Kundapra.com ಕುಂದಾಪ್ರ ಡಾಟ್ ಕಾಂ

ಬಾಲಿವುಡ್‌ನಲ್ಲಿ ರವಿ ಬಸ್ರೂರು ಸಂಗೀತದ ಹವಾ!

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ದಕ್ಷಿಣ ಭಾರತದ ಮುಂಚೂಣಿ ಸಂಗೀತ ನಿರ್ದೇಶಕ, ಕುಂದಾಪುರ ತಾಲೂಕಿನ ರವಿ ಬಸ್ರೂರು ಬಾಲಿವುಡ್‌ಗೆ ಲಗ್ಗೆಯಿಟ್ಟಿದ್ದು, ಸಲ್ಮಾನ್ ಖಾನ್ ಅವರು ಅಭಿಮಾನದ ಮಾತನಾಡಿದ್ದಾರೆ.

ಬಾಲಿವುಡ್ ಕಿಂಗ್ ಸಲ್ಮಾನ್ ಖಾನ್ ನಿರ್ಮಾಣದ ಅಂತಿಮ್ ಸಿನಿಮಾನದ ಹಿನ್ನಲೆ ಸಂಗೀತ ಹಾಗೂ ಚಿತ್ರದ ಹಾಡುಗಳಿಗೆ ಸಂಗೀತ ನೀಡುವ ಮೂಲಕ ರವಿ ಬಸ್ರೂರು ಅವರು ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದಾರೆ. ಕನ್ನಡದ ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರವಿ ಬಸ್ರೂರು ಅವರಿಗೆ ‘ಉಗ್ರಂ’ ಸಿನಿಮಾ ದೊಡ್ಡ ಬ್ರೇಕ್ ನೀಡಿತ್ತು. ‘ಕೆಜಿಎಫ್’ ಸಿನಿಮಾ ದೇಶದ್ಯಾಂತ ಸಿನಿಮಾ ದಿಗ್ಗಜರು ಇವರತ್ತ ನೋಡುವಂತೆ ಮಾಡಿತ್ತು. ಪ್ರಸ್ತುತ ಶ್ರೀಮುರುಳಿ ಅಭಿನಯದ ‘ಮದಗಜ’ ಸಿನಿಮಾ ಪೂರ್ಣಗೊಳಿಸಿದ್ದಾರೆ. ಕಡಲ್ ಹೆಸರಿನ ಚಲನಚಿತ್ರವೊಂದನ್ನು ಸ್ವಂತ ಬ್ಯಾನರ್‌ನಡಿ ನಿರ್ಮಿಸುತ್ತಿದ್ದಾರೆ.

ದಕ್ಷಿಣ ಭಾರತದ ಬಹುತೇಕ ಭಾಷೆಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರವಿ ಬಸ್ರೂರು ಹುಟ್ಟೂರು ಬಸ್ರೂರಿನಲ್ಲಿ ಅತ್ಯಾಧುನಿಕ ಸ್ಟುಡಿಯೊ ನಿರ್ಮಿಸಿಕೊಂಡಿದ್ದು, ಸಿನಿಮಾ ದಿಗ್ಗಜರು ಬಸ್ರೂರಿನತ್ತ ಕಣ್ಣು ಹಾಯಿಸುವಂತೆ ಮಾಡಿದ್ದಾರೆ.

ಇತ್ತಿಚೆಗೆ ಮುಂಬಯಿಯಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಸಲ್ಮಾನ್ ಖಾನ್ ಅವರು ರವಿ ಬಸ್ರೂರು ಕುರಿತು ಪ್ರಶಂಸೆಯ ಮಾತನಾಡಿದ್ದು, ನನ್ನ ’ಅಂತಿಮ್’ ಚಿತ್ರದ ಸಂಗೀತ ನಿರ್ದೇಶನ ಮಾಡುವಂತೆ ಕೇಳಿಕೊಂಡಾಗ ರವಿ ಬಸ್ರೂರು ಡೋಂಟ್ ವರಿ ಸರ್, ಕುರ್ಚಿ ಅಲುಗಾಡಿಸುವೆ ಎಂದಿದ್ದರು. ಚಿತ್ರದ ಹಿನ್ನಲೆ ಸಂಗೀತ ಕೇಳಿ ರೋಮಾಂಚನಗೊಂಡಿದ್ದೇನೆ. ಕೇವಲ ಕುರ್ಚಿ ಅಲ್ಲಾಡುವುದಲ್ಲ, ಪ್ರೇಕ್ಷಕರು ಸಹ ಅಲುಗಾಡುವ ರೀತಿಯಲ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

Exit mobile version