Kundapra.com ಕುಂದಾಪ್ರ ಡಾಟ್ ಕಾಂ

ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ಬೈಂದೂರು ಶಾಖೆಯ ಸ್ವಂತ ಕಟ್ಟಡ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಜನರ ವಿಶ್ವಾಸ ಗಳಿಸುವುದರಲ್ಲಿ ಹಣಕಾಸು ಸಂಸ್ಥೆಗಳ ಯಶಸ್ಸು ಅಡಗಿದೆ. ಮೂರು ದಶಕದ ಇತಿಹಾಸ ಹೊಂದಿರುವ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಇಂದು ಜನರ ವಿಶ್ವಾಸ ಗಳಿಸಿ ಮುನ್ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ| ವಂ| ಸ್ಟ್ಯಾನಿ ತಾವ್ರೊ ಹೇಳಿದರು.

ಭಾನುವಾರ ಯಡ್ತರೆಯಲ್ಲಿ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಇದರ ಬೈಂದೂರು ಶಾಖೆಯ ಸ್ವಂತ ಕಟ್ಟಡ ಉದ್ಘಾಟನೆ ಹಾಗೂ ಸ್ಥಳಾಂತರ ನೆರವೇರಿಸಿ ಮಾತನಾಡಿ ಸಂಸ್ಥೆಯ ಬೆಳೆಯುವುದರೊಂದಿಗೆ ಜನರಿಗೆ ನಗುಮೊಗದ ಸೇವೆ ನೀಡುವುದು ಅತಿ ಅಗತ್ಯ. ಮನೆಯಾಗಲಿ, ಸಂಸ್ಥೆಯಾಗಲಿ ಸ್ವಂತದ್ದಾಗಿರಲು ಎಲ್ಲರೂ ಬಯಸುತ್ತಾರೆ ಅದರಂತೆ ಬೈಂದೂರು ಶಾಖೆಯು 23 ವರ್ಷಗಳ ಬಳಿಕ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಇದರೊಂದಿಗೆ ಜನರಿಗೆ ಉತ್ತಮ ಸೇವೆ ನೀಡಲಿ ಎಂದರು.

ಬೈಂದೂರು ಹೋಲಿ ಕ್ರಾಸ್ ಚರ್ಚ್ ಧರ್ಮಗುರುಗಳಾದ ವಂ| ವಿನ್ಸೆಂಟ್ ಕುವೆಲ್ಲೋ ಆಶೀರ್ವದಿಸಿ, ಹೊಸ ಕಟ್ಟಡ ನಿರ್ಮಾಣಗೊಳ್ಳುವುದರ ಜೊತೆಗೆ ಸಂಸ್ಥೆ ಈ ಭಾಗದಲ್ಲಿ ಮತ್ತಷ್ಟು ಖ್ಯಾತಿಗಳಿಸಲಿ, ಎಲ್ಲರ ಸಹಕಾರದಿಂದ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಜಾನ್ಸನ್ ಡಿ’ಅಲ್ಮೇಡಾ ಅಧ್ಯಕ್ಷತೆ ವಹಿಸಿ ಮಾತನಾಡಿ ಕುಂದಾಪುರ ವಲಯ ಕ್ಯಾಥೋಲಿಕ ಸಭಾ ಒಟ್ಟಾಗಿ ಹಣಕಾಸು ಸೇವೆ ಒದಗಿಸುವ ಸಲುವಾಗಿ 1992ರಲ್ಲಿ ಆರಂಭಿಸಿದ ಸಂಸ್ಥೆ ನಿರಂತರವಾಗಿ ಪ್ರಗತಿ ಸಾಧಿಸುತ್ತಾ ಬಂದಿದೆ. 1.23 ಲಕ್ಷ ಬಂಡವಾಳದಿಂದ ಆರಂಭವಾದ ಸಂಸ್ಥೆ ಇಂದು 118 ಕೋಟಿಗೆ ಬಂದು ತಲುಪಿದ್ದು, ಗ್ರಾಹಕರ ವಿಶ್ವಾಸ ಗಳಿಸಿರುವುದಕ್ಕೆ ಇದು ಸಾಕ್ಷಿಯಾಗಿದೆ. ಸಂಸ್ಥೆಯ ಸದಸ್ಯರು ಹಾಗೂ ಗ್ರಾಹಕರ ಸಹಕಾರದಿಂದ ಇದು ಸಾಧ್ಯವಾಗಿದೆ. ಸಂಸ್ಥೆಯ ಮೊದಲ ಶಾಖೆಯಾದ ಬೈಂದೂರು ಶಾಖೆಯೂ ಉತ್ತಮ ವಹಿವಾಟು ನಡೆಸುತ್ತಿದೆ ಎಂದರು.

ಈ ಸಂದರ್ಭ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಸ್. ರಾಜು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ನೂತನ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕಿರಣ್ ಲೋಬೋ ಉಪಸ್ಥಿತರಿದ್ದರು. ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ, ಜೇಕಬ್ ಡಿ’ಸೋಜ, ಶಾಂತಿ ಆರ್. ಕರ್ವಾಲ್ಲೊ, ವಿನೋದ್ ಕ್ರಾಸ್ಟೊ, ಬ್ಯಾಪ್ಟಿಸ್ಟ್ ಡಯಾಸ್, ಪ್ರಕಾಶ್ ಲೋಬೊ, ವಿಲ್ಫ್ರೇಡ್ ಮಿನೇಜಸ್, ಓಝ್ಲಿನ್ ರೆಬೆಲ್ಲೊ, ತಿಯೋದರ್ ಒಲಿವೆರಾ, ಟೆರೆನ್ಸ್ ಸುವಾರಿಸ್, ವಿಲ್ಸನ್ ಡಿ’ಸೋಜ, ಸಂತೋಷ್ ಡಿ’ಸಿಲ್ವಾ, ಡೇರಿಕ್ ಡಿಸೋಜಾ ಉಪಸ್ಥಿತರಿದ್ದರು.

ಸೊಸೈಟಿಯ ಶಾಖಾ ಸಭಾಪತಿ, ನಿರ್ದೇಶಕಿ ಶಾಂತಿ ಡಾಯಸ್ ಸ್ವಾಗತಿಸಿದರು. ಪ್ರಬಾರ ಮುಖ್ಯ ಕಾರ್ಯನಿರ್ವಹಾಧಿಕಾರಿ ಮೇಬಲ್ ಡಿ’ಅಲ್ಮೇಡಾ ವಂದಿಸಿದರು.ನಿರ್ದೇಶಕರಾದ ಡಯಾನಾ ಡಿ’ಅಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು.

Exit mobile version