Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ನವಶಕ್ತಿ ಮಹಿಳಾ ವೇದಿಕೆಯಿಂದ ಶಿಕ್ಷಕರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ನೆಹರು ಯುವ ಕೇಂದ್ರ ಉಡುಪಿ ಹಾಗೂ ನವಶಕ್ತಿ ಮಹಿಳಾ ವೇದಿಕೆ ರಿ. ಕೊಲ್ಲೂರು ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರ ಸನ್ಮಾನ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಲಗೇರಿ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಸಲಗೇರಿ ಶಾಲೆಯ ಮುಖ್ಯ ಶಿಕ್ಷಕಿ ಸುಮಿತ್ರಾ ಶೆಟ್ಟಿ ಮತ್ತು ಸಹ ಶಿಕ್ಷಕಿ ರಂಜಿತ ಅವರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಹಾಗೂ ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷೆ ಗ್ರೀಷ್ಮಾ ಗಿರಿಧರ ಭಿಡೆ ಮುಗ್ದ ಮನದಲ್ಲಿ ಅಕ್ಷರವ ಬಿತ್ತಿ,ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ, ಸುಂದರ ನಾಡ ಕಟ್ಟುವ ಶಿಲ್ಪಿಗಳು ಶಿಕ್ಷಕರು,ಮಕ್ಕಳ ಲಾಲನೆ ಪಾಲನೆಯಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವೋ ಮಕ್ಕಳ ಬೌದ್ಧಿಕ ಜ್ಞಾನವನ್ನು ವೃದ್ಧಿಸುವಲ್ಲಿ ಶಿಕ್ಷಕನ ಪಾತ್ರವೂ ಅಷ್ಟೇ ಮುಖ್ಯ ಎಂದರು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಮುಖ್ಯ ಶಿಕ್ಷಕಿ ಸುಮಿತ್ರಾ ಶೆಟ್ಟಿ ನವಶಕ್ತಿ ಮಹಿಳಾ ವೇದಿಕೆ ಯವರು ನಮ್ಮನ್ನು ಗುರುತಿಸಿ ಸನ್ಮಾನಿಸಿದ್ದು ನಮಗೆ ತುಂಬಾ ಸಂತೋಷವಾಗಿದೆ, ನವಶಕ್ತಿ ಮಹಿಳಾ ವೇದಿಕೆಯ ಅಧ್ಯಕ್ಷರಿಗೂ ಹಾಗೂ ಸರ್ವ ಸದಸ್ಯರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಅಡಿಗೆ ಸಿಬ್ಬಂದಿಯವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಭಾಸ್ಕರ್ ನಾಯ್ಕ, ಸದಸ್ಯರಾದ ಸುಗುಣ, ಜಯಲಕ್ಷ್ಮಿ, ಸುಷ್ಮಾ, ರತ್ನ ಮತ್ತು ಹಾಗೂ ಅಂಗನವಾಡಿ ಕಾರ್ಯಕರ್ತೆ ಪದ್ಮ ಉಪಸ್ಥಿತರಿದ್ದರು.

Exit mobile version