Kundapra.com ಕುಂದಾಪ್ರ ಡಾಟ್ ಕಾಂ

ಭೂಸ್ವಾಧೀನ ತಿದ್ದುಪಡಿ ಮಸೂದೆ ಹಿಂತೆಗೆತ: ಕೌರವರೆದುರಿನ ಪಾಂಡವರ ಜಯ

ದೇಶಾಧ್ಯಂತ ಎದ್ದಿರುವ ಪ್ರಬಲ ವಿರೋಧದ ಕಾರಣಕ್ಕಾಗಿ “ಭೂಸ್ವಾದೀನ ತಿದ್ದುಪಡಿ ಮಸೂದೆ” ಯನ್ನು ಹಿಂಪಡೆಯುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿದ್ದಾರೆ.

ತಿದ್ದುಪಡಿ ಮಸೂದೆಯನ್ನು ಹೀಗೆ ಹಿಂಪಡೆಯುವ ನಿರ್ಧಾರ ಪ್ರಕಟಿಸುವ ಮೂಲಕ ಸ್ವತಃ ಮೋದಿಯವರು ಈ ಮಸೂದೆಯು “ದೋಷಪೂರಿತ”ವಾಗಿತ್ತು ಎಂದು ಒಪ್ಪಿ ಕೊಂಡಂತಾಗಿದೆ.

ಈ “ಭೂ ಸ್ವಾಧೀನ ತಿದ್ದುಪಡಿ ಮಸೂದೆ”ಯು ರೈತ ವಿರೋಧಿ ಅಂಶ ಗಳನ್ನೊಳಗೊಂಡಿವೆ, ಇದನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಸತತವಾಗಿ ಒಂದು ವರ್ಷ ಕಾಲ ದೇಶಾದ್ಯಂತ ರೈತರ ಜೊತೆಗೂಡಿ ನಡೆಸಿದ್ದ ಪ್ರತಿಭಟನೆ ಕೊನೆಗೂ ಫಲ ಪಡೆದುಕೊಂಡಿದೆ.

ಪ್ರಪಂಚದ ಅತ್ಯುತ್ಕೃಷ್ಟ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು ಎಂದೇ ಖ್ಯಾತರಾಗಿರುವ ಮನಮೋಹನ್ ಸಿಂಗ್ ರವರ ಯುಪಿಎ ಸರಕಾರ 2013 ರಲ್ಲಿ ಮಂಡಿಸಿದ್ದ ಭೂ ಸ್ವಾಧೀನ ಮಸೂದೆಯಲ್ಲಿ ಸ್ವಾಧೀನಕ್ಕೊಳಗಾಗುವ ಕೃಷಿ ಭೂಮಿಯ ಒಡೆತನ ಹೊಂದಿರುವ ಶೇಕಡಾ ಎಂಭತ್ತರಷ್ಟು ರೈತರ ಒಪ್ಪಿಗೆ ದೊರೆತರೆ ಮಾತ್ರ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಳಿಸುವ ಮತ್ತು ಭೂ ಸ್ವಾಧೀನಕ್ಕೊಳಗಾದ ಭೂಮಿಯನ್ನು ಐದು ವರ್ಷಗಳೊಳಗೆ ಉದ್ದೇಶಿತ ಯೋಜನೆಗೆ ಬಳಸಿಕೊಳ್ಳದ್ದಿದ್ದಲ್ಲಿ ಆ ಭೂಮಿಯನ್ನು ಪುನಃ ರೈತರಿಗೆ ಹಿಂತಿರುಗಿಸುವ ಪ್ರಮುಖ ಅಂಶಗಳನ್ನು ಒಳಗೊಂಡಿತ್ತು, ಇದು ಸಂಪೂರ್ಣವಾಗಿ ರೈತರ ಪರವಾದ ಖಾಯ್ದೆಯಾಗಿತ್ತು.

ಆದರೆ ಮೋದಿ ಸರಕಾರ ಅದೇ ಮಸೂದೆಯಲ್ಲಿ ‘ ಭೂ ಸ್ವಾಧೀನಕ್ಕೆ ರೈತರ ಒಪ್ಪಿಗೆ ಬೇಕಿಲ್ಲ, ಮತ್ತು ಯೋಜನೆಯ ಅನುಷ್ಠಾನಕ್ಕೆ ಯಾವುದೇ ಕಾಲಮಿತಿಯಿಲ್ಲ, ಐದು ವರ್ಷಗಳಲ್ಲಿ ಯೋಜನೆ ಆರಂಬಿಸದಿದ್ದರೆ ಉದ್ದಿಮೆದಾರರು ರೈತರಿಗೆ ಭೂಮಿಯನ್ನು ವಾಪಾಸು ಮಾಡಬೇಕಾಗಿಲ್ಲ’ ಎಂಬಿತ್ಯಾದಿ ಅಂಶಗಳನ್ನು ಸೇರಿಸಿ ತಿದ್ದುಪಡಿ ಮಾಡಿತ್ತು, ಈ ತಿದ್ದುಪಡಿ ಸಂಪೂರ್ಣವಾಗಿ ರೈತರ ವಿರೋದಿಯಾಗಿತ್ತು ಮತ್ತು ಉದ್ದಿಮೆದಾರರ ಪರವಾಗಿತ್ತು.

ಕೇಂದ್ರದ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಮೋದಿಯವರ ಸರಕಾರದ ಪ್ರಥಮ ಅಧಿವೇಶನದಲ್ಲಿ ‘ ಬರೇ ಐದು ಜನ ಪಾಂಡವರು ನೂರು ಜನ ಕೌರವರೆದುರು ಹೋರಾಡಿ ಜಯ ಗಳಿಸಿದಂತೆ’ 282 ಬಿಜೆಪಿ ಸದಸ್ಯರೆದುರು ಕೇವಲ 44 ಸದಸ್ಯರಿರುವ ನಾವು ಪ್ರಬಲವಾದ ಹೋರಾಟವನ್ನು ನೀಡಲಿದ್ದೇವೆ ‘ ಎಂದು ಎಚ್ಚರಿಕೆ ನೀಡಿದ್ದರು, ರಾಹುಲ್ ಗಾಂಧಿಯವರ ಪ್ರಬಲವಾದ ಹೋರಾಟದ ಕಾರಣದಿಂದಾಗಿ ಕೇಂದ್ರದ ಮೋದಿ ಸರಕಾರ ‘ಭೂಸ್ವಾಧೀನ ತಿದ್ದುಪಡಿ ಮಸೂದೆ’ ಹಿಂಪಡೆದುಕೊಂಡುದರಿಂದ ನಿಜಕ್ಕೂ ಇದು ಕೌರವರೆದುರಿನ ಪಾಂಡವರ ಜಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ವಿಶ್ಲೇಶಿಸಿದ್ದಾರೆ.

Exit mobile version