Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಅ.7:
ಕೋವಿಡ್ ಎರಡನೇ ಅಲೆಯ ಸಂದರ್ಭ ಆಕ್ಸಿಜನ್ ಅಗತ್ಯ ಹೆಚ್ಚಿಗೆ ಕಂಡುಬಂದು ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಈಗ ಕುಂದಾಪುರದಲ್ಲಿ ನಿಮಿಷಕ್ಕೆ 500 ಲೀ. ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯದ ಆಕ್ಸಿಜನ್ ಘಟಕ ಆರಂಭವಾಗಿದ್ದು ಸಕಾಲದಲ್ಲಿ ಜನರ ಜೀವ ಉಳಿಸುವಲ್ಲಿ ನೆರವಾಗಲಿದೆ ಎಂದು ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಹೇಳಿದರು.

ಅವರು ಗುರುವಾರ ಇಲ್ಲಿನ ಸರಕಾರಿ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್ ಆಕ್ಸಿಜನ್ ಉತ್ಪಾದನಾ ಘಟಕ ಉದ್ಘಾಟಿಸಿ ಮಾತನಾಡಿ ಘಟಕದಿಂದ ಮೂರು ಜಿಲ್ಲೆಯ ಜನರಿಗೆ ಪ್ರಯೋಜನ ಸಿಗಲಿದೆ. ಘಟಕ ಸ್ಥಾಪನೆಗೆ ಹೆಚ್ಚಿನ ಅನುದಾನ ನೀಡಿದ ಸಚಿವೆ ಶೋಭಾ ಕರಂದ್ಲಾಜೆ, ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾಡಳಿತ, ಅಧಿಕಾರಿವರ್ಗಕ್ಕೆ ಸಾರ್ವಜನಿಕರು ಅಭಾರಿಯಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಪವಿಭಾಗ ಸಹಾಯಕ ಆಯುಕ್ತ ಕೆ. ರಾಜು, ಮಾತನಾಡಿ ಕೋವಿಡ್ 2ನೆ ಅಲೆ ಸಂದರ್ಭ ಆಕ್ಸಿಜನ್ ಇಲ್ಲದೆ ತೊಂದರೆ ಅನುಭವಿಸಿದ್ದೇವೆ. ಹಾಗಿದ್ದರೂ ಕುಂದಾಪುರ ಆಸ್ಪತ್ರೆ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಬೇರೆ ಕಡೆಗೆ ಮಂಜೂರಾಗುವ ಸಾಧ್ಯತೆಯಿದ್ದ ಘಟಕ ಕುಂದಾಪುರಕ್ಕೆ ಮಂಜೂರಾಗಲು ಗೇಲ್ ಸಂಸ್ಥೆಯ ಡಿಜಿಎಂ ಕಾರಣ. ಇದಕ್ಕೆ ಐಎಂಎ ಕುಂದಾಪುರ ಘಟಕ ಹಾಗೂ ಲಯನ್ಸ್ ಕ್ಲಬ್ ಕೋಟೇಶ್ವರ ಸಹಕಾರ ನೀಡಿದೆ. ಗೇಲ್ ಸಂಸ್ಥೆ ದೇಶದ 8 ಕಡೆ ಆಮ್ಲಜನಕ ಸ್ಥಾವರ ನಿರ್ಮಿಸಿದ್ದು ಕರ್ನಾಟಕದಲ್ಲಿ ಎರಡು ಕಡೆ ನಿರ್ಮಿಸಿದೆ ಎಂದರು.

ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ| ರಾಜೇಶ್ವರಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಜಯ್ ಎಸ್. ಪೂಜಾರಿ, ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸದಸ್ಯೆ ದೇವಕಿ ಸಣ್ಣಯ್ಯ, ಗೇಲ್ ಸಂಸ್ಥೆಯ ಡಿಜಿಎಂ ಎಸ್. ವಿಜಯಾನಂದ, ಲಯನ್ಸ್ ಕ್ಲಬ್ ಕೋಟೇಶ್ವರದ ಏಕನಾಥ ಬೋಳಾರ ಉಪಸ್ಥಿತರಿದ್ದರು. ಆಸ್ಪತ್ರೆಯ ಆಡಳಿತ ಶಸಚಿಕಿತ್ಸಕ ವೈದ್ಯಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೋ ಸ್ವಾಗತಿಸಿ, ಶುಶ್ರೂಷಕಿ ವೀಣಾ ಶಶಿಕಿರಣ್ ನಿರ್ವಹಿಸಿದರು.

Exit mobile version