Kundapra.com ಕುಂದಾಪ್ರ ಡಾಟ್ ಕಾಂ

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಿಂದ ರೈತಸಿರಿ ಅಗ್ರಿ ಮಾಲ್ – ಎಸ್. ಪ್ರಕಾಶ್ಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರಾಜ್ಯದ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿಯೇ ಮೊದಲ ಭಾರಿಗೆ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಒಂದು ವಿಶಿಷ್ಟ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದು, ಸಂಘದ ಮಾಲಿಕತ್ವದಲ್ಲಿ ವಿಶಿಷ್ಟ ವಿನ್ಯಾಸದ ರೈತಸಿರಿ ಅಗ್ರಿ ಮಾಲ್ ಎಂ.ಎಸ್.ಸಿ ಯೋಜನೆಯು ಕೇಂದ್ರ ಸರಕಾರದ ಆತ್ಮನಿರ್ಭರ ಭಾರತ್ ಯೋಜನೆಯಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಅವರು ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಒಟ್ಟು ರೂ. 15 ಕೋಟಿ ವಿನಿಯೋಗದ ರೈತಸಿರಿ ಎಗ್ರಿ ಮಾಲ್ ಬೃಹತ್ ಪ್ರಮಾಣದ ಯೋಜನೆಯಾಗಿದ್ದು, ಬಹುಮಹಡಿ ಕಟ್ಟಡದಲ್ಲಿ ರೈತರಿಗಾಗಿ ಒಂದೇ ಸೂರಿನಡಿ ಹಲವು ಸೌಲಭ್ಯಗಳು ದೊರೆಯಲಿದೆ ಎಂದರು.

ರೈತಸಿರಿ ಅಗ್ರಿ ಮಾಲ್ ಕೃಷಿ ಸರ್ವಿಸ್ ಸೆಂಟರ್ಗಳು, ಸೂಪರ್ ಮಾರ್ಕೆಟ್‌ಗಳು, ಬಡಗಿ, ಕಮ್ಮಾರಿಕೆ, ಗ್ಯಾರೇಜ್, ವೆಲ್ಡಿಂಗ್ ಶಾಪ್, ಇಲೇಕ್ಟ್ರೀಕಲ್ ಸರ್ವಿಸ್, ಫಾರ್ಮರ್ ಕ್ಲಬ್, ಕೃಷಿಕ ತರಬೇತಿ ಕೇಂದ್ರ, ಕೃಷಿ ಯಂತ್ರೋಪಕರಣಗಳ ಮಳಿಗೆ, ಉಪಹಾರ ಕೇಂದ್ರ ಅಲ್ಲದೇ ಸಭಾಂಗಣ ಎಸ್ಕ್ಯುಲೇಟರ್, ಲಿಫ್ಟ್ ಹಾಗೂ ಸೂತ್ತಲೂ ವಿಶಾಲವಾದ ಪಾರ್ಕಿಂಗ್ ಮಾಡಲು ರ್ಯಾಂಪ್ನ ವ್ಯವಸ್ಥೆ ಇದೆ ಮಳಿಗೆಯು ಒಟ್ಟು 32000 ಚದರ ವಿಸ್ತೀರ್ಣ ಮತ್ತು 8000 ಚದರ ಅಡಿ ಟೆರೇಸ್್ವ ಇದ್ದು ವಿಶೇಷ ವಿನ್ಯಾಸವನ್ನು ಒಳಗೊಂಡಿದೆ.

ಅಂದಾಜು ರೂ. 7.65ಕೋಟಿ ವೆಚ್ಚದ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಅಂದಾಜು ರೂ.3 ಕೋಟಿ ವೆಚ್ಚದ ಒಳಾಂಗಣ ವಿನ್ಯಾಸ ಹಾಗೂ ಅಂದಾಜು ರೂ.4 ಕೋಟಿ ದುಡಿಯುವ ಬಂಡವಾಳದೊಂದಿಗೆ ಯೋಜನೆ ಜಾರಿಗೆ ಬರಲಿದ್ದು, ನಬಾರ್ಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್ನ ಮೂಲಕ ಶೇಕಡಾ 1 ಬಡ್ಡಿ ದರದಲ್ಲಿ ರೂ.3.35 ಕೋಟಿ ಸಾಲ ಮಂಜೂರುಗೊಂಡಿರುತ್ತದೆ. ಇದಕ್ಕೆ ಪೂರಕಗೊಂಡು ಸಹಕಾರ ಸಂಘಗಳ ನಿಬಂಧಕರು ಬೆಂಗಳೂರು ಇವರಿಂದ ಆಡಳಿತಾತ್ಮಕ ಅನುಮತಿ ಮಂಜೂರಾಗುತ್ತದೆ.

ಈ ಯೋಜಯು ನವರಾತ್ರಿ ಶುಭ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಶಾಸಕರಾದ ಬಿ. ಎಂ ಸುಕುಮಾರ ಶೆಟ್ಟಿ ಇವರ ಮೂಲಕ, ರಾಜ್ಯದ ಸಹಕಾರ ಸಚಿವರಾದ ಎಸ್.ಟಿ ಸೋಮಶೇಖರ ಇವರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಶಂಕು ಸ್ಥಾಪನೆ ಕಾರ್ಯಕ್ರಮವು ನೆರವೇರಲಿದೆ.

ಅಲ್ಲದೇ ಈ ಯೋಜನೆಗೆ ಪೂರಕವಾಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸುಮಾರು 65 ಸೆಂಟ್ಸ್ ನಿವೇಶನ ಖರೀದಿ ಮಾಡುವುದಾಗಿದ್ದು ಪ್ರಾಸ್ತಾವಿಕ ಯೋಜನೆಯಲ್ಲಿ ಕೃಷಿ ನಿತ್ಯ ಸಂತೆ, ಕೃಷಿ ಮತ್ತು ಕೃಷಿಕರ ಅಭ್ಯುದಯಕ್ಕಾಗಿ ಕೃಷಿ ಉತ್ಪನ್ನ ಖರೀದಿ, ಮಾರುಕಟ್ಟೆ ಮತ್ತು ಕೋಲ್ಡ್ ಸ್ಟೊರೇಜ್ ವ್ಯವಸ್ಥೆಯನ್ನು ಒಳಗೊಂಡಿರುವ ಬೃಹತ್ ಗೋದಾಮು ಹಾಗೂ ದಾಸ್ತಾನು ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದೆ.

ಈ ಯೋಜನೆಯನ್ನು ಬಳಸಿಕೊಂಡು ಸಂಘದ ಕಾರ್ಯವ್ಯಾಪ್ತಿಯಲ್ಲಿರುವ ಕ್ಯಾಂಪ್ಕೋ ಮಾದರಿಯಲ್ಲಿ ಅಡಿಕೆ, ತೆಂಗು, ಭತ್ತ, ನೆಲಗಡಲೆ ಹಾಗೂ ಕಾಡುತ್ಪತ್ತಿ ಇತ್ಯಾದಿ ಬೆಳೆಗಳನ್ನು ಖರೀದಿಸಿ ದಾಸ್ತಾನು ಮಾಡಿ, ಉತ್ತಮ ದರ ಹಾಗೂ ಮಾರುಕಟ್ಟೆ ಸಂಘದಿಂದ ಒದಗಿಸುವ ದೂರದೃಷ್ಟಿ ಯೋಜನೆಯಾಗಿರುತ್ತದೆ. ಇದರಿಂದ ಸಂಘದ ಕಾರ್ಯವ್ಯಾಪ್ತಿಯ ನೂರಾರು ಯುವಕ, ಯುವತಿಯರಿಗೆ ಉದ್ಯೋಗಾವಕಾಶ ಕಲ್ಪನೆಯನ್ನು ಹೊಂದಿದ್ದು ಈ ಯೋಜನೆಯು ಯಶಸ್ವಿಗೊಳಿಸುವಲ್ಲಿ ರೈತಾಪಿ ವರ್ಗದ ಮತ್ತು ಮದ್ಯಮ ವರ್ಗದ ಸಹಕಾರವನ್ನು ಸಂಘವು ಸದಾ ಬಯಸುತ್ತದೆ.

9.75 ಬಡ್ಡಿದರದಲ್ಲಿ ಗೃಹಸಾಲ:
ಸಂಘವು 202-21ನೇ ಸಾಲಿನಲ್ಲಿ ರೂ.800 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ಮಾಡಿದ್ದು ರೂ.4.47ಕೋಟಿ ನಿವ್ವಳ ಲಾಭ ಗಳಿಸಿದೆ. ಸಂಘವು ಅ.31ಕ್ಕೆ ಠೇವಣಾತಿ ರೂ 174.72ಕೋಟಿ, ನಿಧಿ ರೂ.20.49ಕೋಟಿ, ಠೇವಣಿ ಹೂಡಿಕೆ 70.47ಕೋಟಿ, ಸದಸ್ಯರ ಹೊರಬಾಕಿ ಸಾಲ 152.79ಕೋಟಿ ಇದೆ. ಸಂಘವು ನಿರಂತರ ಲಾಭ ಹೊಂದಿರುದರಿಂದ ಸಂಘದ ಸದ್ಯರಿಗೆ ಕೆಲವೊಂದು ಷರತ್ತಿಗೊಳಪಟ್ಟು ಗೃಹಸಾಲ ಪಡೆಯುವರೇ ಶೇಕಡಾ 9.75ರಂತೆ ಹಾಗೂ 20 ವರ್ಷಗಳ ಇಎಂಐ ಸಮಾನ ಮಾಸಿಕ ಕಂತುಗಳ ಸರಳ ಬಡ್ಡಿಯಲ್ಲಿ ಸೌಲಭ್ಯ ನೀಡಲಾಗುವುದು ಎಂದರು. ಈಗಾಗಲೇ ಸಂಘವು ನವೋದಯ ಹಾಗೂ ರೈತಸಿರಿ ಸ್ವಸಹಾಯ ಗುಂಪುಗಳನ್ನು ರಚಿಸಿದ್ದು, ಗುಂಪಿನ ಸದಸ್ಯರ ಅಭಿವೃದ್ದಿ ನೆಲೆಯಲ್ಲಿ ಗುಂಪಿನ ಸಾಲಗಳಿಗೆ 9.75ರಂತೇ ಇಎಂಐ ಸಮಾನ ಮಾನಸಿಕ ಕಂತುಗಳೊಂದಿಗೆ ಸರಳ ಬಡ್ಡಿಯಲ್ಲಿ ಈ ಸೌಲಭ್ಯ ನೀಡಲಾಗುತ್ತದೆ.

ಸಂಘವು ರಸಾಯಿನಿಕ ಗೊಬ್ಬರ, ಕೃಷಿ ಉಪಕರಣಗಳ ಮಾರಾಟ ಮತ್ತು ಬಾಡಿಗೆ, ಪಡಿತರ ಸಾಮಾಗ್ರಿ ವಿತರಣೆ ಮೀನುಗಾರಿಕಾ ಸೀಮೆಎಣ್ಣೆ ವಿತರಣೆ ಪ್ರಧಾನ ಮಂತ್ರಿ ಯೋಜನೆಯ ಡಿಜಿಟಲ್ ಸೇವಾಸಿಂಧೂ ಹಾಗೂ ಇನ್ನಿತರ ಸೇವಾ ಸೌಲಭ್ಯ ಸದಸ್ಯರಿಗೆ, ಗ್ರಾಹಕರಿಗೆ ನೀಡುತ್ತಾ ಬಂದಿದೆ ಎಂದರು.

ಮಾಧ್ಯಮಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಈಶ್ವರ, ನಿರ್ದೇಶಕರುಗಳಾದ ರಘುರಾಮ ಶೆಟ್ಟಿ ಬಿ., ಮೋಹನ ಪೂಜಾರಿ, ಸುರೇಶ್ ಶೆಟ್ಟಿ, ಗುರುರಾಜ ಹೆಬ್ಬಾರ್, ವಿರೇಂದ್ರ ಶೆಟ್ಟಿ, ಮಂಜು ದೇವಾಡಿಗ, ನಾಗರಾಜ ಖಾರ್ವಿ, ಭರತ್ ದೇವಾಡಿಗ, ಹೂವ ನಾಯ್ಕ್, ದಿನೇಶ್ ಶೆಟ್ಟಿ, . ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ, ಹಿರಿಯ ಪ್ರಬಂಧಕ ಚಂದಯ್ಯ ಶೆಟ್ಟಿ, ಕೃಷಿ ಅಧಿಕಾರಿ ಈಶ್ವರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

Exit mobile version