Kundapra.com ಕುಂದಾಪ್ರ ಡಾಟ್ ಕಾಂ

ಆನೆಗುಡ್ಡೆಯಲ್ಲಿ ‘ಕಾಂತಾರ’ ಚಿತ್ರಕ್ಕೆ ಮುಹೂರ್ತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ಶೆಟ್ಟಿ ಅವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಸಿನೆಮಾ ’ಕಾಂತಾರ’ ಮುಹೂರ್ತ ತಾಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿತು.

ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಮಂಜುನಾಥ್ ಕೆ.ಎಸ್ ಕ್ಲಾಪ್ ಮಾಡಿದರು, ಯುವ ಮೆರಿಡಿಯನ್ ಉದಯಕುಮಾರ್ ಶೆಟ್ಟಿ ಕ್ಯಾಮರಾಕ್ಕೆ ಚಾಲನೆ ನೀಡಿದರು. ಈ ವೇಳೆ ನಿರ್ಮಾಪಕ ವಿಜಯ ಕಿರಗಂದೂರು, ನಟರಾದ ಪ್ರಮೋದ್ ಶೆಟ್ಟಿ, ನಟಿ ಸಪ್ತಮಿ ಗೌಡ, ಕಾರ್ತಿಕ್ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.

ಕಾಂತಾರ – ಒಂದು ದಂತಕಥೆ ಚಿತ್ರಕ್ಕೆ ರಿಷಬ್ ಶೆಟ್ಟಿ ಅವರೇ ಆಕ್ಷನ್ ಕಟ್ ಹೇಳುತ್ತಿದ್ದು, ನಾಯಕ ನಟನಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ನಟಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ನ ವಿಜಯ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇತ್ತಿಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಿನೆಮಾದ ಪೋಸ್ಟ್‌ರ್ ಬಿಡುಗಡೆಗೊಳಿಸಿ, ಈ ಕಿಚ್ಚು ನಮ್ಮ ಸುತ್ತಲೂ ಸದ್ಯ ಕವಿದಿರುವ ಕರಾಳತೆಯನ್ನು ದಹಿಸುತ್ತದೆ ಎಂಬ ನಂಬಿಕೆಯೊಂದಿಗೆ… ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದರು.

Exit mobile version