Kundapra.com ಕುಂದಾಪ್ರ ಡಾಟ್ ಕಾಂ

ಸ್ವಾರ್ಥ ರಹಿತ ಸಹಕಾರ ತತ್ವದ ಅಳವಡಿಕೆಯಿಂದ ಸಂಘ ಸದೃಢ: ಗಿಳಿಯಾರು ಶ್ರೀಧರ ಸೋಮಯಾಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಸ್ವಾರ್ಥ ರಹಿತ ಸಹಕಾರ ತತ್ವದ ಅಳವಡಿಕೆಯಿಂದ ಸಹಕಾರಿ ಸಂಸ್ಥೆಗಳು ಸದೃಢವಾಗಿ ಬೆಳವಣಿಗೆ ಹೊಂದಲು ಸಾಧ್ಯವಿದೆ. ಸಹಕಾರ ಮನೋಭಾವ ಹಾಗೂ ಅತ್ಯುತ್ತಮ ಸೇವೆ ಮೂಲಕ ಯಶಸ್ವಿಯಾಗಿ ೧೦೦ ವರ್ಷ ಪೂರ್ಣಗೊಳಿಸಿದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಇಂತಹ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆ ಮತ್ತಷ್ಟು ಬೆಳೆದು ಜನರಿಗೆ ಇದರಿಂದ ಪ್ರಯೋಜನ ದೊರೆಯುವಂತಾಗಲಿ ಎಂದು ಹಿರಿಯ ಸಹಕಾರಿ ಗಿಳಿಯಾರು ಶ್ರೀಧರ ಸೋಮಯಾಜಿ ಹೇಳಿದರು.

ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದ ಬೈಲೂರು ಮಂಜುನಾಥ ಶೆಣೈ ಸಭಾಭವನದಲ್ಲಿ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನವೀಕೃತ ವೆಬ್‌ಸೈಟ್‌ನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿಯ ಅಧ್ಯಕ್ಷ ಎಚ್.ಗಣೇಶ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಗಂಗೊಳ್ಳಿ-೨ ಶಾಖೆಯ ವ್ಯವಸ್ಥಾಪಕ ಸುಧಾಂಶು ಸೌರಭ್ ಶುಭ ಹಾರೈಸಿದರು. ವೆಬ್‌ಸೈಟ್ ವಿನ್ಯಾಸಕಾರ ದೀಪಕ್ ವೆಬ್‌ಸೈಟ್ ಬಗ್ಗೆ ಮಾಹಿತಿ ನೀಡಿದರು. ಸಹಕಾರಿಯ ಉಪಾಧ್ಯಕ್ಷ ಜಿ. ವಿಶ್ವನಾಥ ಆಚಾರ್ಯ, ನಿರ್ದೇಶಕರು, ಸಿಬ್ಬಂದಿಗಳು, ಪಿಗ್ಮಿ ಸಂಗ್ರಹಕಾರರು ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಕ ಗಣೇಶ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version