Kundapra.com ಕುಂದಾಪ್ರ ಡಾಟ್ ಕಾಂ

ಮಾಡದ ತಪ್ಪಿಗೆ ಸೆರವಾಸ ಅನುಭವಿಸಿ ಕೊನೆಗೂ ತಾಯ್ನಾಡಿಗೆ ಮರಳಿದ ಹರೀಶ್ ಬಂಗೇರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಆ.18:
ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಸೌದಿ ಅರೇಬಿಯಾದ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದ ತಾಲೂಕಿನ ಬಿಜಾಡಿಯ ಹರೀಶ್ ಬಂಗೇರ ಬಿಡುಗಡೆಗೊಂಡು ಬೆಂಗಳೂರಿಗೆ ಮರಳಿದ್ದಾರೆ.

ದಮಾಮ್ ವಿಮಾನ ನಿಲ್ದಾನದ ಮೂಲಕ ಹೊರಟಿದ್ದು ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣ ತಲುಪದ ಅವರನ್ನು ಪತ್ನಿ, ಮಗಳು ಹಾಗೂ ಅವರ ಬಿಡುಗಡೆಗಾಗಿ ನಿರಂತರವಾಗಿ ಶ್ರಮಿಸಿದ ಲೊಕೇಶ್ ಅಂಕದಕಟ್ಟೆ ಅವರ ತಂಡ ಬರಮಾಡಿಕೊಂಡಿತು. ಬೆಂಗಳೂರಿನಲ್ಲಿ ಸಂಜೆ ಬಿಜಾಡಿಗೆ ಬರುವ ಸಾಧ್ಯತೆ ಇದೆ.

ಹರೀಶ್ ಬಂಗೇರ ಅವರ ಬಿಡುಗಡೆಗೆ ಲೋಕೇಶ್ ಅಂಕದಕಟ್ಟೆ ಹಾಗೂ ವಿವಿಧ ಸಂಘಟನೆಗಳು ಶ್ರಮಿಸಿದ್ದವು. ಆನೆಗುಡ್ಡೆಯ ತನಕ ಪಾದಯಾತ್ರೆಯನ್ನು ಮಾಡಲಾಗಿತ್ತು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಡಾ. ರವೀಂದ್ರ ಶ್ಯಾನುಭೋಗ್, ಸುಕೇಶ್ ಶೆಟ್ಟಿ ವಾಲ್ತೂರು, ಗೌತಮ್ ಶೆಟ್ಟಿ, ಹಿರಿಯ ಪೊಲೀಸ್ ಅಧಿಕಾರಿ ಕಮಲಪಂಥ್ ಸೇರಿದಂತೆ ಹಲವರು ಶ್ರಮಿಸಿದ್ದು, ಅಂತಿಮವಾಗಿ ಹರೀಶ್ ಬಂಗೇರ ನಿರಪರಾಧಿ ಎಂದು ಸಾಬೀತಾಗಿ ಸೌದಿ ಜೈಲನಿಂದ ಬಿಡುಗಡೆಗೊಂಡಿದ್ದಾರೆ.

ಸೌದಿಯ ದೊರೆ ಮತ್ತು ಇಸ್ಲಾಂ ಧರ್ಮದ ಶ್ರದ್ಧಾಕೇಂದ್ರ ಮೆಕ್ಕಾದ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ವ್ ಹಾಕಿದ್ದ ಆರೋಪದ ಮೇಲೆ ಹರೀಶ್ ಬಂಗೇರರನ್ನು 2019ರ ಡಿಸೆಂಬರ್ನಲ್ಲಿ ಸೌದಿ ಪೊಲೀಸರು ಬಂಧಿಸಿದ್ದರು.

ಈ ಬಗ್ಗೆ ಹರೀಶ್ ಅವರ ಪತ್ನಿ ಸುಮನಾ ಉಡುಪಿ ಪೊಲೀಸರಿಗೆ ದೂರು ನೀಡಿದ್ದರು. ಉಡುಪಿ ಪೊಲೀಸರು ಮೂಡುಬಿದಿರೆಯ ಅಬ್ದುಲ್ ಹುಯೇಸ್ ಮತ್ತು ಅಬ್ದುಲ್ ತುವೇಸ್ ಎಂಬವರನ್ನು ಬಂಧಿಸಿದ್ದು, ಅವರು ಹರೀಶ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು, ಅದರಲ್ಲಿ ಸೌದಿ ದೊರೆ ಮತ್ತು ಮೆಕ್ಕಾದ ವಿರುದ್ಧ ಪೋಸ್ವ್ ಹಾಕಿ, ಅದರ ಸ್ಕ್ರೀನ್ ಶಾಟ್ ತೆಗೆದು ಅದನ್ನು ವೈರಲ್ ಮಾಡಿದ್ದರು ಮತ್ತು ನಂತರ ಈ ನಕಲಿ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದರು.

ಸೌದಿಯಲ್ಲಿ ಎಸಿ ಮೆಕ್ಯಾನಿಕ್ ಆಗಿದ್ದ ಹರೀಶ್ ಬಂಗೇರ ಮಂಗಳೂರಿನ ಗೋಲಿಬಾರ್ ಘಟನೆಯ ಬಗ್ಗೆ ತಮ್ಮ ಫೇಸ್ಬುಕ್’ನಲ್ಲಿ ಪೋಸ್ವ್ ಮಾಡಿದ್ದರು. ಇದರ ವಿರುದ್ಧ ಅಲ್ಲಿನ ಕೆಲವು ಯುವಕರು ಹರೀಶ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಹರೀಶ್ ಅವರು ಫೇಸ್ಬುಕ್ ಮೂಲಕ ಕ್ಷಮೆ ಕೇಳಿ ಫೇಸ್ಬುಕ್ ಖಾತೆಯನ್ನೇ ಡಿಲೀಟ್ ಮಾಡಿದ್ದರು. ಇದೇ ಘಟನೆ ವೈಷಮ್ಯ ಮುಂದುವರಿಸಿ ಹರೀಶ್ ಬಂಗೇರ ಹೆಸರಿನಲ್ಲಿಯೇ ಫೇಸ್ಬುಕ್ ನಕಲಿ ಖಾತೆ ತೆರೆದು, ಅವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆದು, ಅವರು ಬಂಧನಕ್ಕೊಳಗಾಗುವಂತಾಗಿತ್ತು.

Exit mobile version