Kundapra.com ಕುಂದಾಪ್ರ ಡಾಟ್ ಕಾಂ

ಡಯಟ್ ಸಂಸ್ಥೆಯಲ್ಲಿ ಮೂವರು ಮಹಿಳೆಯರ ಮೇಲೆ ತಲ್ವಾರ್ ದಾಳಿ ಪ್ರಕರಣ. ಕುಂದಾಪುರದ ನವೀನ್ ಪೊಲೀಸ್ ವಶಕ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮಂಗಳೂರಿನ ಜಿಲ್ಲಾ ಶಿಕ್ಷಕ ಮತ್ತು ತರಬೇತಿ ಸಂಸ್ಥೆ ಡಯಟ್‌ನ ಕಚೇರಿಗೆ ನುಗ್ಗಿ ಮೂವರು ಮಹಿಳಾ ಸಿಬ್ಬಂದಿ ಮೇಲೆ ಏಕಾಏಕಿ ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರದ ನವೀನ್ ಎಂಬಾತನನ್ನು ಬಂಧಿಸಲಾಗಿದೆ.

ಘಟನೆಯ ವಿವರ :
ಡಯಟ್ ಸಂಸ್ಥೆಗೆ ಮಧ್ಯಾಹ್ನ 12.45ರ ಸುಮಾರಿಗೆ ಕಾಲೇಜ್‌ನ ಪ್ರಾಧ್ಯಾಪಕಿಯೊಬ್ಬರಿಗೆ ಗಿಫ್ಟ್ ನೀಡುವ ನೆಪದಲ್ಲಿ ಬಂದ ನವೀನ್ ಶಿಕ್ಷಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದ ಕೊಠಡಿಯೊಳಗೆ ನುಗ್ಗಿ ಕರ್ತವ್ಯ ನಿರತರಾಗಿದ್ದ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಕೊಠಡಿಯೊಳಗೆ ಇಬ್ಬರು ಮಹಿಳಾ ಸಿಬ್ಬಂದಿ ಎದುರು ಬದುರಾಗಿ ಆಸನದಲ್ಲಿ ಕುಳಿತು ಕರ್ತವ್ಯದಲ್ಲಿದ್ದು, ಒಳಗೆ ಬಂದ ನವೀನ್ ಚೀಲದಲ್ಲಿದ್ದ ತಲವಾರು ಮಾದರಿಯ ಆಯುಧ ತೆಗೆದು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಸಂದರ್ಭ ಅಲ್ಲಿದ್ದ ಡಿ ದರ್ಜೆಯ ಮಹಿಳಾ ಸಿಬ್ಬಂದಿ ತಡೆಯಲು ಆಗಮಿಸಿದ್ದು, ಆಕೆಯ ಮೇಲೂ ಹಲ್ಲೆ ನಡೆದಿದೆ.

ಹಲ್ಲೆಗೊಳಗಾದ ಮೂವರಲ್ಲಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು, ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ಮಲಾ ಅವರನ್ನು ವಿನಯ ಹಾಸ್ಪಿಟಲ್, ರೀನಾ ಮತ್ತು ಗುಣವತಿ ಅವರನ್ನು ಫಾದರ್ ಮುಲ್ಲರ್ಸ್ ಹಾಸ್ಪಿಟಲ್ ಗೆ ದಾಖಲು ಮಾಡಲಾಗಿದೆ.

ಅಪರಿಚಿತ ವ್ಯಕ್ತಿ ಏಕಾಏಕಿಯಾಗಿ ತಲವಾರು ದಾಳಿ ನಡೆಸಲಾರಂಭಿಸಿದಾಗ ಅಲ್ಲೇ ಪಕ್ಕದ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕೇತರ ಸಿಬ್ಬಂದಿ ಕಿರಣ ಎಂಬವರು ಗಾಬರಿಯಿಂದ ಹೊರಗೋಡಿ ಅಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಲ್ಲೇ ಇದ್ದ ಜೈಲು ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ದುಷ್ಕರ್ಮಿಯನ್ನು ಹಿಡಿದಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾನೆ ಎಂದು ತಿಳಿದುಬಂದಿದೆ. ಕೃತ್ಯ ಎಸಗಲು ಕಾರಣವೇನು ಎಂಬುದು ಪೋಲಿಸರ ತನಿಖೆಯಿಂದ ತಿಳಿದು ಬರಬೇಕಿದೆ.

ಮೂಲಗಳ ಮಾಹಿತಿ ಪ್ರಕಾರ ಆರೋಪಿ ನವೀನ್ ಇದೇ ಕಾಲೇಜಿನಲ್ಲಿ 12 ವರ್ಷಗಳ ಹಿಂದೆ ವ್ಯಾಸಂಗ ಮಾಡಿದ್ದಾನೆ ಎನ್ನಲಾಗಿದ್ದು, ಇದೇ ಕಾಲೇಜ್ ನ ಹಳೆ ವಿದ್ಯಾರ್ಥಿ ಆಗಿದ್ದಾನೆ. ಆರೋಪಿಯ ಕುಂದಾಪುರ ನ್ಯಾಯಾಲಯದಲ್ಲಿ ಜವಾನನಾಗಿ ಕೆಲಸ ಮಾಡುತ್ತಿರುವ ಬಗ್ಗೆ ತಿಳಿದುಬಂದಿದೆ.

ಬರ್ಕೆ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

Exit mobile version