Kundapra.com ಕುಂದಾಪ್ರ ಡಾಟ್ ಕಾಂ

ತಾಲೂಕು ಆಡಳಿತದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಂದಿನ ಜನ ಸಮುದಾಯ ಸಮಸ್ಯೆಗಳು, ಸವಾಲುಗಳಿಗೆ ರಾಮಾಯಣದಲ್ಲಿ ಉತ್ತರಸಿಗುತ್ತದೆ. ಮಾನವೀಯ ಗುಣಗಳ ಮೈಗೂಡಿಸಿಕೊಳ್ಳುವುದು ಸೇರಿದಂತೆ ಸಮಾಜದ ಬದಲಾವಣೆ, ಪ್ರಗತಿಗೆ ಯಾವೆಲ್ಲಾ ಅಂಶ ಬೇಕು ಎನ್ನುವುದ ರಾಮಾಯಣದಲ್ಲಿ ವಾಲ್ಮೀಕಿ ತಿಳಿಸುತ್ತಾ ಹೋಗುತ್ತಾರೆ. ವಾಲ್ಮೀಕಿ ವ್ಯಕ್ತಿತ್ವ ಇಡೀ ನಾಡಿಗೆ ಪರಿಚಯ ಪಡಿಸುವುದಕ್ಕೆ ಮೂಲ ಕಾರಣ ರಾಮಾಯಣ ಮಹಾಕಾವ್ಯ ಎಂದು ಕುಂದಾಪುರ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಉಪ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೊವಾಡಿ ಹೇಳಿದರು.

ಅವರು, ಕುಂದಾಪುರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಸಂಘಟನೆ ಆಶ್ರಯದಲ್ಲಿ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು.

ವಿಶ್ವಾತ್ಮಕ ಪ್ರಜ್ಞೆ ಜಗತ್ತಿಗೆ ಸಾರಿದ ವಾಲ್ಮೀಕಿ ಸಮಾಜ ಸುಧಾರಕ, ತತ್ವಜ್ಞಾನಿ, ಚಿಂತಕ, ಶಿಕ್ಷಣ ತಜ್ಞ, ರಾಜನೀತಿ ತಜ್ಞ ಆಗಿದ್ದರು. ಪ್ರಾಚೀನ ಭಾರತದ ಜೀವನಕ್ರಮ, ಸಂಸ್ಕೃತಿ ರಾಮಾಯಣದ ಒಳಗೆ ಸಾದರ ಪಡಿಸಿದ್ದಾರೆ. ವಿಷಾದ ಎಂದರೆ, ಬುದ್ದ, ಬಸವ, ಕನಕದಾಸ, ಪುರಂದರದಾಸ, ವಾಲ್ಮೀಕಿ ಕೆಲವು ಸಂದರ್ಭ, ಕಡೆಗಳಲ್ಲಿ ಸಮುದಾಯ ಆಚರಣೆಗೆ ತರುವ ಪ್ರಯತ್ನ ನಡೆಯುವಂತಾಗದೆ, ಎಲ್ಲಾ ಮಹನೀಯರ ಜಯಂತಿ ಎಲ್ಲರ ಸಹಭಾಗಿತ್ವದಲ್ಲಿ ಸಾರ್ವಜನಿಕವಾಗಿ ಅವರ ವಿಚಾರದಾರೆ ಪ್ರಚುರ ಪಡಿಸಿಬೇಕು ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದು ಉತ್ತೀರ್ಣರಾದ ಚೇತನ ಶ್ರೀನಿವಾಸ ನಾಯಕ್, ರಶ್ಮಿತಾ, ಕೇಶವ ಹಾಗೂ ವಿಜಯ ಕುಮಾರ್ ಅವರನ್ನು ಎಸಿ ರಾಜು ಕೆ, ಡಿಎಸ್ಪಿ ಕೆ.ಶ್ರೀಕಾಂತ ಗೌರವಿಸಿದರು.

ಕುಂದಾಪುರ ಸಹಾಯಕ ಆಯುಕ್ತ ರಾಜು ಕೆ.ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ನಗರ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಕುಂದಾಪುರ ತಹಸೀಲ್ದಾರ್ ಕಿರಣ್ ಗೌರಯ್ಯ, ಕುಂದಾಪುರ ಡಿಎಸ್ಪಿ ಕೆ. ಶ್ರೀಕಾಂತ್, ತಾಲೂಕು ಪಂಚಾಯಿತಿ ಇಒ ಕೇಶವ ಶೆಟ್ಟಿಗಾರ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್.ವೇರ್ಣೇಕರ ಸ್ವಾಗತಿಸಿದರು. ಪ್ರಕಾಶ ಪ್ರಾರ್ಥಿಸಿ, ರಾಧಿಕಾರಾಣಿ, ಉಮಾಕಾಂತಿ, ದೀಪಾ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕ ರಮೇಶ್ ವಂದಿಸಿದರು.

ಮಹರ್ಷಿ ವಾಲ್ಮೀಕಿ ಬಗ್ಗೆ ಏನು ಹೇಳಿದರೂ ಕಡಿಮೆಯಾಗುತ್ತದೆ. ಸಮಾಜ ವಾಲ್ಮೀಕಿ ಋಷಿಯ ರಾಮಾಯಣದ ಮೂಲಕ ಗುರುತಿಸುತ್ತಿದ್ದು, ಮಹಾ ಕಾವ್ಯಗಳಲ್ಲಿ ಮಹಾಭಾರತ, ರಾಮಾಯಣ ಒಂದಾಗಿದ್ದು, ಸರ್ವಕಾಲಿಕ ಶ್ರೇಷ್ಠ ಕಾವ್ಯಗಳಾಗಿದೆ. ಸಾಧಿಸುವ ಮನಸ್ಸಿದ್ದರೆ ಸಮಾನ್ಯ ಬೇಡನಾದ ವಾಲ್ಮೀಕಿ ರಾಮಾಯಣದಂತ ಮಹಾಕಾವ್ಯವ ರಚಿಸಿ, ಏನಾದರೂ ಸಾಧಿಬೇಕು ಎಂದು ಹೊರಟವರಗೆ ಮಾರ್ಗದರ್ಶಕ ಆಗಿದ್ದಾರೆ. ನಾವು ಮಹಾತ್ಮರ ಹಾದಿಯಲ್ಲಿ ಸಾಗಿದಾಗ ಜಯಂತಿ ಆಚರಣೆಗೊಂದು ಕಿಮ್ಮತ್ತು ಸಿಗುತ್ತದೆ. – ರಾಜು ಕೆ, ಸಹಾಯಕ ಆಯುಕ್ತ. ಕುಂದಾಪುರ

Exit mobile version