Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಪುರಸಭಾ ಸಾಮಾನ್ಯ ಸಭೆ: ಅಂಗಡಿಗಳ ತೆರಿಗೆ ವಿನಾಯಿತಿಗೆ ಪುರಸಭೆ ಸದಸ್ಯರು ಒತ್ತಾಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ಪುರಸಭೆ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಪುರಸಭೆ ಸಾಮಾನ್ಯ ಸಭೆ ಶುಕ್ರವಾರ ಮಧ್ಯಾಹ್ನ ನಡೆಯಿತು.

ಕೋವಿಡ್ ಕಾರಣದಿಂದ ಬಾಡಿಗೆ ಕಟ್ಟದ ಅಂಗಡಿ ಮುಂಗಟ್ಟುಗಳ ವ್ಯವಹಾರವಿಲ್ಲದೆ ದಿಕ್ಕೆಟ್ಟಿದ್ದಾರೆ. ವ್ಯಾಪಾರಸ್ಥರು ತೆರಿಗೆ ವಿನಾಯಿತಿಗೆ ಮನವಿ ಮಾಡಿದ್ದು, ಮಾನವೀಯ ನೆಲೆಯಲ್ಲಿ ಸಾಧ್ಯವಾದಷ್ಟು ವಿನಾಯಿತಿ ನೀಡಬೇಕು ಎಂದು ಪುರಸಭೆ ಸದಸ್ಯರು ಒತ್ತಾಯಿಸಿದರು. ಮೀನು ಮಾರುಕಟ್ಟೆ ಕರೋನಾ ಹಿನ್ನೆಲೆಯಲ್ಲಿ ಬಂದಾಗಿದ್ದು, ಏಲಂ ಪಡೆದವರಿಗೆ ನಷ್ಟವಾಗಿದ್ದು, ಬಾಕಿ ಹಣಕಟ್ಟುವ ಸ್ಥಿತಿಯಿಲ್ಲ. ಏಲಂ ಪಡೆದವರಿಗೂ ವಿನಾಯತಿ ನೀಡುವಂತೆ ಸದಸ್ಯರು ಒತ್ತಾಯಿಸಿದರು.

ಆಡಳಿತ ಸದಸ್ಯ ರಾಘವೇಂದ್ರ ಖಾರ್ವಿ ಮಾತನಾಡಿ, ಮೀನು ಮಾರುಕಟ್ಟೆ ವ್ಯಾಪಾರಸ್ಥರ ಸಂಕಷ್ಟಕ್ಕೆ ಪುರಸಭೆ ನೆರವಿಗೆ ಬರುವಂತೆ ಒತ್ತಾಯಿಸಿದ್ದು, ಚಂದ್ರಶೇಖರ ಖಾರ್ವಿ, ಪ್ರಭಾಕರ ವಿ, ಶ್ರೀಧರ ಶೇರಿಗಾರ್, ಹಿರಿಯ ಸದಸ್ಯ ಮೋಹನದಾಸ ಶೆಣೈ ಪೂರಕವಾಗಿ ಮಾತನಾಡಿದರು.

ಕರೋನಾ ಸಂಕಷ್ಟದ ಸಮಯದಲ್ಲಿ ಪುರಸಭೆ ತೆರಿಗೆ ವಸೂಲಿ ಮಾಡಿಲ್ಲ, ಸರಕಾರಕ್ಕೂ ತೆರಿಗೆ ಸಂಗತಿ ಬಗ್ಗೆ ಗಮನ ಸೆಳೆಯಲಾಗಿದೆ. ಫೆಬ್ರವರಿ ಅಂತ್ಯದಲ್ಲಿ ಶೇ.90ರಷ್ಟು ತೆರಿಗೆ ಸಂಗ್ರಹಿಸಲಾಗುತ್ತದೆ ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.

ಕಳೆದ ಸಮಾನ್ಯ ಸಭೆಯಲ್ಲಿ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ಕೂರಿಸಿದ ಗೂಡಂಗಡಿ ಜಾಗ ಪಿಡ್ಲ್ಯೂಡಿ ಸಂಬಂಧಿಸಿದ್ದು ಎಂದು ಶಾಸಕರ ಹೇಳಿದ ಹೇಳಿಕೆ ನಿರ್ಣಯದಲ್ಲಿ ಸೇರಿಸಿಲ್ಲ ಎಂದು ಚಂದ್ರಶೇಖರ ಖಾರ್ವಿ ಮಾತಿಗೆ ಆಡಳಿತ ಸದಸ್ಯರು ವಿರೋಧಿಸಿದ್ದು, ಈ ನಡುವೆ ಸದಸ್ಯರ ನಡುವೆ ವಾಗ್ವಾದ ನಡೆದು, ಸಭೆಯಿಂದ ನಿರ್ಗಮಿಸುವ ತನಕೆ ಹೋಯಿತು. ಕೊನೆಗೆ ನಿರ್ಣಯದಲ್ಲಿ ಶಾಸಕರ ಹೇಳಿಕೆ ದಾಖಲಿಸುವ ಮೂಲಕ ಸಭೆ ಮುಂದುವರಿಯಿತು.

ಕೋಡಿ ಒಳಚರಂಡಿ, ಪೌರಕಾರ್ಮಿರಿಗೆ ಉಪಹಾರ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಅಸ್ಫಕ್, ಕಮಲಾ ಮಂಜುನಾಥ ಪೂಜಾರಿ, ಗಿರೀಶ್ ದೇವಾಡಿಗ, ಪ್ರಭಾಕರ ವಿ, ಸಂತೋಷ ಕುಮಾರ್ ಶೆಟ್ಟಿ, ನಾಮನಿರ್ದೇಶಕರಾದ ಪ್ರಕಾಶ್ ಖಾರ್ವಿ, ಪುಷ್ಪಾ ಶೇಟ್, ರತ್ನಾಕರ ಶೇರುಗಾರ್ ಮಾತನಾಡಿದರು.

Exit mobile version