Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ‘ಭೀಮಪಲಾಸ’ ಸಂಗೀತೋತ್ಸವ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ಭಾರತರತ್ನ ಪಂ. ಭೀಮಸೇನ ಜೋಶಿ ಜನ್ಮ ಶತಾಬ್ದಿ ಸಂಗೀತೋತ್ಸವದ ಅಂಗವಾಗಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಆರ್. ಎನ್ ಶೆಟ್ಟಿ ಸಭಾಭವನದಲ್ಲಿ ಈಚೆಗೆ ನಡೆದ ಪಂ. ಗಣಪತಿ ಭಟ್ ಹಾಸಣಗಿ ಮತ್ತು ಅವರ ಶಿಷ್ಯ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ ಅವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿ ‘ಭೀಮಪಲಾಸ’ ಸಂಗೀತಾಸಕ್ತರ ಮನಸೂರೆಗೊಂಡಿತು.

ಈ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವವಿಮಾ ನಿಗಮ ಮತ್ತು ಎಲ್ಲೈಸಿ ಹೌಸಿಂಗ್ ಫೈನಾನ್ಸ್ ಪ್ರಧಾನ ಪ್ರಾಯೋಜಕತ್ವದಲ್ಲಿ ಧಾರವಾಡದ ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಮತ್ತು ಹುಬ್ಬಳ್ಳಿಯ ಕ್ಷಮತಾ ಜತೆಯಾಗಿ ಆಯೋಜಿಸಿದ್ದುವು. ಸ್ಥಳೀಯ ಆಯೋಜಕರಾಗಿ ಇಲ್ಲಿನ ಗುರುಪರಂಪರಾ ಸಂಗೀತ ಸಭಾ ನಿರ್ವಹಿಸಿತ್ತು. ವಿವಿಡ್ ಲಿಪಿ ಯುಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಿತ್ತು.

ಕಾರ್ಯಕ್ರಮವನ್ನು ಎಲ್‌ಐಸಿ ಕುಂದಾಪುರ ಶಾಖೆಯ ಸೀನಿಯರ್ ಮ್ಯಾನೇಜರ್ ಯು. ನಾರಾಯಣ ಗೌಡ, ಮ್ಯಾನೇಜರ್ ರಾಘವೇಂದ್ರ ಸಾಮಗ. ಮಾಹೆ ವಿಶ್ವವಿದ್ಯಾಲಯದ ಕುಲಸಚಿವ ರಂಗ ಪೈ, ಪಂ. ಗಣಪತಿ ಭಟ್, ಜಿ. ಬಿ. ಜೋಶಿ ಟ್ರಸ್ಟ್‌ನ ಸಮೀರ ಜೋಶಿ ಒಟ್ಟಾಗಿ ಉದ್ಘಾಟಿಸಿದ್ದರು.

ಪಂ. ಗಣಪತಿ ಭಟ್ಟ ಮೊದಲಿಗೆ ಅಪೂರ್ವದ ಜನಸಮ್ಮೋಹಿನಿ ರಾಗವನ್ನು ಪ್ರಸ್ತುತ ಪಡಿಸಿದರು. ಕಮಾಜ್ ರಾಗದ ಥುಮ್ರಿ ಮತ್ತು ಬಿಭಾಸ್ ರಾಗದ ಭಜನೆ ಹಾಡಿದರು. ಶ್ರೋತೃಗಳ ಕೋರಿಕೆ ಮೇರೆಗೆ ಭೀಮಸೇನ ಜೋಶಿ ಅವರ ಖ್ಯಾತ ‘ಕಂಗಳಿನ್ಯಾತಕೊ…’ ಭಜನೆಯನ್ನು ಬೈರವಿ ರಾಗದಲ್ಲಿ ಹಾಡಿ ಕಚೇರಿ ಮುಗಿಸಿದರು. ಅವರಿಗೆ ಶ್ರೀಧರ ಮಾಂಡ್ರೆ ತಬಲಾ ಮತ್ತು ಗುರುಪ್ರಸಾದ ಹೆಗಡೆ ಹಾರ್ಮೋನಿಯಂ ಸಾಥ್ ನೀಡಿದರು.

ಇದಕ್ಕಿಂತ ಮೊದಲು ಗಣಪತಿ ಭಟ್ಟರ ಶಿಷ್ಯ ವಿದ್ವಾನ್ ಸತೀಶ ಭಟ್ಟ ಮಾಳಕೊಪ್ಪ ಪೂರಿಯಾ ಕಲ್ಯಾಣ್ ಖಯಾಲ್ ಗಾಯಕಿ ಮತ್ತು ಭಜನೆ ಹಾಡಿದರು. ಅವರಿಗೆ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ, ಹಾರ್ಮೋನಿಯಂನಲ್ಲಿ ಸತೀಶ ಭಟ್ ಹೆಗ್ಗಾರು ಸಹಕರಿಸಿದರು. ಜತೀಂದ್ರ ಮರವಂತೆ ನಿರೂಪಿಸಿದರು.

Exit mobile version