Kundapra.com ಕುಂದಾಪ್ರ ಡಾಟ್ ಕಾಂ

ಕಲಾಕ್ಷೇತ್ರ ಕುಂದಾಪುರ: ಕನ್ನಡ ರಾಜ್ಯೋತ್ಸವ ಸಂಭ್ರಮ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪ್ರತಿಯೊಬ್ಬ ಕನ್ನಡಿಗನು ಕನ್ನಡದ ಉಸಿರು ಉಳಿಸುವ ಕಾರ್ಯ ಮಾಡಬೇಕು. ಕಲಾಕ್ಷೇತ್ರ ಕುಂದಾಪುರ ಈ ಕಾರ್ಯವನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದೆ, ಕನ್ನಡದ ಹಬ್ಬವನ್ನು ಸಂಭ್ರಮಿಸುತ್ತಿದೆ ಸಾಹಿತಿ ಹಾಗೂ ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಹೇಳಿದರು.

ಅವರು ಸೋಮವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಾಕ್ಷೇತ್ರ- ಕುಂದಾಪುರ ಇಲ್ಲಿನ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ನ. ೧ರಿಂದ ನ. ೫ರ ವರೆಗೆ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ರಾಜ್ಯೋತ್ಸವ ಸಂಭ್ರಮದ ಉದ್ಘಾಟಿಸಿ ಮಾತನಾಡಿ ಕಾಸರಗೋಡಿನ ವಿಚಾರದಲ್ಲಿ ನಮ್ಮ ಸರಕಾರದ ಧೋರಣೆ ಮಾತ್ರ ನಿಜಕ್ಕೂ ಖೇದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಪ್ರಸ್ತಾವಿಕ ಮಾತನಾಡಿ, ಕಲಾಕ್ಷೇತ್ರವು ಕುಂದಾಪುರ, ಕುಂದಗನ್ನಡ ಭಾಷೆ, ಆಚಾರ, ವಿಚಾರ, ಸಂಸ್ಕೃತಿಯ ಪ್ರತೀಕವಾಗಿದೆ. ಈ ರಾಜ್ಯೋತ್ಸವ ಸಂಭ್ರಮದಲ್ಲಿ ಚಲನಚಿತ್ರ ಪ್ರದರ್ಶನ ಸಹಿತ ವಿವಿಧ ಕಾಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭ ಸಾಹಿತಿ ಮತ್ತು ಲೇಖಕಿ ಪೂರ್ಣಿಮಾ ಎನ್. ಭಟ್ ಕಮಲಶಿಲೆ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ವಿದ್ಯುತ್ ಗುತ್ತಿಗೆದಾರ, ಕೆ.ಆರ್. ನಾಯ್ಕ್, ಗೋಡೆ ಸ್ಟುಡಿಯೋದ ದಿನೇಶ್ ಗೋಡೆ, ರಾಜೇಶ್ ಕಾವೇರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಯಿನಾಥ್ ಶೇಟ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪೂರ್ವದಲ್ಲಿ ಸಾಹಿತಿ ಓಂ ಗಣೇಶ್ ಉಪ್ಪುಂದ ಅವರು ನಟ ಪುನಿತ್ ರಾಜಕುಮಾರ್ ಅವರಿಗೆ ನುಡಿನಮನ ಸಲ್ಲಿಸಿದರು.  ಶ್ರೀಧರ ಸುವರ್ಣ ಕಾರ್ಯಕ್ರಮ ನಿರ್ವಹಿಸಿ, ರಾಮಚಂದ್ರ ಅತಿಥಿಗಳನ್ನು ಪರಿಚಯಿಸಿದರು. ಪೌರಕಾರ್ಮಿಕ ಗೋಪಿ ಅದ್ಭುತವಾಗಿ ‘ಆಕಸ್ಮಿಕ’ದ ಹಾಡು ಹಾಡಿ ರಂಜಿಸಿದರು. ಕೊನೆಯಲ್ಲಿ ಕಲಾಕ್ಷೇತ್ರ ಕಲಾವಿದರ ಗೀತ ಗಾಯನ ಜನಮನ ಸೂರೆಗೊಂಡಿತು.

Exit mobile version