Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾಹನ ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ದಾನಿಗಳು ಸಹಕಾರ ನೀಡುತ್ತಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ಕೂಡ ಸರಕಾರಿ ಶಾಲೆಗಳಲ್ಲಿ ದೊರೆಯುತ್ತಿದೆ. ಶಾಲಾ ವಾಹನ ಸೌಲಭ್ಯ ಇರುವ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇಂತಹ ಕಾಲಘಟ್ಟದಲ್ಲಿ ದಾನಿಗಳ ಸಹಕಾರದೊಂದಿಗೆ ಶಾಲೆಗೆ ಸುಸಜ್ಜಿತ ಹೊಸ ಶಾಲಾ ವಾಹನವನ್ನು ಹೊಂದುವ ಮೂಲಕ ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಮೈಲಿಗಲ್ಲನ್ನು ನೆಟ್ಟಿದೆ ಎಂದು ಗಂಗೊಳ್ಳಿಯ ಉದ್ಯಮಿ ಎಚ್. ಗಣೇಶ ಕಾಮತ್ ಹೇಳಿದರು.

ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಂಚಾಡಿ ಸಬಿತಾ ಶೆಣೈ ಹಾಗೂ ದಾನಿಗಳು ಕೊಡಮಾಡಿದ ಹೊಸ ಶಾಲಾ ವಾಹನವನ್ನು ಶನಿವಾರ ಹಸ್ತಾಂತರಿಸಿ ಅವರು ಮಾತನಾಡಿದರು.

ದಿ.ಕೊಂಚಾಡಿ ಗಣಪತಿ ಶೆಣೈ ಅವರು ಶಾಲೆಯ ಬೆನ್ನೆಲುಬಾಗಿ ನಿಂತು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರು ಸುಮಾರು 12 ವರ್ಷಗಳ ಹಿಂದೆ ಶಾಲಾ ವಾಹನವನ್ನು ಕೊಡುಗೆಯಾಗಿ ನೀಡಿದ್ದು, ಇದೀಗ ಅವರ ಪತ್ನಿ ಸಬಿತಾ ಶೆಣೈ ಅವರು ಹೊಸ ವಾಹನಕ್ಕಾಗಿ ಕೊಡುಗೆಯನ್ನು ನೀಡಿರುವುದು ಅಭಿನಂದನೀಯ. ಇವರ ಕೊಡುಗೆಗಳನ್ನು ಎಲ್ಲರೂ ಸದಾ ಸ್ಮರಿಸಿಕೊಳ್ಳುತ್ತಿರಬೇಕು ಎಂದರು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರವಿಶಂಕರ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಬಿ.ರಾಘವೇಂದ್ರ ಪೈ ಶುಭಾಶಂಸನೆಗೈದರು. ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

ಸಹಶಿಕ್ಷಕಿ ಮಂಜುಳಾ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಸುಮತಿ ಎಂ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕ ಶಶಿಶಂಕರ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ಅನುಷಾ ವಂದಿಸಿದರು.

Exit mobile version