Kundapra.com ಕುಂದಾಪ್ರ ಡಾಟ್ ಕಾಂ

ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರ ಬ್ಯಾಂಕ್ ಖಾತೆಗೆ ಪ್ರಗತಿನಿಧಿ ಜಮೆ ನೂತನ ಕಾರ್ಯಕ್ರಮ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕಿನ ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರ ವೈಯಕ್ತಿಕ ಖಾತೆಗೆ ಪ್ರಗತಿ ನಿಧಿ ಜಮೆ ಮಾಡುವ ನೂತನ ಕಾರ್ಯಕ್ರಮಕ್ಕೆ ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ. ಚಾಲನೆ ನೀಡಿದರು.

ಯೋಜನೆಯ ತ್ರಾಸಿ ವಲಯ ಮುಳ್ಳಿಕಟ್ಟೆ ಗ್ರಾಹಕ ಸೇವಾ ಕೇಂದ್ರದಲ್ಲಿ ಬುಧವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರಿಗೆ ಬ್ಯಾಂಕಿನ ಮೂಲಕ ಪ್ರಗತಿನಿಧಿ ಸಾಲವನ್ನು ನೀಡಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯರು ಸಂಘದಲ್ಲಿ ಬೇಡಿಕೆ ನೀಡಿದ ಪ್ರಗತಿ ನಿಧಿ ಮೊತ್ತವನ್ನು ಸದಸ್ಯರ ವೈಯಕ್ತಿಕ ಖಾತೆಗೆ ಜಮೆ ಮಾಡುವ ಕಾರ್ಯಕ್ರಮ ರಾಜ್ಯದಾದ್ಯಂತ ಅನು?ನ ಗೊಳಿಸಲಾಗುತ್ತಿದೆ. ಸಂಘದ ಸದಸ್ಯರ ಪ್ರಗತಿನಿಧಿ ವಿತರಣೆಯಲ್ಲಿ ಇನ್ನೂ ಹೆಚ್ಚಿನ ಸುರಕ್ಷತಾ ಕ್ರಮವನ್ನು ಕೈಗೊಳ್ಳುವ ಸಲುವಾಗಿ ಈ ಪ್ರಕ್ರಿಯೆಯನ್ನು ಅನು?ನಗೊಳಿಸಲಾಗುತ್ತಿದೆ. ಸಂಘದ ಸದಸ್ಯರಿಗೆ ಸರಳವಾಗಿ ಹಾಗೂ ಪಾರದರ್ಶಕವಾಗಿ ಸದಸ್ಯರ ವೈಯಕ್ತಿಕ ಖಾತೆಗೆ ಪ್ರಗತಿನಿಧಿ ಜಮೆ ಮಾಡುವುದರ ಮೂಲಕ ಆರ್ಥಿಕ ವ್ಯವಹಾರದಲ್ಲಿ ಶಿಸ್ತುಬದ್ಧವಾಗಿ ಪ್ರಗತಿಯನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ. ಸದಸ್ಯರು ಇತರ ಯಾವುದೇ ಸುರಕ್ಷಿತ ಡಿಜಿಟಲ್ ವ್ಯವಹಾರವನ್ನು ಚೆನ್ನಾಗಿ ತಿಳಿದುಕೊಂಡು ತಮ್ಮ ಖಾತೆಯಿಂದ ವ್ಯವಹಾರ ಮಾಡಬಹುದು ಎಂದು ಅವರು ಹೇಳಿದರು.

ತಾಲ್ಲೂಕಿನ ಆಂತರಿಕ ಲೆಕ್ಕಪರಿಶೋಧಕ ರಾಘವೇಂದ್ರ, ತ್ರಾಸಿ ವಲಯ ಮೇಲ್ವಿಚಾರಕ ಗಿರೀಶ್, ನಗದು ಸಂಗ್ರಾಹಕಿ ಅನಿತಾ, ಒಕ್ಕೂಟದ ಅಧ್ಯಕ್ಷೆ ವಸಂತಿ, ಸೇವಾ ಪ್ರತಿನಿಧಿ ನಾಗರತ್ನ, ಸುವಿಧಾ ಸಹಾಯಕ ಮಂಜುನಾಥ್, ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು ಉಪಸ್ಥಿತರಿದ್ದರು.

Exit mobile version