Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಪ್ಲೈಓವರ್ ಕೆಳಗಿನ ಸಾಮಾಗ್ರಿಗಳ ರಾಶಿ ತೆರವಿಗೆ ಎಸಿ ಸೂಚನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ:
ಇಲ್ಲಿನ ಶಾಸ್ತ್ರೀ ವೃತ್ತದ ಬಳಿಯ ಫ್ಲೈಓವರ್ ಕೆಳಭಾಗದಲ್ಲಿದ್ ನವಯುಗ ಕಂಪೆನಿಗೆ ಸೇರಿದ ಸಾಮಾಗ್ರಿಗಳನ್ನು ಮುಂದಿನ ನಾಲ್ಕು ದಿನಗಳಲ್ಲಿ ತೆರವುಗೊಳಿಸಲು ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು ನವಯುಗ ಕಂಪೆನಿಗೆ ಸೂಚನೆ ನೀಡಿದ್ದಾರೆ.

ಅವರು ಕುಂದಾಪುರ ಫ್ಲೈಓವರ್ ಕೆಳಗಿನ‌ ಸಾಮಾಗ್ರಿ ತೆರವು ಕಾರ್ಯಾಚರಣೆ ವೀಕ್ಷಿಸಿದ ಬಳಿಕ ಕುಂದಾಪುರ ಮಿನಿ ವಿಧಾನಸೌಧದಲ್ಲಿ ನವಯುಗ ಇಂಜಿನಿಯರ್ ಜೊತೆ ಸಭೆ ನಡೆಸಿದರು.

ನಾಲ್ಕು ದಿನಗಳಲ್ಲಿ ಸಾಮಾಗ್ರಿ ತೆರವು ಮಾಡುವುದು, ಕುಂದಾಪುರ ನಗರಕ್ಕೆ ಸಂಪರ್ಕಿಸುವ ದುರ್ಗಾಂಬ ಮೋಟಾರ್ ಎದುರು ‘ಕುಂದಾಪುರ’ ಎಂದು ನಾಮಫಲಕ ಅಳವಡಿಕೆ, ಅಲ್ಲಲ್ಲಿ ಸೂಚನಾ‌ಫಲಕ, ನಾಮಫಲಕ ಅಳವಡಿಕೆ, ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಸಂಪರ್ಕಿಸುವಲ್ಲಿ ಡಾಂಬಾರು ಹಾಕುವುದು, ಅಂಡರ್ ಪಾಸ್ ಸಮೀಪದ ಸಮಸ್ಯೆಗಳ ಪರಿಹಾರ, ಬೀದಿ ದೀಪಗಳ ನಿರ್ವಹಣೆ ಮಾಡಬೇಕು ಎಂದರು. ಅಲ್ಲದೆ ಇದೇ ತಿಂಗಳ 29ರೊಳಗೆ ಶಾಸ್ತ್ರೀ ವೃತ್ತದ ಸಮೀಪ ಡಾಮರು ರಸ್ತೆ ಕೆಲಸ ಮುಗಿಸಬೇಕು ಎಂದು ಸಂಬಂದಪಟ್ಟವರಿಗೆ ಗಡುವು ನೀಡಿದರು.

ಡಿವೈಎಸ್ಪಿ ಶ್ರೀಕಾಂತ್ ಕೆ. ಮಾತನಾಡಿ, ನವಯುಗ ಕಂಪೆನಿಯವರು ಬೀದಿ ದೀಪ ಅಳವಡಿಕೆ ಸರಿಯಾಗಿ ಮಾಡದ ಹಿನ್ನೆಲೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಅಪಘಾತ ನಡೆದು ಯಾರಾದರೂ ಸತ್ತರೆ ನಿಮ್ಮನ್ನೇ ಎರಡನೇ ಆರೋಪಿ ಮಾಡುತ್ತೇವೆ ಎಂದು ಗುತ್ತಿಗೆ ಕಂಪೆನಿಗೆ ಎಚ್ಚರಿಕೆ ನೀಡಿದರು. ಪ್ರತಿ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಬುಲೆನ್ಸ್ ವಾಹನ ಜಾಗೃತವಾಗಿರಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ನವಯುಗದ ಒಂದೇ ಅಂಬುಲೆನ್ಸ್ ಅಪಘಾತವಾದಾಗ ಸ್ಥಳಕ್ಕೆ ಬಂದಿರುವ ಉದಾಹರಣೆಯಿಲ್ಲ ಎಂದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪಿಎಸ್ಐ ಸದಾಶಿವ ಗವರೋಜಿ, ಟ್ರಾಫಿಕ್ ಠಾಣೆ ಪಿಎಸ್ಐ ಸುದರ್ಶನ್ ಇದ್ದರು.

ಪುರಸಭೆಯಲ್ಲಿ ಸಾಮಾನ್ಯ ಸಭೆಯಲ್ಲಿ ಗಮನಸೆಳೆಯಲಾಗಿತ್ತು:
ಪ್ಲೈಓವರ್ ಕೆಳಗೆ ಬಿದ್ದ ರಾಶಿಯ ಬಗ್ಗೆ ಪುರಸಭಾ ಸದಸ್ಯ ಗಿರೀಶ್ ದೇವಾಡಿಗ ಅವರು ಸಾಮಾನ್ಯ ಸಭೆಯಲ್ಲಿ ಎತ್ತಿದ ಪ್ರಶ್ನೆಗೆ ಉಳಿದ ಸದಸ್ಯರು ಧ್ವನಿಗೂಡಿಸಿದ್ದರು. ಈ ವೇಳೆ ಹೆದ್ದಾರಿ ಸಮಸ್ಯೆಗಳ ಬಗ್ಗೆ ವಿಶೇಷ ಗಮನ ಸೆಳೆಯಲಾಗಿತ್ತು.

Exit mobile version