Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿ ಕೇಂದ್ರಿತ ಶೈಕ್ಷಣಿಕ ವ್ಯವಸ್ಥೆ: ಪ್ರೋ. ಕರುಣಾಕರ್ ಕೊಟೇಗಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರಾಷ್ಟ್ರೀಯ ಶಿಕ್ಷಣ ನೀತಿ – 2020 ವಿದ್ಯಾರ್ಥಿ ಕೇಂದ್ರಿತ ನೀತಿಯಾಗಿದ್ದು, ಇದರಲ್ಲಿನ ಪ್ರತಿ ಅಂಶವನ್ನೂ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ರೂಪಿಸಲಾಗಿದೆ. ಹೊಸ ಶಿಕ್ಷಣ ನೀತಿಯ ಮೂಲಕ ಆಸಕ್ತಿ-ಕೌಶಲ್ಯ ಆಧಾರಿತ ಕಲಿಕೆ ಹಾಗೂ ದೇಶದ ಮಾನವ ಸಂಪನ್ಮೂಲದ ಸದ್ಬಳಕೆ ನಿಜಾರ್ಥದಲ್ಲಿ ಆಗಲಿದೆ ಎಂದು ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಪ್ರೋ. ಕರುಣಾಕರ ಕೊಟೇಗಾರ್ ಹೇಳಿದರು.

ಅವರು ಗುರುವಾರ ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟೀಯ ಶಿಕ್ಷಣ ನೀತಿ ಕುರಿತು ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣ ವ್ಯವಸ್ಥೆ ಸರಿಯಿದ್ದಲ್ಲಿ ದೇಶ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ. ಎಳು ದಶಕಗಳ ಹಳೆಯದಾದ ಪಾಶ್ಚಾತ್ಯರ ಪಳೆಯುಳಿಕೆಯಂತಿರುವ ಶಿಕ್ಷಣ ನೀತಿಯು ಭಾರತೀಯರ ವ್ಯಕ್ತಿತ್ವನ್ನು ರೂಪಿಸಲು ಸಾಧ್ಯವಿಲ್ಲ. ಹಾಗಾಗಿಯೇ ದೇಶದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ ಎಂದರು.

ಅಂಕ ಗಳಿಸುವುದಕ್ಕಾಗಿ ಪಡೆಯುವ ಶಿಕ್ಷಣಕ್ಕೂ, ಅಂತಹ ಶಿಕ್ಷಣದ ಹೊರತಾಗಿ ಪಡೆಯುವ ಕೌಶಲ್ಯಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈಗಿನ ಶಿಕ್ಷಣ ಪದ್ದತಿಯಲ್ಲಿ ವಿದ್ಯಾರ್ಥಿಗಳನ್ನು ಅಂಕಗಳಿಸುವ ಸರಕನ್ನಾಗಿ ರೂಪಿಸಲಾಗುತ್ತಿದೆ. ವಿದ್ಯಾವಂತರಾಗುತ್ತಲೇ ಜೀವನ ಕೌಶಲ್ಯ ಕಲಿಸುವುದು ಅತಿ ಮುಖ್ಯವಾಗಿದ್ದು, ಬಾಲ್ಯದಿಂದಲ್ಲೇ ವಿದ್ಯಾರ್ಥಿಯ ಆಸ್ತಕಿಯನ್ನು ಹಾಗೂ ಕಡ್ಡಾಯವಾಗಿ ಕಲಿಯಬೇಕಾದ ಅಂಶವನ್ನು ಗುರುತಿಸಿ ಕಲಿಸುವ ವ್ಯವಸ್ಥೆ ನೂತನ ಶಿಕ್ಷಣ ನೀತಿಯಲ್ಲಿ ಇರಲಿದೆ ಎಂದರು.

ಕಾಲೇಜಿನ ಪ್ರಾಂಶಪಾಲರಾದ ಪ್ರೋ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಪ್ರಭಾ ಅಕಾಡೆಮಿಯ ಮುಖ್ಯಸ್ಥರಾದ ಭರತ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಕಾಲೇಜಿನ 11 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರೋ. ಕರುಣಾಕರ ಕೋಟೆಗಾರ್ ಹಾಗೂ ಭರತ್ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂಟರ್ನಲ್ ಕ್ವಾಲಿಟಿ ಅಸೆಸ್ಮೆಂಟ್ ಸೆಲ್ ಕೋ-ಆರ್ಡಿನೇಟರ್ ಅವಿತಾ ಕೊರಿಯಾ ಉಪನ್ಯಾಸಕರನ್ನು ಪರಿಚಯಿಸಿದರು. ಉಪನ್ಯಾಸಕ ಸುಧಾಕರ ಪರಂಪಳ್ಳಿ ಸ್ವಾಗತಿಸಿದರು. ವಿಭಾಗದ ಉಪನ್ಯಾಸಕ ಪ್ರವೀಣ್ ಮೊಗವೀರ ವಂದಿಸಿದರು. ಉಪನ್ಯಾಸಕಿ ಆಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರೋ. ಕರುಣಾಕರ ಕೋಟೇಗಾರ್ ಅವರ ರಾಷ್ಟ್ರೀಯ ಶಿಕ್ಷಣ ನೀತಿ ಬಗೆಗಿನ ವೀಡಿಯೋ ಸರಣಿ
Exit mobile version