Kundapra.com ಕುಂದಾಪ್ರ ಡಾಟ್ ಕಾಂ

ಪ್ಲೈಓವರ್ ಮೂಲಕ ನಗರಕ್ಕೆ ಪ್ರವೇಶ ಪ್ರಸ್ತಾಪವನ್ನು ಅಧಿಕಾರಿಗೆ ತಲುಪಿಸಲಾಗುವುದು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪ್ಲೈಓವರ್ ಮೂಲಕ ನಗರಕ್ಕೆ ಸಂಪರ್ಕಿಸಲು ಪ್ರವೇಶ ಮಾಡಿಕೊಡುವ ಬಗ್ಗೆ ಶಾಸಕರು ಗಮನಕ್ಕೆ ತಂದಿದ್ದು ಅವರ ಮನವಿಯನ್ನು ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸುವುದಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕೇಂದ್ರ ಸಚಿವೆಯಾದ ಬಳಿಕ ಗುರುವಾರ ಕುಂದಾಪುರಕ್ಕೆ ಮೊದಲ ಬಾರಿಗೆ ಆಗಮಿಸಿದ ಅವರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನೂತನಾಗಿ ನಿರ್ಮಾಣಗೊಂಡ ಆಕ್ಸಿಜನ್ ಉತ್ಪಾದನಾ ಘಟಕವನ್ನು ವೀಕ್ಷಿಸಿ ಬಳಿಕ ಮಾತನಾಡಿ ಕುಂದಾಪುರದ ಫ್ಲೈಓವರ್ ಜನರೇ ಉದ್ಘಾಟಿಸಿದ್ದಾರೆ. ಸ್ಥಳೀಯ ಶಾಸಕರು ಉದ್ಘಾಟನಾ ಕಾರ್ಯಕ್ರಮಗಳಿಗೆಲ್ಲ ಬರುವವರಲ್ಲ. ಹಾಗಾಗಿ ನಾವು ಉದ್ಘಾಟಿಸುವುದೇನಿಲ್ಲ ಎಂದು ಹಾಸ್ಯಚಟಾಕಿ ಹಾರಿಸಿದರು.

ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಮಿಷಕ್ಕೆ 500 ಲೀ ಆಕ್ಸಿಜನ್ ಉತ್ಪಾದಿಸುವ ಘಟಕ ಉದ್ಘಾಟನೆಗೆ ಸಿದ್ಧವಾಗಿದೆ. ಅದು ತಕ್ಷಣವೇ ಕಾರ್ಯಾಚರಿಸಲಿದ್ದು, ಉದ್ಘಾಟನೆಗೆ ಪೆಟ್ರೋಲಿಯಂ ಸಚಿವರು ಬರುವ ಮಾಹಿತಿಯಿದ್ದು ಹಾಗಾಗಿ ಸ್ವಲ್ಪ ದಿನ ಮುಂದೂಡಲಾಗಿದೆ ಎಂದರು.

ಸೌದಿ ರಾಜನ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆಂಬ ಆರೋಪದಡಿಯಲ್ಲಿ ಅವರನ್ನು ಬಂಧಿಸಲಾಗಿದ್ದ ಹರೀಶ್ ಬಂಗೇರ ಅವರ ಬಿಡುಗಡೆ ಬಹಳ ಕಷ್ಟದಲ್ಲಿ ಆಗಿದೆ. ಸಾಮಾನ್ಯವಾಗಿ ರಾಜ ಪರಿವಾರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಕಠಿಣವಾದ ಶಿಕ್ಷೆಯನ್ನು ಕೊಡುತ್ತಾರೆ. ಆದರೆ ಹರೀಶ್ ಬಂಗೇರ ಸೌದಿ ಜೈಲಿನಲ್ಲಿ ಉಳಿದಿರುವುದೇ ಹೆಚ್ಚು. ಸತ್ಯವನ್ನು ಸಾಬೀತುಪಡಿಸಿದ ಮೇಲೆ ಅವರಿಗೆ ಬಿಡುಗಡೆಯಾಗಿದೆ. ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ರಾಯಭಾರಿ ಕಚೇರಿಯ ಸತತ ಪ್ರಯತ್ನದಿಂದ ಬಿಡುಗಡೆ ಸಾಧ್ಯವಾಗಿದೆ ಎಂದರು.

Exit mobile version