Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ದೇಗುಲದಲ್ಲಿ 2 ತಿಂಗಳಲ್ಲಿ 1.36 ಕೋಟಿ ರೂ. ಕಾಣಿಕೆ ಸಂಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಶ್ರೀ ಮೂಕಾಂಬಿಕಾ ದೇಗುಲದಲ್ಲಿ 2 ತಿಂಗಳ ಅವಧಿಯಲ್ಲಿ ಭಕ್ತರಿಂದ ಸಂಗ್ರಹವಾದ ಹುಂಡಿ ಕಾಣಿಕೆ ಹಣದ ಲೆಕ್ಕಾಚಾರ ಬುಧವಾರ ನಡೆದಿದ್ದು ದಾಖಲೆಯ 1.36 ಕೋಟಿ ರೂ. ಲಭಿಸಿದೆ. ಇದು ಕ್ಷೇತ್ರದ ದಾಖಲೆ ಮಟ್ಟದ ಹುಂಡಿ ಕಾಣಿಕೆಯಾಗಿದೆ.

ಕಳೆದೆರಡು ವರ್ಷಗಳಿಂದ ಕೊರೊನಾ ನಿಯಮಾವಳಿ ಅನುಸಾರವಾಗಿ ಭಕ್ತರ ಪ್ರವೇಶಕ್ಕೆ ದೇಗುಲಗಳಲ್ಲಿ ನಿರ್ಬಂಧ ಇದ್ದ ಹಿನ್ನೆಲೆಯಲ್ಲಿ ಆದಾಯ ಬಹಳಷ್ಟು ಕುಸಿದಿತ್ತು. ಇದೀಗ ನಿರ್ಬಂಧ ಸಡಿಲಿಕೆಯಿಂದ ಕಳೆದ 2 ತಿಂಗಳಿನಿಂದ ಕೊಲ್ಲೂರು ದೇಗುಲಕ್ಕೆ ಪ್ರತಿದಿನ ಕನಿಷ್ಠ 8 ಸಾವಿರದಷ್ಟು ಭಕ್ತರು ಆಗಮಿಸಿ ವಿವಿಧ ಹರಕೆಯೊಡನೆ ಶ್ರೀದೇವಿಗೆ ಕಾಣಿಕೆ ರೂಪದಲ್ಲಿ ಚಿನ್ನಾಭರಣ ಸಹಿತ ನಗದು ಸಮರ್ಪಿಸುತ್ತಿದ್ದಾರೆ.

ನ.10ರಂದು ಹುಂಡಿಯಲ್ಲಿ 585 ಗ್ರಾಂ ಚಿನ್ನ ಹಾಗೂ 6,400 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. 2020ನೇ ಸಾಲಿನ ನವರಾತ್ರಿಯಂದು 92,00,000 ರೂ. ಸಂಗ್ರಹವಾಗಿತ್ತು. ಚಿನ್ನ 615 ಗ್ರಾಂ ಹಾಗೂ ಬೆಳ್ಳಿ 3,500 ಗ್ರಾಂ ಸಂಗ್ರಹವಾಗಿತ್ತು. 3 ವರುಷಗಳ ಹಿಂದೆ 3 ತಿಂಗಳ ಅವಧಿಯಲ್ಲಿ 1.11 ಕೋಟಿ ರೂ. ಹುಂಡಿ ಹಣ ಸಂಗ್ರಹ ದಾಖಲಾಗಿದೆ. ಈದೀಗ ಕೊರೊನಾ ಸಂದರ್ಭದಲ್ಲಿ ಕೇವಲ 52 ದಿನಗಳಲ್ಲಿ 1.36 ಕೋಟಿ ರೂ. ಸಂಗ್ರಹವಾಗಿದೆ.

ಈ ಸಂದರ್ಭ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಮಹೇಶ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸಮಿತಿ ಸದಸ್ಯರಾದ ಗೋಪಾಲಕೃಷ್ಣ ನಾಡ, ಸಂಧ್ಯಾರಮೇಶ, ರತ್ನಾ ರಮೇಶ ಕುಂದರ್, ಉಪಕಾರ್ಯ ನಿರ್ವಹಣಾಧಿಕಾರಿ ಗೋವಿಂದ ನಾಲ್ಕ್ ಉಪಸ್ಥಿತರಿದ್ದರು.

Exit mobile version