Kundapra.com ಕುಂದಾಪ್ರ ಡಾಟ್ ಕಾಂ

ಅಗತ್ಯ ವಸ್ತುಗಳ ಬೆಲೆ ಏರಿಕೆ: ಸಿಲಿಂಡರ್ ಒಳಗೆ ಕಟ್ಟಿಗೆ ಹಾಕಿ ಚಹಾ ತಯಾರಿಸಿ ಪ್ರತಿಭಟನೆ!

ಬೈಂದೂರು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಎಲ್.ಪಿ.ಜಿ, ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ ಮಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಬೈಂದೂರು ಯುವ ಕಾಂಗ್ರೆಸ್ ವತಿಯಿಂದ ಬುಧವಾರ ಬೈಂದೂರು ತಹಶೀಲ್ದಾರ್ ಕಛೇರಿ ಎದುರು ವಿನೂತನ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಗ್ಯಾಸ್ ಸಿಲಿಂಡರಿನಲ್ಲಿ ಕಟ್ಟಿಗೆ ಹಾಕಿ ಬೆಂಕಿ ಮಾಡಿ ಚಹಾ ತಯಾರಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರು ಮಾತನಾಡಿ ನಿರಂತರವಾಗಿ ಬೆಲೆಏರಿಕೆಯನ್ನು ಮಾಡುತ್ತಿರುವ ಕೇಂದ್ರದ ಬಿಜೆಪಿ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಬೇಕಿದೆ. ಈ ಜನವಿರೋಧಿ ಬಿಜೆಪಿ ಸರಕಾರವನ್ನು ಕಿತ್ತೊಗೆಯುವವರೆಗೂ ನಿರಂತರವಾಗಿ ಪ್ರತಿಭಟಿಸುವುದಾಗಿ ಹೇಳಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಮಾತನಾಡಿ ಇಂಧನ ಸಚಿವರ ಉಸ್ತುವಾರಿ ಜಿಲ್ಲೆಯಾದ ನಮ್ಮ ಜಿಲ್ಲೆಯಲ್ಲೇ ನಿರಂತರ ವಿದ್ಯುತ್ ಕಡಿತವಾಗುತ್ತಿದೆ ಹಾಗೂ ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬಂದ ಸಚಿವರು ಅವರದೆ ಸರಕಾರ ಹಿಂದೂ ದೇವಾಲಯ ಕೆಡವಿರುವುದರ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್.ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಮದನ್ ಕುಮಾರ್, ಬೈಂದೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜ ಗಾಣಿಗ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ ಉಪ್ಪುಂದ, ಮಾಜಿ ತಾ. ಪಂ ಸದಸ್ಯೆ ಗ್ರೀಷ್ಮ ಬಿಡೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭರತ್ ದೇವಾಡಿಗ, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ ದೇವಾಡಿಗ ಹಾಗೂ ಅರವಿಂದ ಪೂಜಾರಿ, ಮುಖಂಡರಾದ ಗಣೇಶ್ ಪೂಜಾರಿ ಬೈಂದೂರು, ನರಸಿಂಹ ಹಳಗೇರಿ, ಪ್ರಕಾಶ ಪೂಜಾರಿ, ಸುಂದರ್ ಕೊಠಾರಿ,ಉಮೇಶ್ ದೇವಾಡಿಗ, ಗೋವಿಂದ ಪೂಜಾರಿ ಹೊಸ್ಕೊಟೆ, ಮಣಿಕಂಠ ಬೈಂದೂರು, ಶಬ್ಬೀರ್, ಮಂಜುನಾಥ ತಗ್ಗರ್ಸೆ, ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಮರವಂತೆ, ಉದಯ ಪೂಜಾರಿ, ಪ್ರಕಾಶ್ ಆಚಾರ್ಯ, ಗಿರೀಶ್ ದೇವಾಡಿಗ, ವಿನೋದ ಪಡುಕೋಣೆ, ಸಂತೋಷ ಹೊಸ್ಕೊಟೆ, ರಾಮ ಕೆರ್ಗಾಲ್ ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

Exit mobile version