Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ: ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪೌಷ್ಟಿಕ ಆಹಾರದ ಕೊರತೆಯಿಂದ ಸಂಭವಿಸುವ ಮಹಿಳೆಯರ ಮತ್ತು ಮಕ್ಕಳ ಸಾವನ್ನು ತಡೆಯುವ ಮತ್ತು ಅವರ ಆರೋಗ್ಯ ವೃದ್ಧಿಗೆ ಪೋಷಕಾಂಶಯುಕ್ತ ಆಹಾರ ಸೇವನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2018ರಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಆರಂಭವಾಯಿತು. ಸಂಬಂಧಿಸಿದವರು ಇದರ ಪ್ರಯೋಜನ ಪಡೆಯಬೇಕು ಎಂದು ಕಾಲ್ತೋಡು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀಣಾ ಕಾರಂತ ಹೇಳಿದರು.

ಮರವಂತೆ ಗ್ರಾಮ ಪಂಚಾಯಿತಿ, ಶಿಶು ಆಭಿವೃದ್ದಿ ಇಲಾಖೆ ಹಾಗೂ ಮರವಂತೆ ವಲಯದ ಅಂಗನವಾಡಿ ಕೇಂದ್ರಗಳ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.

ಗರ್ಬಿಣಿಯರು ಮತ್ತು ಕಿಶೋರಿಯರು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದರೆ ತಮ್ಮ ದಿನನಿತ್ಯದ ಆಹಾರ ಪದ್ದತಿಯನ್ನು ಮತ್ತು ಆಹಾರ ತಯಾರಿ ವಿಧಾನವನ್ನು ಬದಲಿಸಿಕೊಳ್ಳಬೇಕು, ಹೆಚ್ಚಾಗಿ ಮನೆಯಲ್ಲಿಯೇ ಬೆಳೆಸಿದ ತರಕಾರಿಗಳನ್ನು ಉಪಯೋಗಿಸಬೇಕು. ರಕ್ತಹೀನತೆ ತಡೆಗೆ ಮತ್ತು ಗರ್ಭದ ಬೆಳವಣಿಗೆಗೆ ಹೆಚ್ಚು ಹಸಿರು ತರಕಾರಿ ಬಳಸಬೇಕು. ಅಗತ್ಯವಿದ್ದಾಗ ವೈದ್ಯರು ಸೂಚಿಸುವ ಔಷಧವನ್ನು ತಪ್ಪದೆ ಸೇವಿಸಬೇಕು ಎಂದು ಅವರು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ವೇತಾ ಎನ್. ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ವಿವರಿಸಿದರು. ಪಂಚಾಯಿತಿ ಕಾರ್ಯದರ್ಶಿ ದಿನೇಶ್ ಶೇರುಗಾರ ಸ್ವಾಗತಿಸಿದರು. ಫೋಷಣ್ ಅಭಿಯಾನದ ನೋಡಲ್ ಅಧಿಕಾರಿ ಮಂಜುನಾಥ ಎನ್ ಪ್ರಾಸ್ತವಿಕವಾಗಿ ಮಾತನಾಡಿದರು. ಕರಸಂಗ್ರಾಹಕ ಶೇಖರ ಮರವಂತೆ ನಿರೂಪಿಸಿದರು.

ವಲಯ ಅಂಗನವಾಡಿ ವ್ಯಾಪ್ತೀಯ ಆಯ್ದ ಐವರು ಗರ್ಭಿಣಿಯರಿಗೆ ಸೀಮಂತ ನೆರವೇರಿಸಿ, ಸನ್ಮಾನಿಸಲಾಯಿತು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಂಚಾಯಿತಿ ಸದಸ್ಯರು, ಆರೋಗ್ಯ ಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ವಿಜಯಾ ದೇಸಾಯಿ, ಅಂಗನವಾಡಿ ಕಾರ್ಯಕರ್ತರು ಇದ್ದರು.

Exit mobile version