Kundapra.com ಕುಂದಾಪ್ರ ಡಾಟ್ ಕಾಂ

ಮಾರ್ಚ್ ಅಂತ್ಯದೊಳಗೆ 110 ಶಾಖೆ, ಸ್ವ-ಸಹಾಯ ಗುಂಪು ವಿಸ್ತರಣೆಯ ಗುರಿ: ಡಾ. ಎಂ. ಎನ್. ರಾಜೇಂದ್ರ ಕುಮಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶಿರೂರು ಪ್ರಭು ಕಾಂಪ್ಲೇಕ್ಸ್‌ನಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ೧೦೭ನೇ ನೂತನ ಶಿರೂರು ಶಾಖೆಯನ್ನು ಸ್ಥಳೀಯ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿದರು.

ನಂತರ ಪೇಟೆ ಶ್ರೀ ವೆಂಕಟರಮಣ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿರೂರು ಶಾಖೆಯನ್ನು ಉದ್ಘಾಟಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಪಟ್ಟಣ ವ್ಯಾಪ್ತಿಯ ಜೊತೆಗೆ ಗ್ರಾಮೀಣ ಭಾಗದಲ್ಲಿ ಸಹಕಾರಿ ಕ್ಷೇತ್ರದ ಸಹಕಾರದಿಂದ ಸ್ವಾವಲಂಬನೆಯ ಬದುಕು ಕಾಣುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ನವೋದಯ ಸ್ವ-ಸಹಾಯ ಸಂಘಗಳು ಅನೇಕ ಕುಟುಂಬಗಳು ಸ್ವಾವಲಂಬಿ ಬದುಕಿನ ಭರವಸೆಯಾಗಿದೆ ಎಂದ ಶಾಸಕರು, ರಾಷ್ಟ್ರೀಕೃತ ಬ್ಯಾಂಕ್‌ಗಳಿಗೂ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತ ಈ ಸಂಸ್ಥೆಯ ಇನ್ನಷ್ಟು ಹೊಸ ಶಾಖೆಗಳು ಆರಂಭಗೊಳ್ಳಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಸ್ವಾವಲಂಬಿ ಜೀವನಕ್ಕೆ ಸಹಕಾರಿ ಕ್ಷೇತ್ರದಲ್ಲಿ ಪ್ರಥಮ ಆದ್ಯತೆ ನೀಡಲಾಗುತ್ತದೆ. ಹಾಗೆಯೇ ಬ್ಯಾಂಕಿಂಗ್ ಕ್ಷೇತ್ರದ ಆರಂಭ ಆ ಊರಿನ ಅಭಿವೃದ್ದಿ ಸಂಕೇತವಾಗಿದೆ. ಗ್ರಾಮೀಣ ಭಾಗದ ಹಣಕಾಸು ಬಾಂಧವ್ಯ ಹಾಗೂ ಭರವಸೆ ಆಲ್ಲಿನ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳದ್ದಾಗಿದೆ. ಸರ್ಕಾರದ ಸಾಲಮನ್ನಾ, ಬಡ್ಡಿಮನ್ನಾ ಮುಂತಾದ ಯೋಜನೆಗಳು ಪಾರದರ್ಶಕ ಸೇವೆಯ ಮೂಲಕ ನೇರವಾಗಿ ಜನರಿಗೆ ತಲುಪುತ್ತಿದೆ. ಹೈನುಗಾರಿಕೆ ಮಾಡುವ ಗುಂಪುಗಳಿಗೆ ರೂ.20 ಲಕ್ಷ ಸಾಲ ನೀಡಲಾಗುವುದು. ಜತೆಗೆ ಮಾರ್ಚ್ ಅಂತ್ಯದೊಳಗೆ 110 ಶಾಖೆ ಆರಂಭ ಹಾಗೂ ಎಂಟು ಜಿಲ್ಲೆಗಳಲ್ಲಿ ನಲವತ್ತು ಸಾವಿರ ಗುಂಪು ರಚನೆ, ಸ್ವ-ಸಹಾಯ ಗುಂಪು ವಿಸ್ತರಣೆ ಗುರಿಯಿದೆ ಎಂದ ಅಧ್ಯಕ್ಷರು, ಶಿರೂರು ಜನತೆ ಹೃದಯ ಶ್ರೀಮಂತರು. ಕಾರಣ ಶಾಖೆ ಉದ್ಘಾಟನೆಗೆ ಮೊದಲೇ ರೂ.10 ಕೋಟಿ ಠೇವಣಿ ಸಂಗ್ರಹವಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಪರವಾಗಿ ಇಲ್ಲಿನ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ನೂತನ ಶಾಖೆಯ ಗಣಕೀರಣ ವಿಭಾಗ ಉದ್ಘಾಟಿಸಿದರು. ಶಿರೂರು ಗ್ರಾಪಂ ಅಧ್ಯಕ್ಷೆ ಜಿ. ಯು. ದಿಲ್‌ಶಾದ್ ಬೇಗಂ, ನೂತನ ಶಾಖೆಯ ಭದ್ರತಾ ಕೊಠಡಿ ಉದ್ಘಾಟಿಸಿದರು. ಕಟ್ಟಡದ ಮಾಲಕ ಬಾಲಚಂದ್ರ ಪ್ರಭು ಹಾಗೂ ಶಿರೂರು ಶಾಖಾ ವ್ಯವಸ್ಥಾಪಕ ರಾಜೇಶ ಇವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ., ನಿರ್ದೇಶಕ ಹರಿಶ್ಚಂದ್ರ ಹಾಗೂ ಪರಿಸರದ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಬ್ಯಾಂಕ್ ನಿರ್ದೇಶಕರಾದ ಎಸ್. ರಾಜು ಪೂಜಾರಿ ಸ್ವಾಗತಿಸಿ, ಮೊಳವಳ್ಳಿ ಮಹೇಶ್ ಹೆಗ್ಡೆ ವಂದಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

Exit mobile version