Kundapra.com ಕುಂದಾಪ್ರ ಡಾಟ್ ಕಾಂ

ಗೋವಿಂದ ಬಾಬು ಪೂಜಾರಿ ಅವರಿಗೆ ಅತ್ಯುತ್ತಮ ಉದ್ಯಮಿ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ದೆಹಲಿಯ ಇಂಡಿಯನ್ ಅಚೀವರ್ಸ್ ಸಂಸ್ಥೆ ಕೊಡಮಾಡಿದ ವರ್ಷದ ಅತ್ಯುತ್ತಮ ಉದ್ಯಮಿ ಪ್ರಶಸ್ತಿಗೆ ಶೆಫ್‌ಟಾಕ್ ಪುಡ್ & ಹಾಸ್ಪಿಟಾಲಿಟಿ ಸಂಸ್ಥೆಯ ಆಡಳಿತ ನಿರ್ದೇಶಕ ಗೋವಿಂದ ಬಾಬು ಪೂಜಾರಿ ಅವರು ಭಾಜನರಾಗಿದ್ದಾರೆ. ಮಂಗಳವಾರ ಆನ್‌ಲೈನ್ ಮೂಲಕ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಪರಿಶ್ರಮದಿಂದಲೇ ಬದುಕು ಕಟ್ಟಿಕೊಂಡ ಗೋವಿಂದ ಬಾಬು ಪೂಜಾರಿ ಅವರು ಹಂತ ಹಂತವಾಗಿ ಸಾಧನೆಯ ಶಿಖರವೇರಿದವರು. ಶೆಫ್‌ಟಾಕ್ ಪುಡ್ & ಹಾಸ್ಪಿಟಾಲಿಟಿ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಗೋವಿಂದ ಪೂಜಾರಿ ಅವರು ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿದ್ದಾರೆ. ಮತ್ಸ್ಯ ಬಂಧನ ಸಂಸ್ಥೆಯ ಮೂಲಕ ಮೀನಿನ ಮೌಲ್ಯವರ್ಧಿತ ಖಾದ್ಯಗಳು. ಪ್ರಜ್ನ್ಯಾ ಸಾಗರ್ ಹೋಟೆಲ್ & ರೆಸಾರ್ಟ್ಸ್ ಸಂಸ್ಥೆ ಮೂಲಕ ಹೋಟೆಲ್ ಉದ್ಯಮ ನಡೆಸುತ್ತಿದ್ದು, ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ.

ನಾಯಕತ್ವದ ಕೌಶಲ್ಯ ಮತ್ತು ಶ್ರಮದ ದುಡಿಮೆ ಮೂಲಕ ಯಶಸ್ಸು, ಪ್ರಸಿದ್ಧಿ ಗಳಿಸಿರುವ ಇವರು ಹುಟ್ಟೂರು ಉಪ್ಪುಂದದಲ್ಲಿ ಜನೋಪಕಾರಿ ಸಂಸ್ಥೆಯೊಂದು ಇರಬೇಕೆಂಬ ಆಶಯದಿಂದ 2015ರಲ್ಲಿ ಶ್ರೀ ವರಲಕ್ಷ್ಮೀ ಸೌಹಾರ್ದ ಸಹಕಾರಿಯನ್ನು ತೆರೆದು ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾದರು. ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನರಿಗೆ ಆರೋಗ್ಯ, ಮನೆ ನಿರ್ಮಾಣ, ಕೋವಿಡ್ ಕಾಲದಲ್ಲಿ ನೆರವು ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು ಸೇರಿದಂತೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ವಿವಿಧ ಸೇವಾ ಚಟುವಟಿಕೆಯಲ್ಲಿಯು ತೊಡಗಿಸಿಕೊಂಡಿದ್ದಾರೆ.

ಗೋವಿಂದ ಬಾಬು ಪೂಜಾರಿ ಅವರ ಉದ್ಯಮ ಕ್ಷೇತ್ರ, ಸಾಮಾಜಿಕ, ಸೇವಾ ಕ್ಷೇತ್ರಗಳ ಕಾರ್ಯವನ್ನು ಗುರುತಿಸಿ ಹಲವು ಪ್ರಶಸ್ತಿ ಸನ್ಮಾನಗಳು ಅರಸಿ ಬಂದಿವೆ.

Exit mobile version