Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪ್ರ ಡಾಟ್ ಕಾಂ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಾವು ನಿರ್ವಹಿಸುವ ಕಾರ್ಯದಲ್ಲಿ ಪ್ರಾಮಾಣಿಕ ಪ್ರಯತ್ನವಿದ್ದರೆ ಬದುಕು ಯಶಸ್ಸಿನತ್ತ ಸಾಗುತ್ತದೆ ಎಂದು ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ಹೇಳಿದರು.

ಬೈಂದೂರು ರೋಟರಿ ಭವನದಲ್ಲಿ ಭಾನುವಾರ ‘ಕುಂದಾಪ್ರ ಡಾಟ್ ಕಾಂ’ ಸುದ್ದಿತಾಣದ ದಶಮಾನೋತ್ಸವ ಅಂಗವಾಗಿ ಸುರಭಿ ರಿ. ಬೈಂದೂರು ಹಾಗೂ ರೋಟರಿ ಕ್ಲಬ್ ಸಹಯೋಗದೊಂದಿಗೆ ಆಯೋಜಿಸಲಾದ ಯಕ್ಷೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರೂ ಬದುಕಿನಲ್ಲಿ ಕ್ರೀಯಾಶೀಲತೆಯನ್ನು ಕಾಯ್ದುಕೊಳ್ಳುವುದು ಮುಖ್ಯ. ಪತ್ರಿಕಾರಂಗದ ಸವಾಲುಗಳ ನಡುವೆ ಸಂಸ್ಥೆ ದಶಮಾನೋತ್ಸವ ಆಚರಿಸುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಶುಭಹಾರೈಸಿದರು.

Watch Video

ಕಾರ್ಯಕ್ರಮಕ್ಕೆ ಚಂಡೆ ಭಾರಿಸಿ ಚಾಲನೆ ನೀಡಿದ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ ಇಂದಿನ ಬಹುಪಾಲು ಮಾಧ್ಯಮಗಳಲ್ಲಿ ವರದಿ ಪ್ರಕಟಿಸುವುದಕ್ಕಿಂತ ಹೆಚ್ಚಾಗಿ ಅಭಿಪ್ರಾಯಗಳ ಹೇರಿಕೆಯಾಗುತ್ತಿದೆ. ಓದುಗರಾಗಿ ನಾವು ಮಾಧ್ಯಮದಿಂದ ವಸ್ತುನಿಷ್ಠ ವರದಿಯನ್ನಷ್ಟೇ ನಿರೀಕ್ಷಿಸುತ್ತೇವೆ. ಓದಿದ ಬಳಿಕ ಅಭಿಪ್ರಾಯ ರೂಪಿಸಿಕೊಳ್ಳುವ ಸ್ವಾತಂತ್ರ್ಯ ಓದುಗರಿಗೆ ಬಿಡುವುದು ಒಳ್ಳೆಯದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಮಾತನಾಡಿ ಕಲೆ ಸಾಹಿತ್ಯ ಚಟುವಟಿಕೆಗಳು ಮನಸ್ಸು ಅರಳಿಸುವ ಕೆಲಸ ಮಾಡುತ್ತದೆ. ಹಾಗಾಗಿ ಅಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸಂಸ್ಥೆಗಳನ್ನು ಪ್ರೋತ್ಸಾಹಿಸಬೇಕಿದೆ ಎಂದರು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಮನ್ವಯಾಧಿಕಾರಿ, ಯಕ್ಷಗಾನ ಕಲಾವಿದ ಅಬ್ದುಲ್ ರವೂಫ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಶ್ರೀಪತಿ ಹೆಗಡೆ ಹಕ್ಲಾಡಿ, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಅರುಣ ಕುಮಾರ್ ಶಿರೂರು, ಲಾವಣ್ಯ ಬೈಂದೂರು ಅಧ್ಯಕ್ಷರಾದ ಎಚ್. ಉದಯ ಆಚಾರ್ಯ, ಸುರಭಿ ಬೈಂದೂರು ಅಧ್ಯಕ್ಷರಾದ ನಾಗರಾಜ ಪಿ. ಯಡ್ತರೆ, ಹಟ್ಟಿಯಂಗಡಿ ಮೇಳದ ಸಂಚಾಲಕರಾದ ರಂಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರಭಿ ನಿರ್ದೇಶಕರಾದ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಭಾಸ್ಕರ ಬಾಡ, ಖಚಾಂಚಿ ಸುರೇಶ್ ಹುದಾರ್ ಸಹಕರಿಸಿದರು. ಬಳಿಕ ಶ್ರೀ ಹಟ್ಟಿಯಂಗಡಿ ಮೇಳದ ಕಲಾವಿದರಿಂದ ಕೀಚಕವಧೆ ಯಕ್ಷಗಾನ ಪ್ರದರ್ಶನಗೊಂಡಿತು.

ಪೋಟೋ: ಕೃಷ್ಣ ಪೂಜಾರಿ ಶಿರೂರು

Exit mobile version