ್ಯದರ್ಶಿ ಸಿ. ಕೃಷ್ಣೇ ಗೌಡ ಮತ್ತಿತರರು ಇದ್ದರು.

ಶಾಲೆಯ ಮುಖ್ಯ ಶಿಕ್ಷಕ ಸತ್ಯನಾ ಕೋಡೇರಿ, ವಿಜ್ಞಾನ ಶಿಕ್ಷಕಿ ಚೈತ್ರಾ ಶೆಟ್ಟಿ ಹಾಗೂ ಶಿಕ್ಷಕಿ ನಿರ್ಮಲಾ ಪೂಜಾರಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶಿವಾನಿ ಪ್ರಭಾಕರ ಪೂಜಾರಿ ಹಾಗೂ ಅಪೇಕ್ಷಾ ಸ್ಥಳೀಯ ಗ್ರಾಮೀಣ ಭಾಗದ ಗುಡಿ ಕೈಗಾರಿಗಳಲ್ಲಿ ಕರಕುಶಲ ವಸ್ತುಗಳ ತಯಾರಿಕೆ ಕುರಿತು ಅಧ್ಯಯನ ನಡೆಸಿ, ಪ್ರಬಂಧ ಮಂಡಿಸಿದ್ದರು.

ವಿದ್ಯಾರ್ಥಿಗಳು ತಮ್ಮ ಪ್ರಬಂಧ ಅಧ್ಯಯನಕ್ಕಾಗಿ ಕುಂಭಾಸಿ ಗ್ರಾಮದ ಕೊರಗ ಸಮುದಾಯದ ಬಂಧುಗಳ ಕುಲ ಕಸುಬಾದ ಬುಟ್ಟಿ ಹಣೆಯುವುದನ್ನು ಆಯ್ಕೆ ಮಾಡಿಕೊಂಡಿದ್ದರು. ಕ್ಷೇತ್ರ ಅಧ್ಯಯನದ ವೇಳೆ ಈ ಪಾರಂಪರಿಕ ಕಲೆ ಅವನತಿಯತ್ತ ಸಾಗುತ್ತಿರುವುದನ್ನು ಗಮನಿಸಿದ್ದರು. ಬೆತ್ತ, ಬಿದಿರು, ಬಿಳುಲು ಮುಂತಾದ ಕಚ್ಚಾ ಸಾಮಾಗ್ರಿಗಳ ಕೊರತೆ. ಪ್ಲಾಸ್ಟಿಕ್ ಮತ್ತು ರಬ್ಬರ್ ಬುಟ್ಟಿಗಳ ಬಳಕೆಯ ಹೆಚ್ಚಳ. ಮಾರುಕಟ್ಟೆಯ ಕೊರತೆ. ಸರ್ಕಾರದ ಪ್ರೋತ್ಸಾಹ ಹಾಗೂ ಬೆಂಬಲದ ಕೊರತೆ. ಆರ್ಥಿಕ ಸಂಪನ್ಮೂಲದ ಕೊರತೆ. ದೊಡ್ಡ ಕೈಗಾರಿಕೆಗಳ ಪೈಪೋಟಿ. ಯಂತ್ರೋಪಕರಣಗಳ ಕೊರತೆ. ಕೃಷಿಯಲ್ಲಿ ಸಾಂಪ್ರದಾಯಿಕ ಸಾಮಾಗ್ರಿಗಳ ಬಳಕೆಯ ಕುಸಿತ. ದುಡಿಮೆಗೆ ಸರಿಯಾದ ಆದಾಯ ದೊರಕದೆ ಇರುವುದು. ಆನ್‌ ಲೈನ್‌ ಮಾರುಕಟ್ಟೆಯ ಪ್ರಭಾವ. ಸಮುದಾಯದ ವಿದ್ಯಾವಂತರು ಪಾರಂಪರಿಕ ಕುಲ ಕಸುಬುವಿನಿಂದ ದೂರವಾಗುತ್ತಿರುವ ಅಂಶಗಳನ್ನು ವಿದ್ಯಾರ್ಥಿಗಳು ತಮ್ಮ ಅಧ್ಯಯನ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ.

ಪ್ರತಿ ಜಿಲ್ಲೆಯಿಂದ ತಲಾ 10 ಮಕ್ಕಳಂತೆ ರಾಜ್ಯದ 30 ಜಿಲ್ಲೆಗಳಿಂದ ಒಟ್ಟು 300 ವಿದ್ಯಾರ್ಥಿಗಳು ಆನ್‌ ಲೈನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ನಗರ ಹಿರಿಯ-9, ಗ್ರಾಮೀಣ ಹಿರಿಯ-9, ನಗರ ಕಿರಿಯ-6 ಹಾಗೂ ಗ್ರಾಮೀಣ ಕಿರಿಯ-6 ರಂತೆ ಒಟ್ಟು 30 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು.

Exit mobile version