ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಲ್ಲಾ ಧರ್ಮಗಳ ಹಬ್ಬದ ಆಚರಣೆಯ ಹಿಂದೆಯೂ ಉತ್ತಮವಾದ ಸಂದೇಶವಿದೆ. ಹಬ್ಬ, ಉತ್ಸವಗಳ ಆಚರಣೆಯ ಸಂದರ್ಭಗಳಲ್ಲಿ ಕಷ್ಟದಲ್ಲಿರುವವರಿಗೆ ಆದಷ್ಟು ಸಹಾಯ ಮಾಡುವ ಕೆಲಸ ಮಾಡಬೇಕು ಎಂದು ಕುಂದಾಪುರ ಹೋಲಿ ರೋಸರಿ ಚರ್ಚ್’ನ ಸಹಾಯಕ ಧರ್ಮಗುರು ವಂ| ವಿಜಯ್ ಜಾಯ್ಸನ್ ಡಿ’ಸೋಜಾ ಹೇಳಿದರು.
ಅವರು ಶುಕ್ರವಾರ ಕೋಟೇಶ್ವರ ಸಮೀಪದ ಸುಣ್ಣಾರಿಯ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ 2021ರ ಕ್ರಿಸ್ಮಸ್ ಆಚರಣೆ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವ ಗುಣ, ಎಲ್ಲಾ ಧರ್ಮವನ್ನು ಪ್ರೀತಿಸುವ ವಿಶಾಲ ಮನಸ್ಸು ಈ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಮಾತನಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸಲುವಾಗಿ ಎಲ್ಲಾ ಧರ್ಮಗಳ ಹಬ್ಬದ ಆಚರಣೆಯನ್ನು ವಿದ್ಯಾರ್ಥಿಗಳ ಮುಖಾಂತರ ಮಾಡುತ್ತಿದ್ದೇವೆ. ದೇಶದಲ್ಲಿ ಜಾತಿ, ಧರ್ಮಗಳ ಹೆಸರಿನಲ್ಲಿ ನಮ್ಮನ್ನಮ್ಮಲ್ಲಿ ಹೊಡೆದಾಟ ನಡೆಯುತ್ತಿದೆ. ಯಾವ ಧರ್ಮದಲ್ಲಿಯೂ ಇನ್ನೊಂದು ಧರ್ಮವನ್ನು ಅನ್ಯಾಯ ಮಾಡಲು ಹೇಳುದಿಲ್ಲ. ಎಲ್ಲಾ ಧರ್ಮದಲ್ಲಿಯೂ ಎಲ್ಲರಿಗೂ ಒಳ್ಳೇದನ್ನು ಮಾಡು, ಒಳ್ಳೇಯದನ್ನು ಬಯಸುವ ಸಂದೇಶವಿದೆ ಎಂದರು.
ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯ ಕೋರಿದರು.
ಅಧ್ಯಾಪಕ ರೋಹನ್ ಕಾರ್ಯಕ್ರಮ ವನ್ನು ನಿರೂಪಿಸಿದರು. ವಿದ್ಯಾರ್ಥಿ ಸೀತಾಲ್ ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು. ಕಾಲೇಜ್ ವಿದ್ಯಾರ್ಥಿಗಳಿಂದ ಕ್ರಿಸ್ಮಸ್ ಪ್ರಯುಕ್ತ ಮನೋರಂಜನೆ ಕಾರ್ಯಕ್ರಮ ನಡೆಯಿತು.
