Site icon Kundapra.com ಕುಂದಾಪ್ರ ಡಾಟ್ ಕಾಂ

ಬೀಜಾಡಿ ಮೀನುಗಾರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ೧೩,೪೯೪ ಎ ದರ್ಜೆ ಸದಸ್ಯರಿದ್ದು ರೂ. ೨೪.೨೨ ಕೋಟಿ ಠೇವಣಿ ಹೊಂದಿದೆ. ಶೇ. ೯೬.೮೭ ಸಾಲ ವಸೂಲಾತಿಯ ಸಾಧನೆ ಮಾಡಿದೆ. ರೂ. ೬೬.೨೮ ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯು ಮುಂದಿನ ದಿನದಲ್ಲಿ ಶಾಖೆಗಳಿಗೆ ಸ್ವಂತ ಸ್ಥಳ ಖರೀದಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈಗಾಗಲೇ ಸದಸ್ಯರಿಗೆ ಶೇ.೧೨ ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ. ವರದಿ ಸಾಲಿನಲ್ಲಿ ಮೃತಪಟ್ಟ ಮೀನುಗಾರರ ವಾರೀಸುದಾರರಿಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ರೂ. ೩ ಲಕ್ಷ ಪರಿಹಾರ ಧನ ಸಿಗುವಲ್ಲಿ ಸಹಕರಿಸಿದ್ದು ಹಾಗೂ ಮೀನುಗಾರ ಸದಸ್ಯರಿಗೆ ಸರ್ಕಾರದಿಂದ ೩ ಸಾವಿರ ರೂಪಾಯಿಯಂತೆ ೮೩೬ ಸದಸ್ಯರಿಗೆ ರೂ.೨೫,೦೮,೦೦೦/- ಕೋವಿಡ್ ಪರಿಹಾರವನ್ನು ಒದಗಿಸಿಕೊಟ್ಟಿದ್ದೇವೆ ಎಂದು ಬೀಜಾಡಿ ಮೀನುಗಾರರ ಸಹಕಾರಿ ಸಂಘದ ರತ್ನ ಮೊಗೇರ್ತಿ ಬೀಜಾಡಿ ಹೇಳಿದರು.

ಅವರು ಗೋಪಾಡಿ ಚಿಕ್ಕು ಅಮ್ಮ ದೇವಸ್ಥಾನದ ಬ್ರಹ್ಮಲಿಂಗೇಶ್ವರ ಸಭಾಭವನದಲ್ಲಿ ಜರುಗಿದ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಪಾಧ್ಯಕ್ಷ ಶಿವರಾಮ ಅಮೀನ್, ಅಶೋಕ ಪೂಜಾರಿ ಬೀಜಾಡಿ, ಅಣ್ಣಯ್ಯ ಪುತ್ರನ್ ಕುಂಭಾಶಿ, ಮಂಜುನಾಥ ಕುಂದರ್ ಚಾತ್ರಬೆಟ್ಟು, ಬೀಜಾಡಿ, ನಾಗೇಶ ಬೀಜಾಡಿ, ಬಿ.ಪ್ರಕಾಶ ಪೂಜಾರಿ ಬೀಜಾಡಿ, ಶೇಖರ ಕಾಂಚನ್ ಕೊಮೆ, ಜಾನಕಿ ಬಿಲ್ಲವ ಹಳೆಅಳಿವೆ, ವೆಂಕಟೇಶ ಬೀಜಾಡಿ, ರಾಜು ಮರಕಾಲ ಬೀಜಾಡಿ, ಶೇಖರ ತಿಂಗಳಾಯ ಕೊರವಡಿ, ಗೋಪಾಲ ಕೊಮೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ನಿರ್ದೇಶಕ ಮಂಜುನಾಥ ಕುಂದರ್ ಚಾತ್ರಬೆಟ್ಟು ಸ್ವಾಗತಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ರಮೇಶ ಕಾಂಚನ್ ಕಾರ‍್ಯಕ್ರಮ ನಿರ್ವಹಿಸಿದರು.

Exit mobile version