Kundapra.com ಕುಂದಾಪ್ರ ಡಾಟ್ ಕಾಂ

ಖಾರ್ವಿಕೇರಿ ಗಣೇಶೋತ್ಸವ ರಜತ ಮಹೋತ್ಸವಕ್ಕೆ ಚಾಲನೆ

ಕುಂದಾಪುರ: ನಗರದ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ಸಮಿತಿ ರಜತ ಮಹೋತ್ಸವವನ್ನು ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಜಯಾನಂದ ಖಾರ್ವಿ ಉದ್ಘಾಟಿಸಿದರು.

ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಂದೀಪ್ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಮಹಾಕಾಳಿ ದೇವಳದ ಮೊಕ್ತೇಸರ ಶಂಕರ ನಾಕ್, ಬೆಂಗಳೂರು ಕೊಂಕಣಿ ವಿದ್ಯಾ ವೇದಿಕೆಯ ಅಧ್ಯಕ್ಷ ಶ್ರೀನಿವಾಸ ಕೆ. ನಾಕ್, ಕೆ.ಕೆ. ಫಿಶರೀಸ್ ನ ಕೃಷ್ಣ ಖಾರ್ವಿ, ಕುಂದಾಪುರ ವಿದ್ಯಾರಂಗ ಮಿತ್ರ ಮಂಡಳಿಯ ಅರುಣ್ ಖಾರ್ವಿ, ಗಣೇಶೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷ ವೆಂಕಟೇಶ ಸಾರಂಗ್ ಮೊದಲಾದವರು ಉಪಸ್ಥಿತರಿದ್ದರು.

ರವಿರಾಜ ಖಾರ್ವಿ ಸ್ವಾಗತಿಸಿ, ಹರ್ಷವರ್ಧನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತಾಲೂಕು ಮಟ್ಟದ ಗಣೇಶನ ಚಿತ್ರ ಬಿಡಿಸುವ ಸ್ವರ್ಧೆ, ತಾಲೂಕು ಮಟ್ಟದ ಭಕ್ತಗೀತೆ ಸ್ವರ್ಧೆ, ಕುಂದಾಪುರ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಾತ್ರಿ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಜರುಗಿತು.

ಗಣಪತಿಯನ್ನು ತಂದು ಪೀಠದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಪ್ರಾಣ ಪ್ರತಿಷ್ಠೆ, ಗಣಹೋಮ, ಮಹಾಪೂಜೆ, ರಂಗಪೂಜೆ, ಪ್ರಸಾದ ವಿತರಣೆ ನಡೆಯಿತು.

Exit mobile version