Kundapra.com ಕುಂದಾಪ್ರ ಡಾಟ್ ಕಾಂ

ಸೌಕೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಎನ್. ಮಂಜಯ್ಯ ಶೆಟ್ಟಿ ಅಧಿಕಾರ ಸ್ವೀಕಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ದೇವಸ್ಥಾನಗಳು ನೆಮ್ಮದಿಯ ಕೇಂದ್ರಗಳು. ಅಲ್ಲಿಗೆ ಬರುವ ಭಕ್ತಾದಿಗಳನ್ನು ಸರಿಯಾಗಿ ನೋಡಿಕೊಳ್ಳಬೇಕು. ಆಡಳಿತ ಮಂಡಳಿ, ಅರ್ಚಕರು, ಸಿಬ್ಬಂದಿಗಳ ಶ್ರಮದಿಂದ ದೇಗುಲ ಅಭಿವೃದ್ದಿ ಸಾಧ್ಯ. ಎಲ್ಲಾ ಭಕ್ತರನ್ನು ಒಂದೇ ರೀತಿ ನೋಡಿಕೊಳ್ಳಬೇಕು. ಬಡವರಿಗೊಂದು ರೀತಿ ಶ್ರೀಮಂತರಿಗೊಂದು ರೀತಿ ಮಾಡಬಾರದು. ಸರಿಯಾದ ಪೂಜೆ ಪುನಸ್ಕಾರಗಳಿಂದ ದೇಗುಲದ ಘನತೆ ಹೆಚ್ಚುತ್ತದೆ. ಇದರಲ್ಲಿ ಅರ್ಚಕರ ಪಾತ್ರ ಬಹಳಷ್ಟಿದೆ. ಸೌಕೂರು ಸಾನಿಧ್ಯ ವಿಶೇಷತೆ ಯಿಂದ ಕೂಡಿದೆ. ಇದರ ಶಕ್ತಿ ಇನ್ನಷ್ಟು ಹೆಚ್ಚಲಿ ಆಡಳಿತ ಮಂಡಳಿ ಒಳ್ಳೆಯ ಕೆಲಸ ಮಾಡಲಿ ಎಂದು ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು.

ಅವರು ಇಂದು ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಎನ್. ಮಂಜಯ್ಯ ಶೆಟ್ಟಿ ಅವರ ಅಭಿನಂದನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ ಮಾತನಾಡಿ, ದೇಗುಲವನ್ನು ಅಭಿವೃದ್ದಿ ಪಡಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಭಕ್ತರಿಗೆ ವ್ಯವಸ್ಥಿತವಾಗಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ದೇಗುಲದ ಅಭಿವೃದ್ದಿಪಡಿಸಲು ಆಡಳಿತ ಮಂಡಳಿ ಕೆಲಸ ಮಾಡಲಿದೆ ಎಂದರು.

ಆರಂಭದಲ್ಲಿ ದೇಗುಲದ ಪ್ರಧಾನ ಅರ್ಚಕರಾದ ಅನಂತ ಅಡಿಗ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಾ. ಅತುಲ್‌ಕುಮಾರ್ ಶೆಟ್ಟಿ, ಮಾಜಿ ಧರ್ಮದರ್ಶಿಗಳಾದ ವಂಡಬಳ್ಳಿ ಜಯರಾಮ ಶೆಟ್ಟಿ, ಬಾಂಡ್ಯ ಸುಬ್ಬಣ್ಣ ಶೆಟ್ಟಿ ಆಗಮಿಸಿದ್ದರು. ದೇಗುಲದ ಆಡಳಿತಾಧಿಕಾರಿ ರಘುರಾಮ ಶೆಟ್ಟಿ ಶುಭ ಕೋರಿ ಮಾತನಾಡಿದರು.

ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರಧಾನ ಅರ್ಚಕರಾದ ಅನಂತ ಅಡಿಗ, ಜಯರಾಮ ಶೆಟ್ಟಿ ಕಾವ್ರಾಡಿ, ಕೆ. ಸುಬ್ಬಣ್ಣ ಶೆಟ್ಟಿ ಕೆಂಚನೂರು, ಉಮೇಶ ಮೊಗವೀರ ಕಂಡ್ಲೂರು, ಜಿ. ಶೇಖರ ಪೂಜಾರಿ ಗುಲ್ವಾಡಿ, ಶ್ರೀಮತಿ ರೀತಾ ದೇವಾಡಿಗ ಸೌಕೂರು, ಶ್ರೀಮತಿ ಆಶಾ ನೇರಳಕಟ್ಟೆ, ಕುಷ್ಟ ಗುಲ್ವಾಡಿ ಉಪಸ್ಥಿರಿದ್ದರು.

Exit mobile version