Kundapra.com ಕುಂದಾಪ್ರ ಡಾಟ್ ಕಾಂ

ಏಳಜಿತ ಶ್ರೀ ರಾಮಕೃಷ್ಣ ಕುಟೀರ: ಬಿಎಸ್‌ಎಫ್‌ಗೆ ಆಯ್ಕೆಗೊಂಡ ವಿದ್ಯಾ ಗೌಡಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಭಾರತೀಯ ಗಡಿ ಭದ್ರತಾ ಪಡೆಗೆ ನೇಮಕಗೊಂಡು ತರಬೇತಿ ಪಡೆಯುತ್ತಿರುವ ಏಳಜಿತ ಗ್ರಾಮದ ವಿದ್ಯಾ ಗೌಡ ಅವರನ್ನು ಇತ್ತಿಚಿಗೆ ಏಳಜಿತ ಶ್ರೀ ರಾಮಕೃಷ್ಣ ಕುಟೀರದ ವತಿಯಿಂದ ಸನ್ಮಾನಿಸಲಾಯಿತು.

ಏಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆ ಹಾಗೂ ಆತ್ಮಸ್ಥ್ಯೆರ್ಯ ಇರುತ್ತದೆ ಎಂಬುದಕ್ಕೆ ವಿದ್ಯಾ ಗೌಡ ಬಿಎಸ್‌ಎಫ್‌ಗೆ ಆಯ್ಕೆಯಾಗಿರುವುದೇ ಸಾಕ್ಷಿ. ಬದುಕಿನಲ್ಲಿ ಏನಾನ್ನಾದರೂ ಸಾಧಿಸಬೇಕೆಂಬ ಛಲವಿದ್ದರೆ, ಅದನ್ನು ಸಾಧಿಸಲು ಭಗವಂತ ಯಾವುದಾದರೂ ರೂಪದಲ್ಲಿ ಸಹಕರಿಸುತ್ತಾನೆ ಎಂದರು.

ಶ್ರೀಮದ್ಭಗವದ್ಗೀತಾ ಆಚರಣಾ ಸಮಿತಿ ಉಡುಪಿ ಜಿಲ್ಲಾಧ್ಯಕ್ಷ ಬಿ. ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಮಕೃಷ್ಣ ಕುಟೀರದ ಮೂಲಕ ಹಲವಾರು ವಿದ್ಯಾರ್ಥಿಗಳು ಇಂದು ಉನ್ನತ ವ್ಯಾಸಂಗವನ್ನೂ ಪೂರೈಸಿರುವುದು ಗಮನಾರ್ಹ ಸಾಧನೆ. ವಿದ್ಯಾರ್ಥಿ ವೇತನ ಪಡೆದು ಉತ್ತಮ ಶಿಕ್ಷಣ ಉದ್ಯೋಗ ಪಡೆದುಕೊಳ್ಳುವುದರ ಜತೆಗೆ ಇತರರಿಗೂ ಸಹಕಾರ ಮಾಡುವ ಗುಣ ಬೆಳಸಿಕೊಂಡಾಗ ಸಮಾಜದ ಎಲ್ಲರಿಗೂ ಶಿಕ್ಷಣ ದೊರೆಯಲಿದೆ ಎಂದರು.

ಈ ಸಂದರ್ಭ ಯಶೋದಾ ಎಂ. ಅಡಿಗ ಉಪಸ್ಥಿತರಿದ್ದರು. ಎಳಜಿತ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ, ಶಿಕ್ಷಕಿ ಜ್ಯೋತಿ ಹೆಚ್. ಎಸ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version