Kundapra.com ಕುಂದಾಪ್ರ ಡಾಟ್ ಕಾಂ

ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸರಿಪಡಿಸಿ – ಎಸ್. ರಾಜು ಪೂಜಾರಿ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ – 66 ಅಪಘಾತಗಳ ಆಗರವಾಗಿ ಪರಿಣಮಿಸುತ್ತಿದೆ. ನಿರಂತರವಾಗಿ ಈ ಭಾಗದಲ್ಲಿ ಸಂಭವಿಸುತ್ತಿರುವ ಅಪಘಾತದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಗಂಭೀರವಾಗಿ ಗಾಯಗೊಂಡಿದ್ದಾರೆ ಅಲ್ಲದೇ ಹಲವಾರು ಜಾನುವಾರುಗಳು ಮೃತಪಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಆಗ್ರಹಿಸಿದ್ದಾರೆ.

ಶಿರೂರಿನಿಂದ ಆರಂಭಿಸಿ ತಲ್ಲೂರು ತನಕವೂ ರಾ.ಹೆ-66 ಅವ್ಯವಸ್ಥೆ ಎದ್ದು ಕಾಣುತ್ತಿದೆ. ತರಾತುರಿಯಲ್ಲಿ ಕಾಮಗಾರಿ ಮುಗಿಸಿ ಟೋಲ್ ಸಂಗ್ರಹಿಸುತ್ತಿರುವ ಗುತ್ತಿಗೆ ಕಂಪೆನಿಗೆ ಹೆದ್ದಾರಿ ಕಾಮಗಾರಿಯಲ್ಲಿನ ಲೋಪ ಕಾಣದಿರುವುದು ದುರಂತವೇ ಸರಿ.

ಶಿರೂರಿನಿಂದ ಬೈಂದೂರಿಗೆ ತೆರಳುವ ಹೆದ್ದಾರಿಯ ಒತ್ತಿನಣೆ ತಿರುವಿನಲ್ಲಿ ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿದ್ದು, ಹಲವು ಪ್ರಾಣಹಾನಿಯೂ ಆಗಿದೆ. ಕಳೆದೊಂದು ವಾರದಲ್ಲಿಯೇ ಒತ್ತಿನಣೆ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಎರಡು ಅಫಘಾತಗಳು ಸಂಭವಿಸಿದೆ. ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ವಾಹನ ಅಪಘಾತ ಸಂಭವಿಸುತ್ತಿದ್ದು, ಇನ್ನಾದರೂ ಇಂತಹ ಘಟನೆ ನಡೆಯದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ.

ಬೈಂದೂರು, ಯಡ್ತರೆ, ಬಿಜೂರು, ಉಪ್ಪುಂದ, ನಾವುಂದ, ಮರವಂತೆ, ತ್ರಾಸಿ ಮೊದಲಾದ ಅಗತ್ಯವಿರುವಲ್ಲಿ ಹಾಗೂ ಜನಸಂಚಾರವಿರುವಲ್ಲಿ ವಿದ್ಯುತ್ ದೀಪ ಅಳವಡಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಕೆಲವೆಡೆ ವಿದ್ಯುತ್ ದೀಪ ಅಳವಡಿಸಿದ್ದರೂ ಸರಿಯಾದ ನಿರ್ವಹಣೆ ಇಲ್ಲದೇ ಕೆಟ್ಟು ನಿಂತಿದೆ. ರಾತ್ರಿ ವೇಳೆಗೆ ಅನಿರೀಕ್ಷಿತವಾಗಿ ಎದುರಾಗುವ ಜಾನುವಾರುಗಳು ಹಾಗೂ ಪಾದಚಾರಿಗಳಿಂದಾಗಿ ವಾಹನ ಸವಾರರು ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರು ಹಲವೆಡೆ ಅಪಘಾತಕ್ಕೀಡಾಗಿದ್ದಾರೆ.

ಬೈಂದೂರು ಹೊಸ ಬಸ್ ನಿಲ್ದಾಣ, ಯಡ್ತರೆ ಕೊಲ್ಲೂರು ಬೈಪಾಸ್, ಅರೆಹೊಳೆ ಕ್ರಾಸ್, ತ್ರಾಸಿ ಮೊದಲಾದ ಅಧಿಕ ವಾಹನ ಸಂಚರಿಸುವ ಸ್ಥಳಗಳಲ್ಲಿ ವೆಯ್ಟಿಂಗ್ ಟ್ರಾಕ್ ನಿರ್ಮಿಸದೇ ಹೆದ್ದಾರಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಬೈಂದೂರು ಒತ್ತಿನಣೆಯಿಂದ ವೇಗವಾಗಿ ವಾಹನಗಳು ಬರುವುದರಿಂದ ರೈಲ್ವೆ ಸ್ಟೇಷನ್, ಶಾಲೆ ಹಾಗೂ ಸರಕಾರಿ ಕಛೇರಿಗಳಿಗೆ ತೆರಳುವ ಪಾದಾಚಾರಿಗಳು ಹಾಗೂ ವಾಹನ ಸವಾರರು ತೀವ್ರ ತರನಾದ ತೊಂದರೆ ಅನುಭವಿಸುತ್ತಿದ್ದಾರೆ.

ಸ್ಥಳೀಯ ಶಾಸಕರು, ಸಂಸದರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇಂತಹ ಅಪಾಯಕಾರಿ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅರಿತು ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸಲು ತಕ್ಷಣ ಕ್ರಮವಹಿಸುವಂತೆ ಅವರು ಆಗ್ರಹಿಸಿದ್ದಾರೆ.

Exit mobile version