Kundapra.com ಕುಂದಾಪ್ರ ಡಾಟ್ ಕಾಂ

ಕಾರಂತ ಹುಟ್ಟೂರ ಪ್ರಶಸ್ತಿಗೆ ಮುಂಬೈನ ರಂಗನಟ ಸದಾನಂದ ಸುವರ್ಣ ಆಯ್ಕೆ

News sep21_bmr1ಕುಂದಾಪುರ: ಮುಂಬೈನ ರಂಗನಟ, ನಿರ್ದೇಶಕ, ರಂಗ ಸಂಯೋಜಕ, ಟಿ.ವಿ, ಸೀರಿಯಲ್, ಸಾಕ್ಷ್ಯಚಿತ್ರ ಮತ್ತು ಚಲನಚಿತ್ರಗಳ ನಿರ್ಮಾಪಕ, ನಾಟಕ, ಕಥೆ, ಕಾದಂಬರಿಗಳ ಲೇಖಕ, ಪ್ರಕಾಶಕ, ಹಲವು ಪ್ರತಿಷ್ಠಾನಗಳಿಗೆ ಪ್ರಾಯೋಜಕ, ನಾಟಕರಂಗಕಲೆಯ ತರಬೇತಿಗಾರನಾಗಿ ಸೇವೆ ಸಲ್ಲಿಸುತ್ತಿರುವ ಸದಾನಂದ ಸುವರ್ಣ ಅವರಿಗೆ ಈ ಬಾರಿಯ ಕಾರಂತ ಹುಟ್ಟೂರ ಪ್ರಶಸ್ತಿಗೆ ಆಯ್ಕೆ ಸಮಿತಿ ಆಯ್ಕೆ ಮಾಡಿರುವುದಾಗಿ ಕೋಟತಟ್ಟು ಪಂಚಾಯಿತಿ ಅಧ್ಯಕ್ಷರು ಮತ್ತು ಕಾರಂತ ಪ್ರತಿಷ್ಠಾನದ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ತಿಳಿಸಿದರು.

ಅವರು ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಕಾರಂತರ ಸಮಕಾಲೀನರಾದ ಸದಾನಂದ ಸುವರ್ಣರ ಈ ಬಾರಿಯ ಕಾರಂತ ಹುಟ್ಟೂರ ಪ್ರಶಸ್ತಿಗೆ ಸೂಕ್ತ ವ್ಯಕ್ತಿ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಕನ್ನಡ, ತುಳು, ಬೆಂಗಾಲಿ ಭಾಷೆಗೆ ಸಂಬಂಧಪಟ್ಟ ಹಲವು ಸಾಕ್ಷ್ಯಚಿತ್ರಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ರೂಪ ದರ್ಶನ, ಗುಡ್ಡದ ಭೂತ, ಕಣ್ಣು ತೆರೆಯಿತು, ಕುರುಡನ ಸಂಗೀತ, ವಿಷಮ ಗಳಿಗೆ ಮೊದಲಾದ ಧಾರವಾಹಿಗಳಿಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಘಟಶ್ರಾದ್ಧ ಚಿತ್ರ ನಿರ್ಮಾಣಕ್ಕಾಗಿ ಸುವರ್ಣ ಅವರಿಗೆ ಸ್ವರ್ಣ ಕಮಲ ಪ್ರಶಸ್ತಿ ಒಲಿದು ಬಂದಿದೆ ಅಲ್ಲದೇ ಕಾರಂತರ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಿದ ಹಿರಿಮೆ ಕೂಡ ಇವರಿಗೆ ಸಲ್ಲುತ್ತದೆ. ಈ ಹಿನ್ನಲೆಯಲ್ಲಿ ಆಯ್ಕೆ ಸಮಿತಿಯ ಆಯ್ಕೆಯ ಮೇರೆ ಅಕ್ಟೋಬರ್ 10ರಂದು ಕೋಟ ಕಾರಂತ ಥೀಂ ಪಾರ್ಕನಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದರು.

ಈ ಬಾರಿ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಟ್ರಸ್ಟ್(ರಿ.) ಉಡುಪಿ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ.) ಕೋಟ ಸಾರಥ್ಯದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವದ ಅಂಗವಾಗಿ ಅಕ್ಟೋಬರ್ 1 ರಿಂದ 10ರ ವರೆಗೆ ಸಾಹಿತ್ಯಿಕ ಸಾಂಸ್ಕೃತಿಕ ದಿಬ್ಬಣ ಚಿತ್ತಾರ 2015 ಕಾರ್ಯಕ್ರಮಗಳು ನಡೆಯಲಿದೆ. ಅಕ್ಟೋಬರ್ 1ರಂದು ಮಹಿಳಾ ಸಾಹಿತ್ಯ ಸಾಮವೇಶ ಚೇತನ, 2ರಂದು ನೃತ್ಯ ಮತ್ತು ನಾಟಕ ಕಾರ್ಯಕ್ರಮ, 3ರಂದು ತಾಳಮದ್ದಳೆ, 4ರಂದು ಪುಟಾಣಿಗಳ ಸಮಾವೇಶ ಅಕ್ರೂಟ್, 5ರಂದು ಉಡುಪಿ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಮಾವೇಶ ಪ್ರೇರಣ, 6ರಂದು ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಮ್ಮಟ, 7ರಂದು ಪ್ರಗತಿಪರ ಸಮಾವೇಶ ಒತ್ತಾಸೆ, 8ರಂದು ಉರಗ ಪ್ರದರ್ಶನ- ಪ್ರಾತ್ಯಕ್ಷಿಕೆ ಹಾವು ನಾವು, 9ರಂದು ಪಂಚಾಯಿತಿ ಹಬ್ಬ ಮತ್ತು 10ರಂದು ಕಾರಂತರ ಹುಟ್ಟೂರ ಪ್ರಶಸ್ತಿ ಪ್ರಧಾನ , ಯಕ್ಷನಾಟ್ಯ ವೈಭವ ಸಂಗೀತ ಸುಧೆ ಚಿತ್ತ ಚಿತ್ತಾರ ನಡೆಯಲಿದೆ. ಅಲ್ಲದೇ ಅಂತರಾಷ್ಟ್ರೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ ಕುಂದಾಪುರ ಅವರಿಂದ ಕಾರ್ಟೂನ್ ಹಬ್ಬ ಮತ್ತು ಕಾರಂತ ಮಹಾಸಾಗರ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಸದಸ್ಯ ಸುಬ್ರಾಯ ಆಚಾರ್ಯ ಮಣೂರು, ಕೋಟತಟ್ಟು ಪಂಚಾಯಿತಿ ಸದಸ್ಯ ಸತೀಶ್ ಬಾರಿಕೇರಿ ಮತ್ತು ಥೀಂ ಪಾರ್ಕ ಮಾಧ್ಯಮ ಪ್ರಚಾರ ಸಂಚಾಲಕ ಅಶ್ವಥ್ ಆಚಾರ್ಯ ಯಡಬೆಟ್ಟು ಉಪಸ್ಥಿತರಿದ್ದರು.

Exit mobile version