Kundapra.com ಕುಂದಾಪ್ರ ಡಾಟ್ ಕಾಂ

ಭಾರತ ಬಿಟ್ಟು ತೊಲಗಿ ಆಂದೋಲನ – ಉಪನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಕೋಡಿ ಬ್ಯಾರೀಸ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಏರ್ಪಡಿಸಲಾದ ‘ ಭಾರತ ಬಿಟ್ಟು ತೊಲಗಿ ಆಂದೋಲನ’ ಎಂಬ ವಿಷಯವಾಗಿ ನಿವೃತ್ತ ಪ್ರಾಂಶುಪಾಲರಾದ ಡಾ ದಿನೇಶ್ ಹೆಗ್ಡೆ ಉಪನ್ಯಾಸ ನೀಡಿದರು.

ಭಾರತ ಬ್ರೀಟಿಷರ ಆಡಳಿತಕ್ಕೆ ಒಳಪಟ್ಟನಂತರ ನಡೆದ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಗುರುತಿಸಿದರು. ಸಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ‘ ಭಾರತ ಬಿಟ್ಟು ತೊಲಗಿ ಆಂಧೋಲನ’ ಅತ್ಯಂತ ಪ್ರಮುಖವಾದುದು ಮಾತ್ರವಲ್ಲ, ಅದು ಕೊನೆಯ ಘಟ್ಟವಾಗಿ ಪರಿಣಮಿಸಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಬಂಗಾಳ ವಿಭಜನೆ, ಅದರಿಂದ ಭಾರತೀಯರಮೇಲೆ ಆದ ಪರಿಣಾಮ ಮತ್ತು ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮಿಸಿ, ಸ್ವಾತಂತ್ರ್ಯಚಳುವಳಿಯಲ್ಲಿ ಭಾಗವಹಿಸಿದ ಪ್ರಾರಂಭದ ದಿನಗಳು ಹೇಗಿದ್ದವು ಎಂಬುದನ್ನು ತಿಳಿಸಿದರು. 1909 ರ ಮೋರ್ಲೆ ಮಿಂಟೋ ಸುಧಾರಣೆಗಳು, 1935 ರ ಗವರ್ನಮೆಂಟ್ ಆಫ್ ಇಂಡಿಯಾ ಕಾಯ್ದೆ , ಹಾಗೂ ಇಂತಹ ಹಲವಾರು ಕಾಯ್ದೆಗಳನ್ನು ಜಾರಿಗೊಳಿಸಿ, ಇವುಗಳೊಂದಿಗೆ ಶಿಕ್ಷಣದಲ್ಲಿ ಹಲವಾರು ಬದಲಾವಣೆಗಳನ್ನು ಮಾಡುವದರ ಮೂಲಕ ಭಾರತೀಯರ ಮನವೊಲಿಸುವ ಪ್ರಯತ್ನಗಳು ನಡೆದುದರ ಕುರಿತು ವಿವರಿಸಿದರು. ಇದರ ಪರಿಣಾಮ ಭಾರತದಲ್ಲಿ ಹೊಸ ಚಿಂತನೆ ಪ್ರಾರಂಭಗೊಂಡಿತು ಮತ್ತು ಸ್ವಾತಂತ್ರ್ಯ ಹೋರಾಟ ನೂತನ ತಿರುವುಗಳನ್ನು ಪಡೆದುಕೊಂಡಿತು.

1939 ರಲ್ಲಿ ಪ್ರಾರಂಭಗೊಂಡ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಕಾಣಿಸಿಕೊಂಡ ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರ ನಡುವಿನ ಪೈಪೋಟಿ, ಆ ಸಂದರ್ಭದಲ್ಲಿ ಭಾರತೀಯರು ಬ್ರೀಟಿಷರನ್ನು ಬೆಂಬಲಿಸುವದರ ಕುರಿತು ತೆಗೆದುಕೊಳ್ಳಬೇಕಾದ ನಿಲುವು ಅತ್ಯಂತ ಸೂಕ್ಷ್ಮ ನಿರ್ಣಾಯಕ ನಿರ್ಧಾರವಾಗಿತ್ತು. ಯುದ್ಧದ ನಂತರ ಭಾರತಕ್ಕೆ ಸ್ವಾತಂತ್ರ್ಯ ಎಂಬ ಬ್ರೀಟಿಷರ ನಿಲುವಿಗೆ, ಮೊದಲು ಸ್ವಾತಂತ್ರ್ಯ ಆ ನಂತರ ಬೆಂಬಲ ಎಂಬ ಮಾತು ಗಾಂಧಿಯವರದಾಗಿತ್ತು.

1942 ರಲ್ಲಿ ಕಾಂಗ್ರೆಸ್ ವರ್ಕಿಂಗ್ ಸಮಿತಿ ವಾರ್ಧಾದಲ್ಲಿ ನಡೆಸಿದ ಸಭೆ, ಮತ್ತು ಆ ಸಭೆಯ ನಿರ್ಣಯಗಳು, ಕಾಂಗ್ರೆಸ್ ನಾಯಕತ್ವದ ಜೊತೆ ಕ್ರಿಪ್ಪ್ಸ್ ಮಿಷನ್ ಮಾತುಕತೆ, ಎಲ್ಲವೂ ಸ್ವಾತಂತ್ರ್ಯ ಹೋರಾಟವನ್ನು ಒಂದು ಪ್ರಮುಖ ಹಂತಕ್ಕೆ ತಂದು ನಿಲ್ಲಿಸಿತ್ತು.

ಅಹಿಂಸಾ ತತ್ವವನ್ನು ಪ್ರಧಾನವಾಗಿಟ್ಟುಕೊಂಡು ಸ್ವಾತಂತ್ರ್ಯ ಚಳುವಳಿಯನ್ನು ಕಟ್ಟಿದ ಮತ್ತು ಮುನ್ನಡೆಸಿದವರು ಗಾಂಧೀಜಿಯವರು. ಅವರು ಸ್ವಾತಂತ್ರ್ಯ ಚಳುವಳಿಯ ಕೊನೆಯ ಹೋರಾಟವಾಗಿಸಬೇಕೆಂಬ ಆಶಯದೊಂದಿಗೆ 1942 ರಲ್ಲಿ ‘ ಭಾರತ ಬಿಟ್ಟು ತೊಲಗಿ ಆಂಧೋಲನ’ಕ್ಕೆ ಕರೆಕೊಟ್ಟರು. ಇಡೀ ಭಾರತದ ಜನಸಮೂಹ, ನಾಯಕರು ಸಹಕಾರ ಸೂಚಿಸಿ ಬೆಂಬಲಿಸದರು. ಈ ಚಳುವಳಿಯ ಕುರಿತು ಹಲವರಿಗೆ ಭಿನ್ನಾಭಿಪ್ರಾಯಗಳಿದ್ದವು. ಅಲ್ಲಲ್ಲಿ ಆಂದೋಲನದ ಸಂದರ್ಭದಲ್ಲಿ ಹಿಂಸೆಯು ಕಾಣಿಸಿಕೊಂಡಿತು. ಅಹಿಂಸೆಯೇ ಮೂಲ ಮಂತ್ರವಾಗಿ ನಂಬಿದ ಗಾಂಧೀಜಿಯವರ ಮನಸ್ಸಿಗೆ ತುಂಬ ಘಾಸಿಯಾಗಿತ್ತು. ಗಾಂಧೀಜಿಯವರು ಈ ಆಂದೋಲನದ ನಂತರ ತುಂಬಾ ಟೀಕೆಗೆ ಗುರಿಯಾದರು. ಇದೊಂದು ವೈಫಲ್ಯತೆಯನ್ನು ಕಂಡ ಚಳುವಳಿ ಎಂದು ಪ್ರತಿಬಿಂಬಿಸಲಾಯಿತು. ಆದರೆ ಇಂದೊಂದು ಪ್ರಮುಖ ಆಂದೋಲನವಾಗಿ ಇತಿಹಾಸದ ಪುಟಗಳಲ್ಲಿ ಉಳಿದಿರುವುದು ಬಹಳ ಮುಖ್ಯ ಮತ್ತು ಸ್ವಾತಂತ್ರ್ಯ ಹೋರಾಟದ ಕೊನೆಯ ಘಟಕ್ಕೆ ತಲುಪಿಸದ ಆಂದೋಲನ ಎಂದು ದಾಖಲಾಯಿತು. ಇದರ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ ಎನ್ನುವುದು ಬಹಳ ಮುಖ್ಯವಾದ ಸಂಗತಿ ಎಂದು ಡಾ ದಿನೇಶ್ ಹೆಗ್ಡೆ ಯವರು ಅಭಿಪ್ರಾಯಪಟ್ಟರು.

ಕುಂದಾಪುರದ ಪರಿಸರದಲ್ಲಿ ಊರಿನ ಪ್ರಮುಖರು, ಹೆಸರಾಂತ ಮನೆತನಗಳ ಹಿರಿಯರು, ಸುತ್ತಮುತ್ತಲಿನ ಜನರು ಈ ಆಂದೋಲನದಲ್ಲಿ ಭಾಗಿಯಾಗಿದ್ದರು. ಅಸಹಕಾರ ಚಳುವಳಿ, ಕರ ನಿರಾಕರಣೆ, ಉಪವಾಸ ಸತ್ಯಾಗ್ರಹ ಮುಂತಾದವುಗಳು ಅಲ್ಲಲ್ಲಿ ನಡೆದಿವೆ ಎಂಬ ದಾಖಲೆಗಳು ಇವೆ ಎಂದು ಹೇಳುತ್ತಾ ಡಾ. ದಿನೇಶ್ ಹೆಗ್ಡೆ ಯವರು ತಮ್ಮ ಉಪನ್ಯಾಸವನ್ನು ಮುಕ್ತಾಯಗೊಳಿಸಿದರು.

ಸ್ವಾಗತ ಮತ್ತು ಧನ್ಯವಾದ ಸಮರ್ಪಣೆಗಳನ್ನು ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಸಿದ್ದಪ್ಪ ಕೆ. ಎ ಸ್. ನೆರವೇರಿಸಿದರು . ಉಪನ್ಯಾಸಕಾರರ ಪರಿಚಯದೊಂದಿಗೆ ಪ್ರಾಸ್ತಾವಿಕ ಮಾತುಗಳನ್ನು ಬ್ಯಾರೀಸ್ ಸಮೂಹ ಸಂಸ್ಥೆಗಳ ನೀರ್ದೇಶಕರು ದೋಮ ಚಂದ್ರಶೇಖರ್ ನುಡಿದರು.

Exit mobile version