Kundapra.com ಕುಂದಾಪ್ರ ಡಾಟ್ ಕಾಂ

ಅ.1ರಿಂದ ಅನಿಲಾನಲ ಸಂಯೋಗ ಯಕ್ಷಗಾನ ಪ್ರಸಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿಜಯ ಸೇವಾ ಟ್ರಸ್ಟ್ – ಯಕ್ಷಶ್ರೀ ಸಾಗರ ಸಂಯೋಜನೆಯಲ್ಲಿ ಯಕ್ಷಗಾನದ ವಿನೂತನ ಹೊಸ ಪ್ರಯೋಗ ಅನಿಲಾನಲ ಸಂಯೋಗ ಅ.1ರಂದು ನಾದಾಂಜಲಿ -ಫೇಸ್‌ಬುಕ್ ಪೇಜ್‌ನಲ್ಲಿ, ಅ.3ರಂದು ಧಾರೇಶ್ವರ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಹೊಸ ಪರಿಕಲ್ಪನೆಯಲ್ಲಿ ಹೊಸ ಪ್ರಸಂಗವನ್ನು ವಿನ್ಯಾಸಗೊಳಿಸಲಾಗಿದ್ದು ಭೀಮ – ದ್ರೌಪದಿಯರ ಕಥಾನಕವು ಮಹಾಭಾರತ ಯಾನದ ಕಲ್ಪನೆಯಲ್ಲಿ ಸುದೀರ್ಘ ಆಖ್ಯಾನವಾಗಿ 3 ಭಾಗದಲ್ಲಿ ಪ್ರಸಾರವಾಗಲಿದೆ. ಅ.1 ಶುಕ್ರವಾರ ಸಂಜೆ 6.30 ರಿಂದ ಭಾಗ 1 ನಾದಾಂಜಲಿ ಫೇಸ್ ಬುಕ್ ಪೇಜ್‌ನಲ್ಲಿ ಪ್ರಸಾರವಾಗಿ, ಅ.3ರಂದು ಸಂಜೆ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಇದರ ಪರಿಕಲ್ಪನೆ, ಸಂಯೋಜನೆ ಸಂಘಟಕ ಡಾ. ಎಚ್. ಎಸ್. ಮೋಹನ್, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರದ್ದಾಗಿದ್ದು ಪ್ರಸಂಗ ಜೋಡಣೆ, ನಿರ್ವಹಣೆ ಮತ್ತು ನಿರ್ದೇಶನದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ ಅವರ ಪಾತ್ರ ಪ್ರಧಾನವಾಗಿದೆ. ಸಂಯೋಜನೆ ವೇಳೆ ಕುಮಾರವ್ಯಾಸ, ಹೊಸ್ತೋಟ ಮಂಜುನಾಥ ಭಾಗವತರು, ವಿಷ್ಣು ಭಾಗವತರು ಬ್ರಹ್ಮಾವರ, ದೇವಿದಾಸ, ತಿಮ್ಮಣ್ಣ ಕವಿ ಅವರ ಪ್ರಸಂಗದ ಹಾಡುಗಳನ್ನು ಹಾಗೂ ಶ್ರೀಧರ ಡಿ.ಎಸ್. ಕಿನ್ನಿಗೋಳಿ, ಸ್ವತಃ ಧಾರೇಶ್ವರರೇ ಬರೆದ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಪುರಾಣ ಪರಿಚಯ- ಸಹಕಾರವನ್ನು ಕಲಾವಿದ ಅಶೋಕ ಭಟ್ ಉಜಿರೆ ನೀಡಿದ್ದು , ವಿ.ಉಮಾಕಾಂತ ಭಟ್ ಕೆರೆಕೈ ಸಿರ್ಸಿ ಅವರು ಸಲಹೆ ನೀಡಿದ್ದಾರೆ.

ಭೀಮ, ದ್ರೌಪದಿ, ದೃಷ್ಟದ್ಯುಮ್ನ ಜನನ, ಮಯ ಮಂಟಪ (ರಾಜಸೂಯ ಯಾಗ), ದ್ಯೂತ ಪ್ರಕರಣ (ದ್ರೌಪದಿ ವಸ್ತ್ರಾಪಹಾರ) ಇರಲಿದೆ. 2ನೇ ಭಾಗದಲ್ಲಿ ಬಳಿಕ ಕೀಚಕ ವಧೆ, ಶ್ರೀ ಕೃಷ್ಣ ಸಂಧಾನ, ದುಶ್ಶಾಸನ ವಧೆ, ಗದಾಯುದ್ಧ, ಸ್ವರ್ಗಾರೋಹಣ ಮೊದಲಾದ ಪ್ರಸಂಗಗಳನ್ನು ಮೂರು ಭಾಗದಲ್ಲಿ ಪ್ರಸಾರವಾಗಲಿವೆ.

ಕಲಾವಿದರಾಗಿ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಚಂದ್ರಕಾಂತ ಮೂಡುಬೆಳ್ಳೆ. ಶಂಕರ ಭಾಗವತರು, ಪ್ರಸನ್ನ ಹೆಗ್ಗಾರ್, ಮುಮ್ಮೇಳದಲ್ಲಿ ನೀಲ್ಕೋಡು ಶಂಕರ ಹೆಗಡೆ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಮಂಕಿ ಈಶ್ವರ ನಾಯ್ಕ, ಸಂಜಯ ಬೆಳೆಯೂರು, ಪ್ರಸನ್ನ ಶೆಟ್ಟಿಗಾರ, ಗಣೇಶ ನಾಯ್ಕ ಮುಗ್ವಾ, ವಿನಯ ಭಟ್ ಬೇರೊಳ್ಳಿ, ಮಾರುತಿ ನಾಯ್ಕ ಬೈಲಗದ್ದೆ, ಗಣಪತಿ ಹೆಗಡೆ ತೋಟಿ, ನಾಗೇಶ ಕುಳಿಮನೆ, ಶ್ರೀಧರ ಭಟ್ ಕಾಸರಕೋಡ್ ಅವರು ಭಾಗವಹಿಸಿದ್ದಾರೆ.

ಇದೊಂದು ಪೌರಾಣಿಕ ಕಥಾ ಸಂಯೋಜನೆಯ ಕುಂಜ. ಭೀಮ ಮತ್ತು ದ್ರೌಪದಿಯ ಜನನದಿಂದ ಅಂತ್ಯದವರೆಗೆ ನಿರೂಪಗೊಂಡಿದೆ. ವಿಶ್ವ ನಾಟಕ ಸೂತ್ರಧಾರ ಶ್ರೀಕೃಷ್ಣನ ಧರ್ಮ ಸಂಸ್ಥಾಪನಾ ಕೈಂಕರ್ಯದ, ಶ್ರೀ ವ್ಯಾಸ ಮಹರ್ಷಿ, ಶ್ರೀ ಕುಮಾರವ್ಯಾಸರಿಂದ ಪ್ರಣೀತವಾದ ಮಹಾಭಾರತ ಗ್ರಂಥದಿಂದ ಶ್ರೀಕೃಷ್ಣನ ಸಂಕಲ್ಪಕ್ಕೆ ಎರಕವಾಗುವ, ವಾಯುಪುತ್ರ ಭೀಮ ಮತ್ತು ಯಾಜ್ಞಸೇನೆ ದ್ರೌಪದಿಯ ಪಾತ್ರಗಳ ಆಯ್ದ ಘಟ್ಟಗಳನ್ನು ಆಧರಿಸಿ ಪೋಷಕ ಪಾತ್ರಗಳನ್ನು ಬಳಸಿ ಸಂಯೋಜಿಸಿದ ಕಥಾ ಹಂದರವೇ ಈ ಅನಿಲಾನಲ ಸಂಯೋಗ ಎಂದು ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ಸಂಯೋಜಕ ಡಾ. ಎಚ್.ಎಸ್. ಮೋಹನ್ ಸಾಗರ ಅವರು ವಿವರಿಸಿದ್ದಾರೆ.

Exit mobile version