Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ವರಲಕ್ಷ್ಮೀ ಚಾರಿಟೇಬಲ್‌‌ ಟ್ರಸ್ಟ್‌ನಿಂದ ಏಳಜಿತ ಶಾಲೆಗೆ ರೂ.1.60 ಲಕ್ಷ ಮೌಲ್ಯದ ಪೀಠೋಪಕರಣ ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು:
ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಮಕ್ಕಳ ಸಂಖ್ಯೆ ಕುಸಿಯುತ್ತಿದೆ ಎಂಬುದು ವಾಸ್ತವಾದರೂ ಊರವರು ಹಳೆವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಸರಕಾರಿ ಶಾಲೆಯನ್ನು ಉನ್ನತೀಕರಿಸಲು ಸಾಧ್ಯವಿದೆ ಎಂದು ಉದ್ಯಮಿ, ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟೀ ಡಾ. ಗೋವಿಂದ ಬಾಬು ಪೂಜಾರಿ ಅವರು ಹೇಳಿದರು.

ಅವರು ಯಳಜಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೂ.1,60,000 ಮೌಲ್ಯದ ಪೀಠೋಪಕರಣ ಹಸ್ತಾಂತರಿಸಿ ಮಾತನಾಡಿ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಮನಸ್ಸಿದ್ದರೆ ಯಾವುದೇ ರೂಪದಲ್ಲಾದರೂ ಸೇವೆ ಮಾಡಬಹುದು. ನಾವು ಮಾಡುವ ಉತ್ತಮ ಕಾರ್ಯಗಳಿಗೆ ಕೆಲವರು ತಡೆಯೊಡ್ಡಿದರೂ ಅದು ಹಲವರಿಂದ ಪ್ರಶಂಸೆಗೊಳಪಡುತ್ತದೆ ಎಂದರು.

ಎಸ್ಡಿಎಂಸಿ ಅಧ್ಯಕ್ಷ ಸುಕುಮಾರ ಗೌಡ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಸದಸ್ಯ ಕುಪ್ಪಯ್ಯ ಪೂಜಾರಿ, ಎಸ್ಡಿಎಂಸಿ ಮಾಜಿ ಅಧ್ಯಕ್ಷೆ ಇಂದಿರಾ, ಕೆಸರಿ ಯುವಕ ಮಂಡಲ ದ ಅಧ್ಯಕ್ಷ ರಾಘವೇಂದ್ರ ಪೂಜಾರಿ, ರಮೇಶ್ ಪೂಜಾರಿ, ಗ್ರಾ.ಪಂ ಮಾಜಿ ಅಧ್ಯಕ್ಷ ಮಹಾಬಲ ಕೊಠಾರಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಪದ್ಮಾವತಿ ಸ್ವಾಗತಿಸಿ, ಸಹಶಿಕ್ಷಕಿ ಅನಿತಾ ವಂದಿಸಿದರು. ಸಹಶಿಕ್ಷಕ ಸದಾಶಿವ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜ್ಯೋತಿ ಹೆಚ್. ಎಸ್. ಕಾರ್ಯಕ್ರಮ ನಿರೂಪಿಸಿದರು.

Exit mobile version