Kundapra.com ಕುಂದಾಪ್ರ ಡಾಟ್ ಕಾಂ

ಹೋರಾಟ ಅಸ್ಥಿರಗೊಳಿಸಲು ಸುಳ್ಳು ಆರೋಪ: ಸದಾಶಿವ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಆರ್‌ಟಿಐ ಕಾರ್ಯಕರ್ತರನ್ನು ಹತ್ತಿಕ್ಕುವ ಉದ್ದೇಶದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾನಸಿಕ ಸ್ಥಿಮಿತ ಕಳಕೊಂಡ ಕೆಲವು ವ್ಯಕ್ತಿಗಳು ಆಧಾರ ರಹಿತವಾದ ಸಂದೇಶಗಳನ್ನು ಸಂಘಟನೆಗಳ ಹೆಸರಿನಲ್ಲಿ ಹರಿದುಬಿಟ್ಟಿದ್ದಾರೆ. ಇದರಲ್ಲಿ ನಾಗರಿಕಾ ಹೋರಾಟ ಸಮಿತಿ ಮತ್ತು ಗೂಡ್ಸ್ ವಾಹನ ಚಾಲಕ ಮಾಲಕ ಸಂಘವನ್ನು ಹೆಸರಿಸಲಾಗಿದೆ. ನಮ್ಮ ಹೋರಾಟವನ್ನು ಅಸ್ಥಿರಗೊಳಿಸುವ ಉದ್ದೇಶದಲ್ಲಿ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದವರ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬ್ರಹ್ಮಾವರ ತಾಲೂಕು ಗೂಡ್ಸ್ ವಾಹನ ಮಾಲಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ ತಿಳಿಸಿದರು.

ಅವರು ಬ್ರಹ್ಮಾವರದ ಮದರ್ ಪ್ಯಾಲೇಸ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.

ಹೇರೂರು ನಾಗರಿಕಾ ಹೋರಾಟ ಸಮಿತಿಯು 2003ರಲ್ಲಿ ರಚನೆಯಾಗಿದ್ದು ಗ್ರಾಮದ ಮೂಲಭೂತ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಆಶ್ರಯ ಶರ್ತ ಉಲ್ಲಂಘನೆ ಮಾಡಿರುವ ಪ್ರಕರಣಗಳನ್ನು ದಾಖಲೆ ಮೂಲಕ ಸಂಗ್ರಹಿಸಿ 150ಕ್ಕೂ ಹೆಚ್ಚು ನಿವೇಶನಗಳನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯುವಲ್ಲಿ ಕಾನೂನು ಹೋರಾಟ ನಡೆಸಲಾಗಿದೆ. ಚಾಂತಾರು ಗ್ರಾಮ ಪಂಚಾಯತ್ ಆಡಳಿತದಲ್ಲಿ ನಡೆದಿರುವ ಹಲವು ಹಗರಣಗಳನ್ನು ಮಾಹಿತಿ ಹಕ್ಕು ದಾಖಲೆ ಪಡೆದು ಸರ್ಕಾರಕ್ಕೆ ಇಲಾಖೆಗೆ, ಲೋಕಾಯುಕ್ತಕ್ಕೆ ಮತ್ತು ಭೃಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿ ಕಾನೂನು ಹೋರಾಟ ನಡೆಸಲಾಗುತ್ತಿದೆ. ಗ್ರಾಮ ಪಂಚಾಯತ್ ಆದಾಯಕ್ಕೆ ನಷ್ಟ ಉಂಟು ಮಾಡಿರುವ ಪ್ರಕರಣದಲ್ಲಿ 2014 ರಿಂದ 2019ರ ವರೆಗೆ 26 ಗ್ರಾಮ ಪಂಚಾಯತ್ ಸದಸ್ಯರ ಮೇಲೆ, ಇಬ್ಬರು ಅಭಿವೃದ್ಧಿ ಅಧಿಕಾರಿಗಳ ಮೇಲೆ ಭೃಷ್ಟಾಚಾರ ನಿಗ್ರಹ ದಳದ ಮೇಲೆ ದೂರು ದಾಖಲಿಸಲಾಗಿದೆ.

2013ರಲ್ಲಿ ಚಾಂತಾರು 13 ಬಹು ಮಹಡಿ ಕಟ್ಟಡಗಳಿಗೆ ಅನುಮತಿ ನೀಡುವಾಗ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಲೋಕಾಯುಕ್ತರಲ್ಲಿ ದೂರು ದಾಖಲು ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಮೇಲೆ ಲೋಕಾಯುಕ್ತ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗಿದೆ.2017ರಲ್ಲಿ ಲೋಕಾಯುಕ್ತ ಸಂಸ್ಥೆಯು 12(1)ರ ಅಡಿಯಲ್ಲಿ 13 ಬಹುಮಹಡಿ ಕಟ್ಟಡಗಳು ಕಾನೂನು ಬಾಹಿರವಾಗಿ ರಚನೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಈ ಬಗ್ಗೆ ಮುಂದಿನ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ನೋಟೀಸು ಜಾರಿ ಮಾಡಿದೆ.ಈ ಹೋರಾಟದಲ್ಲಿ ಕೂಡ ಬಹುಮಹಡಿ ಕಟ್ಟಡದವರು ನಮ್ಮ ವಿರುದ್ಧ ಷಡ್ಯಂತರ ನಡೆಸುತ್ತಿದ್ದಾರೆ. ಚಾಂತಾರು ಗ್ರಾಮ ಪಂಚಾಯತ್ ಪರಿಸರದ ಲೋಕೋಪಯೋಗಿ ಇಲಾಖೆಯ ರಸ್ತೆ ಮಾರ್ಜಿನ್, ಪಾರ್ಕಿಂಗ್ ಜಾಗ, ಸರಕಾರಿ ಭೂಮಿಯನ್ನು ಅನೇಕ ಅಂಗಡಿ ಮಾಲಕರು ಆಕ್ರಮಿಸಿಕೊಂಡಿದ್ದಾರೆ.

ಸಾರ್ವಜನಿಕರು ನಡೆದಾಡುವ ಜಾಗದಲ್ಲಿ ಕಚ್ಚಾವಸ್ತುಗಳ ಸಂಗ್ರಹಣೆ ಮಾಡಿ ಅಲ್ಲಿ ಸರಪಳಿಯನ್ನು ಅಳವಡಿಸಿ ನೋಪಾರ್ಕಿಂಗ್ ಬೋರ್ಡ್ ಅಳವಡಿಸಿರುತ್ತಾರೆ. ಈ ಬಗ್ಗೆ ನಿರಂತರವಾಗಿ ಗ್ರಾಮ ಸಭೆಯಲ್ಲಿ ಜನಸ್ಪಂದನಾ ಸಭೆಯಲ್ಲಿ ಹಾಗೂ ಇಲಾಖೆಗಳಿಗೆ 2012 ರಿಂದ ದೂರು ನೀಡುತ್ತಾ ಬರಲಾಗಿದೆ. 2019ರಲ್ಲಿ ಲೋಕಾಯುಕ್ತಕ್ಕೂ ದೂರು ನೀಡಿರುತ್ತೇವೆ. ಒತ್ತುವರಿ ತೆರವುಗೊಳಿಸುವಂತೆ ಲೋಕಾಯುಕ್ತ ಸಂಸ್ಥೆಯು ನೋಟೀಸು ನೀಡಿದೆ. ನಮ್ಮ ಹೋರಾಟದಿಂದ ಇಲಾಖೆಗಳು ಎಚ್ಚರಗೊಂಡಿವೆ. ಕಳೆದ 17 ವರ್ಷಗಳಿಂದ ಹೋರಾಟ ಮಾಡುತ್ತಿದ್ದು ಇದುವರೆಗೂ ಯಾವುದೇ ಆರೋಪ ಇಲ್ಲದಿದ್ದರೂ ಇದೀಗ ಅನಗತ್ಯವಾಗಿ ನಮ್ಮ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಲ್ಲಿ ಪಟಾಕಿ ಅಂಗಡಿಯಿಂದ ಹಣ ಪಡೆಯಲಾಗಿದೆ ಎಂದು ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಆದಾಯಕ್ಕೆ ನಷ್ಟ ಉಂಟು ಮಾಡಿರುವ, ಸರಕಾರಕ್ಕೆ ತೆರಿಗೆ ವಂಚಿಸಿರುವ, ಭೂ ಒತ್ತುವರಿದಾರರ ಕುತಂತ್ರದ ಫಲದಿಂದ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಮಾಡುವ ಉದ್ದೇಶದಲ್ಲಿ ಈ ರೀತಿ ಹರಿದು ಬಿಡಲಾಗಿದೆ ಎಂದು ಸದಾಶಿವ ಶೆಟ್ಟಿ ತಿಳಿಸಿದರು.

ಶೇಖರ ಹಾವಂಜೆ ಮಾತನಾಡಿ, ಆರ್‌ಟಿಐ ಕಾರ್ಯಕರ್ತರನ್ನು ಹತ್ತಿಕ್ಕುವ ಉದ್ದೇಶದಲ್ಲಿ ಭೂಗತಲೋಕದ ವ್ಯಕ್ತಿಗಳಿಂದ ಬೆದರಿಸಲಾಗುತ್ತಿದೆ. ನನಗೂ ಕೂಡ ಭೂಗತ ಲೋಕದ ವ್ಯಕ್ತಿಯೊಬ್ಬ ಕೊಲ್ಲುವ ಬೆದರಿಕೆ ಒಡ್ಡಿದ್ದು ಈಗಾಗಲೆ ವಾಯ್ಸ್ ರೆಕಾರ್ಡ್ ಮಾಡಿಕೊಂಡು ಪೊಲೀಸರಿಗೆ ದೂರು ನೀಡಲಾಗಿದೆ. ಬ್ರಹ್ಮಾವರ ತಾಲೂಕು ಹಾಗೂ ಜಿಲ್ಲೆಯಾದ್ಯಂತ ಸಾವಿರಾರು ಎಕ್ರೆ ಭೂಮಿಯನ್ನು ಅಕ್ರಮ ಮಾಡಿಕೊಂಡಿದ್ದಾರೆ. ಇದನ್ನು ತೆರವು ಮಾಡಲು ಎಲ್ಲಾ ತಾಲೂಕುಗಳಲ್ಲೂ ಆರ್‌ಟಿಐ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದೇವೆ. ಸರಕಾರಕ್ಕೆ ನಮ್ಮ ಹೋರಾಟದಿಂದ ಕೋಟ್ಯಾಂತರ ರೂ. ಲಾಭವಾಗುತ್ತಿದೆ. ಹೀಗಿದ್ದರೂ ನಮ್ಮನ್ನೇ ಕೆಟ್ಟ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಆರ್‌ಟಿಐ ಸಂಘ ಯಾವುದೇ ಪ್ರಕರಣವನ್ನು ಅರ್ಧದಲ್ಲಿ ಬಿಟ್ಟು ಬಿಡಲ್ಲ. ಉಚ್ಚನ್ಯಾಯಾಲಯದಲ್ಲಿ ಹಾಗೂ ಸರ್ವೋಚ್ಚ ನ್ಯಾಯಾಲಯದವರೆಗೂ ಹೋದ ಉದಾಹರಣೆ ನಮ್ಮ ಸಂಘದಲ್ಲಿದೆ. ಯಾರೋ ಆರೋಪ ಮಾಡಿದ ತಕ್ಷಣ ನಾವು ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಯಾರ ಅಪಪ್ರಚಾರಗಳಿಂದ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಹೇರೂರು ಹಿತರಕ್ಷಣಾ ವೇದಿಕೆ ಅಧಯಕ್ಷ ಸುಧಾಕರ ಶೆಟ್ಟಿ, ಆರ್‌ಟಿಐ ಕಾರ್ಯಕರ್ತರ ಸಂಘದ ಬಾರಕೂರು ಸತೀಶ್ ಪೂಜಾರಿ, ರವೀಂದ್ರ ಹೆಬ್ಬಾರ್, ಸದಾಶಿವ ಕುಂದಾಪುರ, ವಿನೋದ್ ಬಂಗೇರ, ಮಹೇಶ್ ಉಡುಪ ಇನ್ನಿತರರು ಉಪಸ್ಥಿತರಿದ್ದರು. ಉಮೇಶ್ ಪೂಜಾರಿ ಸ್ವಾಗತಿಸಿ ವಂದಿಸಿದರು.

Exit mobile version