Kundapra.com ಕುಂದಾಪ್ರ ಡಾಟ್ ಕಾಂ

ಖಂಬದಕೋಣೆ ಸಹಕಾರಿಯ ವಾರ್ಷಿಕ ಮಹಾಸಭೆ

ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆಯು ಉಪ್ಪುಂದ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಉಭಯ ಜಿಲ್ಲೆಗಳ ಪ್ರತಿಷ್ಠಿತ ಸಹಕಾರಿ ಸಂಸ್ಥೆಯೆಂದು ಗುರುತಿಸಲ್ಪಟ್ಟಿರುವ ಸಂಘವು ಪ್ರಸಕ್ತ ವರ್ಷದಲ್ಲಿ ರೂ. 370 ಕೋಟಿ ವ್ಯವಹಾರ ನಡೆಸಿ, ರೂ. 2.22 ಕೋಟಿ ನಿವ್ವಳ ಲಾಭ ಗಳಿಸಿದೆ. ಮುಂದಿನ ಸಾಲಿನಲ್ಲಿ ವ್ಯವಹಾರವನ್ನು ರೂ. 400 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದೆ. ಈಗಿನ ಠೇವಣಿ ರೂ. 70.99 ಕೋಟಿ ಇದ್ದರೆ, ಮುಂದಿನ ಸಾಲಿನಲ್ಲಿ ರೂ. 85 ಕೋಟಿ ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿದೆ. ಸದಸ್ಯರಿಗೆ ಶೇ. 15 ಲಾಭಾಂಶ ನೀಡಲಾಗುವುದು. ರೂ. 2.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾರ್ಯಾಲಯ ಸಂಕೀರ್ಣದಲ್ಲಿ ಸದಸ್ಯರಿಗೆ, ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಾಗುವಂತೆ ಅದನ್ನು ಸುಸಜ್ಜಿತಗೊಳಿಸಲಾಗುವುದು ಎಂದು ಹೇಳಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ ಪೈ ಸ್ವಾಗತಿಸಿದರು. ವಿಷ್ಣು ಪೈ ಮಹಾಸಭೆಯ ನೋಟಿಸು ಓದಿದರು. ನಾಗರತ್ನಾ ಡಿ. ವಾರ್ಷಿಕ ಆಡಳಿತ ವರದಿ ಮಂಡಿಸಿದರು. ಚರ್ಚೆಯಲ್ಲಿ ಭಾಗವಹಿಸಿ ಸದಸ್ಯರು ಸಲಹೆಯಿತ್ತರು.

ನಿರ್ದೇಶಕರಾದ ಬಿ. ರಘುರಾಮ ಶೆಟ್ಟಿ, ಕೆ. ಮೋಹನ ಪೂಜಾರಿ, ಬಿ. ಎಸ್. ಸುರೇಶ ಶೆಟ್ಟಿ, ಈಶ್ವರ, ಗುರುರಾಜ ಹೆಬ್ಬಾರ್, ಸುರೇಶ ಶ್ಯಾನುಭಾಗ್, ದಿನಿತಾ ಶೆಟ್ಟಿ, ಸಿದ್ದು ದೇವಾಡಿಗ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಅಶೋಕ ಶೆಟ್ಟಿ, ಮೇಲ್ವಿಚಾರಕ ಶಿವರಾಮ ಯಡ್ತರೆ ವೇದಿಕೆಯಲ್ಲಿದ್ದರು. ಸಂಘದ ವ್ಯಾಪ್ತಿಯ ನಿವೃತ್ತ ಸರಕಾರಿ ಮತ್ತು ಸಹಕಾರಿ ಉದ್ಯೋಗಿಗಳನ್ನು, ಅಧಿಕ ಹಾಲು ಉತ್ಪಾದಕರನ್ನು ಮತ್ತು ಪ್ರತಿಭೆ ಮೆರೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ನಿರೂಪಿಸಿದ ಹಾವಳಿ ಬಿಲ್ಲವ ವಂದಿಸಿದರು.

Exit mobile version